Jowar price hike: ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಬರೆಯಲಿದೆ ಜೋಳದ ಬೆಲೆ, ಅಂಕಿ-ಅಂಶ, ಮಾಹಿತಿ ವಿವರ
ಬೆಂಗಳೂರು, ನವೆಂಬರ್ 21: ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಜೋಳಕ್ಕೆ ಹೆಚ್ಚಿನ ಬೆಲೆ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಏಕೆಂದರೆ ಮಾರುಕಟ್ಟೆಗೆ ಆವಕ ಆಗುವುದು ಕಡಿಮೆಯಾಗಿದ್ದಲ್ಲದೇ, ಈ ಬಾರಿಯ ಹಿಂಗಾರು ಜೋಳ (Maize) ಬಿತ್ತನೆ ಕೂಡ ಕಡಿಮೆ ಆಗಿದೆ. ಆದ್ದರಿಂದ ಈ ವರ್ಷ ಕ್ವಿಂಟಾಲ್ ಜೋಳಕ್ಕೆ ಅಂದಾಜು 8,000 ರೂ.ವರೆಗೆ ಏರಿಕೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಬೇರೆ ಬೇರೆ ಉತ್ಪನ್ನ ಬೆಳೆಯುವ ರೈತರು ಆಹಾರ ಧಾನ್ಯಗಳ ಪ್ರಮುಖ ಬೆಳೆಯಾದ ಜೋಳ ಬೆಳೆಯುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಿಂಗಾರು ಹಂಗಾಮಿನ ವೇಳೆ ಹೆಚ್ಚಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಈ ಭಾರಿ ಅಗತ್ಯವಾಗಿದ್ದ 'ಹಿಂಗಾರು' ಮಳೆ ಕೈ ಕೊಟ್ಟಿದ್ದರಿಂದ ಜೋಳ ಬಿತ್ತನೆಯಲ್ಲಿ ಕುಸಿತವಾಗಿದೆ. ಹೀಗಾಗಿ ಈ ಬಾರಿ ಹಿಂದೆಂದಿಗಿಂತಲೂ ಜೋಳದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ..

ಇದೆಲ್ಲ ಬೆಳವಣಿಗೆ ಮಧ್ಯೆ ಈ ವರ್ಷ ಜೋಳಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರತಿ ಕ್ವಿಂಟಾಲ್ ಬೆಲೆ (ರೂ.8000/ಕ್ವಿಂಟಾಲ್) ಗಗನಕ್ಕೆರಲಿದೆ ಎಂದು ಕೃಷಿ ಸಹಾಯ ನಿರ್ದೇಶಕರೊಬ್ಬರು ಮಾಹಿತಿ ನೀಡಿದ್ದಾರೆ. ದಾಖಲೆಯ ಮಟ್ಟದ ಈ ಬೆಲೆ ಕಂಡು ರೈತರು ತಾವ್ಯಾಕೆ ಈ ಬಾರಿ ಜೋಳ ಬೆಳೆಯಲಿಲ್ಲ ಎಂದು ಕೊರಗುವ ಸನ್ನಿವೇಶ ಎದುರಾಗಿದೆ.
