ಈಶ್ವರಪ್ಪನವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ: ಕೆ.ಮುಕುಡಪ್ಪ ಒತ್ತಾಯ
ಬೆಂಗಳೂರು, ನವೆಂಬರ್ 9: ಈಶ್ವರಪ್ಪ ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳಬೇಕು, ಕನಕದಾಸರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾಲಾರ್ಪಣೆ ಮಾಡಿಸಬೇಕು ಎಂದು ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.ಮುಕುಡಪ್ಪ ಬಿಜೆಪಿ ನಾಯಕರನ್ನ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಅವರಿಂದ ಶಾಸಕರ ಭವನದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಬೇಕು. ವಿಧಾನ ಪರಿಷತ್ ಸಭಾಪತಿಯಾಗಿರುವ ರಘುನಾಥರಾವ್ ಮಲ್ಕಾಪುರೆ ಅವರ ಅವದಿ ಮುಗಿಯುವವರೆಗೂ ಅವರನ್ನೇ ಮುಂದುವರೆಸಬೇಕು. ನಮ್ಮ ಸಮುದಾಯದ ಯಾರೂ ಸ್ಪೀಕರ್, ಸಭಾಪತಿ ಆಗಿರಲಿಲ್ಲ.ಹಾಗಾಗಿ ಮಲ್ಕಾಪುರೆ ಅವರನ್ನು ಮುಂದುವರೆಸಬೇಕು ಎಂದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಾರಂಭದಿಂದಲೂ ಬಿಜೆಪಿಯಲ್ಲಿದ್ದು ಪಕ್ಷ ಸಂಘಟನೆ ಮಾಡಿದ್ದಾರೆ. ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಆರೋಪ ಮುಕ್ತರಾಗಿದ್ದಾರೆ ಹಾಗಾಗಿ ಅವರನ್ನು ಮತ್ತೆ ಸಂಪುಟ ಸೇರಿಸಿಕೊಳ್ಳಬೇಕು, ಇದರಿಂದ ಪಕ್ಷ ಬಲಗೊಳ್ಳಲಿದೆ, 190 ಕ್ಷೇತ್ರದಲ್ಲಿ ನಮ್ಮ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ , ನಮ್ಮ ಸಮಾಜ ಬಿಜೆಪಿ ಪರ ನಿಲ್ಲಬೇಕಾದರೆ ಬಿಜೆಪಿ ನಮ್ಮ ಪರವಿದೆ ಎನ್ನುವ ಸಂದೇಶ ಈಶ್ವರಪ್ಪಗೆ ಅವಕಾಶ ಕಲ್ಪಿಸುವ ಮೂಲಕ ನೀಡಬೇಕು ಎಂದು ಒತ್ತಾಯಿಸಿದರು.

ನಾವು ಬೇಡಿಕೆ ಸಲ್ಲಿಸಲು ಬಂದಿದ್ದೇವೆ, ಪ್ರತಿಭಟಿಸಲು ಅಲ್ಲ, ಕನಕದಾಸ ಜಯಂತಿ ಮಾಡಿದ್ದು ಬಿಜೆಪಿ ಸರ್ಕಾರ, ಕೇಳುವುದು ನಮ್ಮ ಧರ್ಮ ಕೇಳುತ್ತೇವೆ. ನಮ್ಮ ಸಮಾಜಕ್ಕೆ ಬಿಜೆಪಿ ಸರ್ಕಾರ ಮೊದಲಿನಿಂದಲೂ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದೆ.ಈಶ್ವರಪ್ಪ ಮೂರು ಬಾರಿ ಬಿಜೆಪಿ ಅಧ್ಯಕ್ಷರಾಗಿದ್ದರು, ಬಿಜೆಪಿ ಗೆಲ್ಲಲು ಅನುಕೂಲವಾಗಲಿ ಎಂದು ಒತ್ತಾಯ ಮಾಡುತ್ತಿದ್ದೇವೆ.
ಕುರುಬರ ಸಮಾಜ ದೊಡ್ಡದಿದ್ದು, ಮೂರೂವರೆ ಕೋಟಿ ಕುರುಬರು ದಕ್ಷಿಣ ಭಾರತದಲ್ಲಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ, ಇಲ್ಲಿ ಕುರುಬ ಸಮುದಾಯಕ್ಕೆ ಅವಕಾಶ ನೀಡಿದರೆ ಅದರ ಪ್ರಭಾವ ಬೀರಿ ಬೇರೆ ರಾಜ್ಯದಲ್ಲಿಯೂ ಅನುಕೂಲವಾಗಲಿದೆ, ಒಂದು ವೇಳೆ ನಮ್ಮ ಸಮುದಾಯಕ್ಕೆ ಅವಕಾಶ ಕೊಡದೇ ಇದ್ದರೆ ಮತ್ತೆ ಮತ್ತೆ ಹೇಳುತ್ತೇವೆ ಅಷ್ಟೆ ಎಂದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಸಧ್ಯ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ, ವರದಿ ಬರಲಿ, ವರದಿ ಸಲ್ಲಿಕೆಯಾದ ನಂತರ ನಮ್ಮ ಬೇಡಿಕೆ ಮತ್ತೆ ಸರ್ಕಾರದ ಮುಂದೆ ಇರಿಸಲಿದ್ದೇವೆ. ಸಿದ್ದರಾಮಯ್ಯ ಕಾಲದಲ್ಲಿ ಅಧ್ಯಯನಕ್ಕೆ ಆದೇಶ ಮಾಡಿದ್ದರು ಅಷ್ಟೆ.ಈಗ ನಡೆಯುತ್ತಿದೆ. ನಾವು ಗಂಭೀರವಾಗಿ ತೆಗೆದುಕೊಂಡು ಎಲ್ಲಾ ಜಿಲ್ಲೆಗೂ ಅನ್ವಯವಾಗುವಂತೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆ ಇರಿಸಲಿದ್ದೇವೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಲಿತ ಸಮುದಾಯಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ರಾಷ್ಟ್ರಪತಿ, ರಾಜ್ಯಪಾಲರ ಹುದ್ದೆಗಳಿಗೆ ದಲಿತ ಸಮುದಾಯವರಿಗೆಅವಕಾಶ ನೀಡಲಾಗಿದೆ. ಹೀಗಾಗಿ ನಮ್ಮ ಒಕ್ಕೂಟ ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಪ್ರಚಾರ ನಡೆಸಲಾಗುವುದು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಉತ್ತಮ ಬೆಂಬಲ ವ್ಯಕ್ತವಾಗಿದೆ. ನಮ್ಮ ಸಮುದಾಯದ ನಾಯಕರಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಹೇಳಿದರು.












Click it and Unblock the Notifications