New Railway Line: ಕಡೂರು-ಚಿಕ್ಕಮಗಳೂರು-ಬೇಲೂರು ಹೊಸ ರೈಲು ಮಾರ್ಗದ ಮಹತ್ವದ ಅಪ್ಡೇಟ್
ಬೆಂಗಳೂರು: ಭಾರತೀಯ ರೈಲ್ವೆ ವತಿಯಿಂದ ದೇಶದ ಇತರ ಭಾಗಗಳಂತೆ ಕರ್ನಾಟಕದಲ್ಲೂ ಹೊಸ ರೈಲು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯದ ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಖುಷಿ ಸುದ್ದಿ ನೀಡಿದೆ. ಕಡೂರು-ಚಿಕ್ಕಮಗಳೂರು-ಬೇಲೂರು ಹೊಸ ರೈಲು ಮಾರ್ಗದ (Kadur-Chikkamagaluru-Belur Railway Line) ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಒಂದಷ್ಟು ಕೆಲಸಗಳು ಬಾಕಿ ಉಳಿದಿದ್ದು, ಶೀಘ್ರವೇ ಮಾರ್ಗ ಸಂಪೂರ್ಣವಾಗಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ತಿಳಿಸಿದೆ.
ಕಡೂರು-ಚಿಕ್ಕಮಗಳೂರು-ಬೇಲೂರು ಹೊಸ ರೈಲು ಮಾರ್ಗವು ಒಟ್ಟು 68 ಕಿಲೋ ಮೀಟರ್ನ ಯೋಜನೆಯಾಗಿದೆ. ಇದರಲ್ಲಿ ಈಗಾಗಲೇ 56 ಕಿಲೋ ಮೀಟರ್ ಮಾರ್ಗದಲ್ಲಿ ರೈಲುಗಳು ಸಂಚಾರ ಕಾರ್ಯಾರಂಭಗೊಂಡಿದೆ. ಈ ಮೂಲಕ ಚಿಕ್ಕಮಗಳೂರಿನಂತಹ ದುರ್ಗಮ ಪ್ರದೇಶದಲ್ಲಿ ರೈಲು ಸೇವೆ ಲಭಿಸಿದಂತಾಗಿದೆ. ಈ ಭಾಗದ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದೆ.

ಬಾಕಿ ಉಳಿದ ಕಾಮಗಾರಿಯ ಕೆಲಸ ಚುರುಕು
ರೈಲ್ವೆ ಸಚಿವಾಲಯದ ಪ್ರಕಾರ, ಈ ಮಾರ್ಗದಲ್ಲಿ ಬಾಕಿ ಉಳಿದ ಕಾಮಗಾರಿಯಲ್ಲಿ ಹಳಿ ಹಾಕುವ ಕೆಲಸ ಪ್ರಗತಿಯಲ್ಲಿದೆ. ನಿರಂತರವಾಗಿ ಕೆಲಸ ನಡೆಯುತ್ತಿದ್ದು, ಸೇತುವೆ ನಿರ್ಮಾಣ ಕಾರ್ಯ ಮುಗಿದಿದೆ. ಭಾರತದ ಗ್ರಾಮೀಣ ಭಾಗ ಹಾಗೂ ದುರ್ಗಮ ಪ್ರದೇಶಗಳಲ್ಲಿ ರೈಲು ಜಾಲ ಮಾರ್ಗ ತಲೆ ಎತ್ತಿವೆ. ಇದರಿಂದ ಈವರೆಗೆ ಇದ್ದ ರೈಲು ಸಾರಿಗೆ ಸಮಸ್ಯೆ ಬಗೆಹರಿಯುತ್ತಾ ಬಂದಿದ್ದು, ಆಯಾ ಭಾಗದ ಜನರ ರೈಲಿಗೆ ಸಾರಿಗೆ ಬೇಡಿಕೆಗಳು ಈಡೇರಿಕೆ ಆಗುತ್ತಿವೆ.