ಜೋಳ ಅಭಾವಕ್ಕೆ ಮಳೆ ಕೊರತೆಯೂ ಕಾರಣ
ಮಾರುಕಟ್ಟೆಗೆ ಆಮದು ಕಡಿಮೆ ಇದ್ದರೂ ಜೋಳ ಬೆಳೆಯುತ್ತಿಲ್ಲ. ಈ ಹಿಂದೆ ಜಾನುವಾರುಗಳಿಗೆ ಮೇವು ಬೇಕೆಂದು ಕೆಲವರು ಜೋಳ ಬೆಳೆಯುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಜಾನುವಾರುಗಳು ಕಡಿಮೆ ಆಗುತ್ತಿವೆ. ಇನ್ನು ಅಲ್ಪ ಸ್ವಲ್ಪ ಜನ ಬೆಳೆದರೂ ಸಹ ಆ ಜೋಳಗಳನ್ನು ತಮ್ಮ ಮನೆಗೆ ಇಟ್ಟುಕೊಳ್ಳುತ್ತಾರೆ. ಇದರಿಂದಲೂ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ಅಭಾವ ಸೃಷ್ಟಿಯಾಗುತ್ತಿತ್ತು. ಇದೀಗ ಆ ಅಭಾವದ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

ಈ ಭಾರಿಯು ಅಂತದ್ದೇ ವಾತಾವರಣ ನಿರ್ಮಾಣವಾಗಲಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯು ಏರಿಕೆ ಆಗಲಿದೆ. ಜೋಳ ಬೆಳೆಯುವ ರೈತನೇ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಜೋಳ ಖರೀದಿಸುವ ಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿ ನಿರ್ಮಾಣಕ್ಕೆ ಮಳೆ ಕೊರತೆಯೇ ಕಾರಣ ಅಂತಲೂ ರೈತರು ದೂರಿದ್ದಾರೆ.
'ಜೋಳ' ಬೆಳೆಗೂ ಸರ್ಕಾರ ಪ್ರೋತ್ಸಾಹ ನೀಡಬೇಕು
ಜೋಳ ಬೆಳೆಯಲು ಕಡಿಮೆ ತೇವಾಂಶ ಇದ್ದರೂ ಸಾಕಾಗುತ್ತದೆ. ಆದರೆ ಜೋಳ ಬಿತ್ತದ ಮೇಲೆ ಅದು ಗೇಣುದ್ದ ಬೆಳೆಯುವವರೆಗೆ ಭೂಮಿಯಲ್ಲಿ ತೇವಾಂಶ ಇರಬೇಕು. ಆದರೆ ಈ ಭಾರೀ ಇಷ್ಟು ತೇವ ಹಿಡಿಯುವಷ್ಟು ಮಳೆ ಆಗಿಲ್ಲ. ಇದು ಸಹ ಜೋಳ ಬೆಳೆ ಹೆಚ್ಚಳಕ್ಕೆ ಕಾರಣವಾಗಿದೆ.
'ಹತ್ತಿ, ತೊಗರಿ' ಬೆಳೆಯುವ ರೈತರಿಗೆ ಜೋಳ ಬೆಳೆಯುವ ಕುರಿತು ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ಕೃಷಿ ಇಲಾಖೆಯಿಂದ 'ಸಿರಿಧಾನ್ಯ' ಬೆಳೆಯುಲು ಪ್ರೋತ್ಸಾಹ ಸಿಗುತ್ತಿದೆ. ಆದರೆ ಈ ಸಾಲಿನಲ್ಲಿ 'ಬಿಳಿಜೋಳ' ಸೇರ್ಪಡೆಯಾಗಿಲ್ಲ. ಹೀಗಾಗಿ ಜೋಳ ಬೆಳೆಗೂ ಉತ್ತೇಜನ ನೀಡುವ ಜೊತೆಗೆ ಸಬ್ಸಿಡಿ ಬೀಜ ವಿತರಣೆಗೆ ಸರ್ಕಾರ ಮುಂದಾಗಬೇಕು. ತರಬೇತಿ ನೀಡಬೇಕು ಎಂದು ಅಫಜಲಪುರದ ರೈತರು ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ
ಜೋಳಕ್ಕೆ ದಾಖಲೆ ಮಟ್ಟದಲ್ಲಿ ಬೆಲೆ ಬರುವುದು ಒಂದು ಕಡೆಯಾದರೆ, ಬಿತ್ತನೆ ಕಡಿಮೆ ಆಗಿದೆ. ಸಣ್ಣ ಹಿಸುವಳಿದಾರರು ಮಾರುಕಟ್ಟೆಗೆ ಬೆಳೆದ ಜೋಳ ನೀಡದೇ ತಮಗೇ ವರ್ಷ ಪೂರ್ತಿ ಬೇಕೆಂದು ಇಟ್ಟುಕೊಳ್ಳುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಖರೀದಿ ಜೋಳ ನೆಚ್ಚಿಕೊಂಡಿದ್ದ ಜನಸಾಮಾನ್ಯರಿಗೆ ಬರಗಾಲದ ಸಂದರ್ಭದಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಲಿದೆ. ಅವರು ಪ್ರತಿ ಕೇಜಿ ಜೋಳಕ್ಕೆ 80-100 ರೂಪಾಯಿ ಕೊಟ್ಟು ಖರೀದಿಸಬೇಕಾಗುತ್ತದೆ.
