ಕಲಬುರಗಿಯಲ್ಲಿ 50ಲಕ್ಷ ಮೌಲ್ಯದ ಗಾಂಜಾ ವಶ
ಕಲಬುರಗಿ, ಅಕ್ಟೋಬರ್, 30: ಅಕ್ರಮವಾಗಿ ಗಾಂಜಾ ಬೇಸಾಯ ಮಾಡುತ್ತಿದ್ದ ಜಮೀನಿನ ಮೇಲೆ ಏಕಾಏಕಿ ದಾಳಿ ನಡೆಸಿದ ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು ಸುಮಾರು 50 ಲಕ್ಷ ಮೊತ್ತದ ಗಾಂಜಾವನ್ನು ಅಕ್ಟೋಬರ್ 29ರ ಗುರುವಾರದಂದು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ಅಂತಾವರಂ ಗ್ರಾಮದ ಪಟ್ಟಾ ಜಮೀನಿನಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಜಮೀನಿನ ಒಡೆಯ ಸೇರಿದಂತೆ ಒಟ್ಟು ಎಂಟು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಲಬುರ್ಗಿ ಜಂಟಿ ಆಯುಕ್ತ ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.[ದೊಡ್ಡಬಳ್ಳಾಪುರದಲ್ಲಿ 5 ಕೋಟಿ ಮೌಲ್ಯದ ರಕ್ತ ಚಂದನ ವಶ]

ಈ ಕುರಿತು ಮಾಹಿತಿ ನೀಡಿದ ಕಲಬುರ್ಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಶ್ರೀನಿವಾಸ್ ಮೂರ್ತಿ, 'ಆರೋಪಿಯು ತನ್ನ ತೋಟದ ತೊಗರಿ, ಅರಿಶಿಣ ಹಾಗೂ ಕಬ್ಬು ಬೆಳೆಯ ಮಧ್ಯೆ ಸುಮಾರು 10 ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದರು. ಮಾರುಕಟ್ಟೆಯಲ್ಲಿ ಕೆ.ಜಿ ಗಾಂಜಾಗೆ 5,000ರೂ ಇದೆ. ಇದನ್ನು ಗೊತ್ತುಮಾಡಿಕೊಂಡ ಈತ ಹೆಚ್ಚಿನ ಹಣಗಳಿಸುವ ದುರದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಅಬಕಾರಿ ಉಪ ಆಯುಕ್ತ ಸೂರ್ಯಕಾಂತ ಸುಣಗಾರ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 40 ಕ್ವಿಂಟಲ್ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರವೂ ದಾಳಿ ನಡೆಸಿ ಜಮೀನನ್ನು ಸಂಪೂರ್ಣವಾಗಿ ನಮ್ಮ ಸುಪರ್ದಿಗೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.












Click it and Unblock the Notifications