ಹೊಸ ಮಾರ್ಗದ ಪ್ರಯೋಜನಗಳು
ಇದು ಚಿಕ್ಕಮಗಳೂರಿನ ಬೆಟ್ಟದ ಕಾಫಿ ಬೆಳೆಯುವ ಒಳಾಂಗಣದ ಪ್ರದೇಶಗಳಿಗೂ ಸೇವೆ ಲಭ್ಯವಾಗುತ್ತದೆ. ಯುನೆಸ್ಕೋ ತಾಣವಾದ ಹಾಸನದ ಬೇಲೂರಿನ ಪ್ರಾಚೀನ ಹೊಯ್ಸಳ ದೇವಾಲಯಗಳಿಗೆ ಸುಧಾರಿತ ಸಂಪರ್ಕ ಸಾಧ್ಯವಾಗುತ್ತದೆ. ಪ್ರವಾಸೋದ್ಯಮ, ಕೈಗಾರಿಕೆಗೆ ಉತ್ತೇಜನ ಜೊತೆಗೆ ಮುಖ್ಯವಾಗಿ ರೈಲು ಸಾರಿಗೆ ವ್ಯವಸ್ಥೆ ಸುಧಾರಣೆ ಆಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ರೈಲು ಯೋಜನೆಯು ಪ್ರಮುಖ ಪಾತ್ರವಹಿಸಲಿದೆ. ಚಿಕ್ಕಮಗಳೂರು ಹಾಗೂ ಬೇಲೂರಿನಲ್ಲಿ ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಕ್ಕಂತಾಗಿದೆ. ಒಟ್ಟಾರೆ ಈ ಯೋಜನೆಯು ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕದ ರೈಲ್ವೆ ಜಾಲ ವಿಸ್ತರಣೆಗೆ ಕೊಡುಗೆ ನೀಡಿದೆ.
ಚಿಕ್ಕಮಗಳೂರು-ತಿರುಪತಿ ರೈಲು ಸೇವೆ
ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚಿನ ಕೆಲಸಗಳು ಬಾಕಿ ಇವೆ ಎನ್ನಲಾಗಿದೆ. ಚಿಕ್ಕಮಗಳೂರು ರೈಲು ನಿಲ್ದಾಣದಲ್ಲಿ ವಿದ್ಯುದೀಕರಣ ಮುಗಿದಿದೆ. 2025ರಿಂದ ಇದೇ ಮಾರ್ಗದಲ್ಲಿ ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇವೆಯು ಆರಂಭವಾಗಿದೆ. ಈ ಮಾರ್ಗದಲ್ಲಿ ಹೊಸ ರೈಲುಗಳನ್ನು ಪರಿಚಯಿಸುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. ಹೆಚ್ಚು ರೈಲುಗಳ ಸಂಪರ್ಕ ದೊರೆತಾಗಲೇ ಕೊಟ್ಯಾಂತರ ರೂಪಾಯಿ ಹಣ ವ್ಯಯಿಸಿ ಮಾಡಿದ ಯೋಜನೆ ಸಾರ್ಥಕವಾಗುತ್ತದೆ. ಹೆಚ್ಚಿನ ಜನರಿಗೆ ಈ ಸೇವೆ ಸಿಗುತ್ತದೆ. ಇಲ್ಲಿಂದ ಬೇರೆ ಬೇರೆ ಭಾಗಗಳಿಗೆ ಸಂಪರ್ಕ ಸಿಕ್ಕಂತಾಗುತ್ತದೆ ಎಂದು ಜನರು ಒತ್ತಾಯಿಸಿದ್ದಾರೆ. ಕಡೂರು-ಚಿಕ್ಕಮಗಳೂರು-ಬೇಲೂರು ಮಾರ್ಗ ಸಂಪೂರ್ಣವಾಗಿ ಮುಗಿಯುತ್ತಿದ್ದಂತೆ ಈ ವರ್ಷಾಂತ್ಯಕ್ಕೆ ಮತ್ತಷ್ಟು ರೈಲುಗಳ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ.












Click it and Unblock the Notifications