ವರ್ಷದಿಂದ ವರ್ಷಕ್ಕೆ ಬಿತ್ತನೆ ಇಳಿಕೆ
ಬಿತ್ತನೆಯ ಮಾಹಿತಿ ನೋಡುವುದಾದರೆ 2017ರಲ್ಲಿ ಕರ್ನಾಟಕ ರಾಜ್ಯದಲ್ಲಿ 10.97 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಜೋಳ ಬಿತ್ತನೆ ಮಾಡಲಾಗಿತ್ತು. ಅಲ್ಲಿಂದ 2022 ರಲ್ಲಿ ಕೇವಲ 6.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದೆ. ಈ ಮೂಲಕ ಸುಮಾರು ಶೇಕಡಾ 30ರಷ್ಟು ಬಿತ್ತನೆ ಪ್ರಮಾಣ ಇಳಿಕೆ ಆಗಿದೆ.
ವಿಜಯಪುರ ಜಿಲ್ಲೆಯಲ್ಲಿ 2018ರಲ್ಲಿ 1.51 ಲಕ್ಷ ಹೆಕ್ಟೇರ್ನಲ್ಲಿ ಜೋಳ ಬಿತ್ತನೆ ಆಗಿತ್ತು. ಕಳೆದ ವರ್ಷ 2022ರಲ್ಲಿ ಇದು 64,689 ಹೆಕ್ಟೇರ್ ಗೆ ಇಳಿಕೆ ಆಗಿದೆ. ಮಣ್ಣಿನಲ್ಲಿ ತೇವಾಂಶದ ಕೊರತೆಯು (ಮಳೆ ಕೊರತೆ) ರಾಬಿ ಬೆಳೆಗಳ ಬಿತ್ತನೆ ಮೇಲೆ ಭಾರೀ ಪರಿಣಾಮ ಭೀರುತ್ತದೆ. ನಿರೀಕ್ಷಿತ ಮಳೆ ಆಗದೇ ಇರುವುದು ಸಹ ಜೋಳ ಬಿತ್ತನೆ ಕುಂಠಿತಕ್ಕೆ ಕಾರಣವಾಗಿದೆ.
ಖರೀದಿ ಕೇಂದ್ರದಲ್ಲಿ ಬಿಳಿಜೋಳ ಖರೀದಿ
ಸದ್ಯ ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆ ಬಿತ್ತನೆ ಕಡಿಮೆ ಆಗಿದೆ. ಧಾರವಾಡ ಜಿಲ್ಲೆ ಮತ್ತು ಕಲಘಟಗಿ ವ್ಯಾಪ್ತಿಯಲ್ಲಿ ಬಿಳಿ ಜೋಳ ಮತ್ತು ಭತ್ತ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರಿಗೆ ಈ ಆಹಾರ ಧಾನ್ಯಗಳನ್ನು ಮಾರ್ಗಸೂಚಿ ಅನುಸರಿಸಿ ಖರೀದಿಸುವಂತೆ ತಿಳಿಸಲಾಗಿದೆ. ಆದಷ್ಟು ಶೀಘ್ರವೇ ಈ ಭಾಗದ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಹೇಳಿದ್ದಾರೆ.












Click it and Unblock the Notifications