ಕರ್ನಾಟಕ ವಿರುದ್ಧದ ಕೇರಳದ ಆರೋಪಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯೆ
ಬೆಂಗಳೂರು, ಫೆಬ್ರವರಿ 23: ಕೇರಳದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ-ದಕ್ಷಿಣ ಕನ್ನಡ ನಡುವಿನ ಸಂಪರ್ಕಿಸುವ ಒಂಬತ್ತು ರಸ್ತೆಗಳನ್ನು ಬಂದ್ ಮಾಡಿರುವುದನ್ನು ಆಕ್ಷೇಪಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರಕ್ಕೆ ಸಚಿವ ಕೆ. ಸುಧಾಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಯಾವ ರಾಜ್ಯವೂ ಗಡಿಗಳನ್ನು ಬಂದ್ ಮಾಡುವಂತಿಲ್ಲ. ಗಡಿಗಳನ್ನು ಬಂದ್ ಮಾಡಿ, ವಾಹನಗಳ ಮೇಲೆ ನಿರ್ಬಂಧ ವಿಧಿಸಿರುವುದು ಮಾರ್ಗಸೂಚಿಗಳ ಉಲ್ಲಂಘನೆ ಎಂದು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಪಿಣರಾಯಿ ಆರೋಪಿಸಿದ್ದರು.
ಕರ್ನಾಟಕವು ಗಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಕೇರಳದ ಜನರು ತುರ್ತು ಅಗತ್ಯಗಳಿಗೆ ತೆರಳುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಕರ್ನಾಟಕ ಸರ್ಕಾರವು ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಅವರು ದೂರಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಅಂತಹ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ.

ನಿರ್ಬಂಧ ವಿಧಿಸಿಲ್ಲ
'ಕರ್ನಾಟಕ ಮತ್ತು ಕೇರಳ ನಡುವಿನ ಅಂತಾರಾಜ್ಯ ಪ್ರಯಾಣವನ್ನು ಕರ್ನಾಟಕ ನಿರ್ಬಂಧಿಸಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರಯಾಣಿಕರು ಕಡ್ಡಾಯವಾಗಿ ಕನಿಷ್ಠ 72 ಗಂಟೆಗಳ ಮುನ್ನ ಆರ್ಟಿ-ಪಿಸಿಆರ್ ಪರೀಕ್ಷೆ ವರದಿ ನೆಗೆಟಿವ್ ವರದಿಯನ್ನು ನೀಡುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ' ಎಂದು ಸುಧಾಕರ್ ತಿಳಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ?
ಈ ಸಂಬಂಧ ಫೆ. 16ರಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯಲ್ಲಿನ ಅಂಶವನ್ನು ಅವರು ಪ್ರಮುಖವಾಗಿ ಗುರುತಿಸಿ ತೋರಿಸಿದ್ದಾರೆ. ಕೇರಳದಿಂದ ಬರುವ ಹಾಗೂ ಹೋಟೆಲ್. ರೆಸಾರ್ಟ್, ಹಾಸ್ಟೆಲ್, ಹೋಮ್ಸ್ಟೇಗಳು, ಛತ್ರಗಳು ಮುಂತಾದವುಗಳಲ್ಲಿರುವವರು 72 ಗಂಟೆಗಿಂತ ಹಳೆಯದಲ್ಲದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ನೀಡುವುದು ಕಡ್ಡಾಯವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಮೋದಿಗೆ ವಿಜಯನ್ ಪತ್ರ
'ಕೇರಳದಿಂದ ಪ್ರವೇಶಿಸುವ ಜನರ ಮೇಲೆ ಕರ್ನಾಟಕ ಸರ್ಕಾರ ಹೊಸ ನಿರ್ಬಂಧಗಳನ್ನು ವಿಧಿಸಿದೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇದರಿಂದಾಗಿ ಮುಖ್ಯವಾಗಿ ವಿದ್ಯಾರ್ಥಿಗಳು, ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ಗಳು ಮತ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುವ ರೋಗಿಗಳು ರಾಜ್ಯ ಗಡಿಯಲ್ಲಿ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ' ಎಂದು ಪಿಣರಾಯಿ ವಿಜಯನ್ ಪತ್ರದಲ್ಲಿ ಆರೋಪಿಸಿದ್ದರು.
Recommended Video

ತುರ್ತು ಮಧ್ಯೆ ಪ್ರವೇಶಿಸಿ
ರಾಜ್ಯಗಳು ಜನರ ಅಂತರ್ರಾಜ್ಯ ಚಲನವಲನಕ್ಕೆ ನಿರ್ಬಂಧ ಹೇರುವುದು ಭಾರತ ಸರ್ಕಾರದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಈ ವಿಚಾರದಲ್ಲಿ ನೀವು ತುರ್ತಾಗಿ ಮಧ್ಯಪ್ರವೇಶಿಸಬೇಕು. ಈ ಮೂಲಕ ನೆರೆಯ ಕರ್ನಾಟಕಕ್ಕೆ ಕೇರಳದಿಂದ ತೆರಳುವ ಜನರಿಗೆ ಉಂಟಾಗಿರುವ ಸಂಕಷ್ಟವನ್ನು ಸರಿಪಡಿಸಬಹುದು ಎಂದು ಹೇಳಿದ್ದರು.












Click it and Unblock the Notifications