ಇಂದ್ರಜಿತ್ ಲಂಕೇಶ್ ಕೊಟ್ಟಿದ್ದು ಮಾಹಿತಿಯಂತೆ, ಸಾಕ್ಷ್ಯ ಅಲ್ಲ!
ಬೆಂಗಳೂರು, ಸೆಪ್ಟೆಂಬರ್ 1: "ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ಹಗರಣದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅವರ ಬಳಿ ಏನಾದರೂ ಸಾಕ್ಷ್ಯ, ವಿಡಿಯೋ- ಫೋಟೋ ಇದ್ದರೆ ಅದನ್ನು ಸಲ್ಲಿಸುವುದಕ್ಕೆ ಎರಡು ದಿನ ಸಮಯ ಕೊಟ್ಟಿದ್ದೇವೆ. ಅವರು ಬಂದು ತಮ್ಮ ಬಳಿ ಇರುವ ದಾಖಲೆಗಳನ್ನು ನೀಡಬಹುದು" ಎಂದು ಮಂಗಳವಾರ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ಹೇಳಿದ್ದಾರೆ.
Recommended Video
ಹಾಗಿದ್ದರೆ ಸೋಮವಾರದಂದು ಇಂದ್ರಜಿತ್ ಪೊಲೀಸರಿಗೆ ಕೊಟ್ಟುಬಂದಿದ್ದು ಏನು? "ಅವರು ಎಷ್ಟೇ ಆದರೂ ಸಿನಿಮಾದವರು. ಟ್ರೇಲರ್ ಬಿಟ್ಟ ಮೇಲೆ ಸಿನಿಮಾ ಮಾಡುವುದಲ್ಲವಾ?" ಎಂದು ಪತ್ರಕರ್ತರ ವಲಯದಲ್ಲಿ ಮಾತನಾಡಿಕೊಳ್ಳುವಂತಾಗಿದ್ದರೆ, ಅವರು ಪತ್ರಕರ್ತರಲ್ಲವಾ ಅದಕ್ಕೆ ಪೊಲೀಸರಿಗೆ ಚಮಕ್ ಕೊಟ್ಟು ಬಂದಿದ್ದಾರೆ ಅಂತ ಚಿತ್ರರಂಗ ಮಾತನಾಡಿಕೊಳ್ಳುವಂತಾಗಿದೆ.
ಸ್ವಂತಿಕೆ ಇಲ್ಲದ ಪತ್ರಕರ್ತ: ರವಿಬೆಳಗೆರೆ ವಿರುದ್ಧ ಇಂದ್ರಜಿತ್ ವಾಗ್ದಾಳಿ
ಸಂದೀಪ್ ಪಾಟೀಲ್ ತುಂಬ ಸ್ಪಷ್ಟವಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದೇನೆಂದರೆ, ಇಂದ್ರಜಿತ್ ಹೇಳಿರುವುದು ಮಾಹಿತಿ ಮಾತ್ರ. ಅದರಲ್ಲಿ ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಫೋಟೋಗಳು, ವಿಡಿಯೋ... ಉಹುಂ, ಇವ್ಯಾವುದನ್ನೂ ಅವರು ಪ್ರಸ್ತಾವ ಮಾಡಲಿಲ್ಲ. ಆದರೆ ಇಂದ್ರಜಿತ್ ಮಾತ್ರ ಸೋಮವಾರದಂದು ತಾವು ಧಾರಾಳವಾಗಿ ಮಾಹಿತಿ, ಸಾಕ್ಷ್ಯಗಳನ್ನು ಒದಗಿಸಿದ್ದಾಗಿ ಹೇಳಿದ್ದರು.
ಇಂದ್ರಜಿತ್ ನೀಡಿದ ಮಾಹಿತಿ ಆಧರಿಸಿ, ನಾವು ವಿಚಾರಣೆ ನಡೆಸುತ್ತೇವೆ ಎಂದಿರುವ ಸಂದೀಪ್ ಪಾಟೀಲ್, ಇನ್ನೆರಡು ದಿನ ಇಂದ್ರಜಿತ್ ಗೆ ಸಾಕ್ಷ್ಯಾಧಾರ ಸಲ್ಲಿಸಲು ಸಮಯಾವಕಾಶ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ಖ್ಯಾತ ಪತ್ರಕರ್ತ ಪಾಳೇಗಾರ ಲಂಕೇಶ್ (ಪಿ. ಲಂಕೇಶ್) ಅವರ ಮಗ ಇಂದ್ರಜಿತ್ ಎರಡ್ಮೂರು ದಿನಗಳ ಕಾಲ ಮಾಧ್ಯಮಗಳ ಎದುರು ತೆಗೆದುಕೊಂಡ ಮೈಲೇಜ್ ಗೆ ಫುಲ್ ಸ್ಟಾಪ್ ಇಟ್ಟಂತಾಗಿದೆ.
ರಸ್ತೆ ಬದಿ ನಿಂತು ಕುಶಾಲಿಗೆ ಆಡುವ ಮಾತನ್ನು ಟೀವಿ ಕ್ಯಾಮೆರಾಗಳ ಎದುರು ಆಡುವುದು ಅಪಾಯಕಾರಿ. ಇನ್ನು ಅಂಥ ಮಾತುಗಳಿಗೆ ವೇದಿಕೆ ಒದಗಿಸುವುದು ಮತ್ತೂ ಅಪಾಯ. ಎರಡೂ ಕೂಡ ಮೂರು ದಿನಗಳಲ್ಲಿ ಹಲವು ಸಲ ಆಗಿದೆ. ಇಂದ್ರಜಿತ್ ಅವರು ಇನ್ನಾದರೂ ಈಗಿನ ವಿಷಯದ ಗಾಂಭೀರ್ಯ ಅರಿತರೆ ಉತ್ತಮ. ಇಲ್ಲದಿದ್ದಲ್ಲಿ ಇಂದ್ರಜಿತ್ ಪದೇ ಪದೇ ಪ್ರಸ್ತಾವ ಮಾಡುವ ಪಿ. ಲಂಕೇಶ್ ಪತ್ರಿಕೋದ್ಯಮಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಮಾಡುವ ಅವಮಾನ ಆದೀತು.