ಸೊಸೆಗೆ ಟಿಕೆಟ್ ನೀಡುವ ಮೂಲಕ ಕೊಪ್ಪಳ ಸಂಸದ ಕರಡಿ ಸಂಗಣ್ಣರನ್ನು ಉಳಿಸಿಕೊಂಡ ಬಿಜೆಪಿ- ಇನ್ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 18: ಸಂಸದ ಕರಡಿ ಸಂಗಣ್ಣನವರ ಕೊಪ್ಪಳ ಟಿಕೆಟ್ ಬೇಡಿಕೆಯನ್ನು ಬಿಜೆಪಿ ಭಾಗಶಃ ಈಡೇರಿಸಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಸೋಮವಾರದಂದು ಅವರ ನಿರ್ಗಮನವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಸಂಸದರು ತಮಗೇ ಟಿಕೆಟ್ ನೀಡಬೇಕೆಂದು ಹಠ ಹಿಡಿದಿದ್ದರು. ಆದರೆ, ಪಕ್ಷವು ಅವರ ಸೊಸೆ ಮಂಜುಳಾ ಅಮರೇಶ್ ಅವರಿಗೆ ಟಿಕೆಟ್ ನೀಡಿದೆ.
ಸಂಗಣ್ಣ ಈ ಬಾರಿ ಕೊಪ್ಪಳದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅಚಲವಾಗಿದ್ದರು. ಒಂದು ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದರೆ, ಬೇರೆ ಪಕ್ಷಗಳ ಕಡೆಗೆ ಮುಖ ಮಾಡಲು ಅವರು ಮುಂದಾಗಿದ್ದರು. ಅವರು ಪಕ್ಷ ತೊರೆದು ಪಕ್ಷ ತೊರೆದು ಜೆಡಿಎಸ್ ಅಥವಾ ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿದ್ದರು. ಅವರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕೇಸರಿ ಪಕ್ಷ ಯಶಸ್ವಿ ಆಗಿದೆ.

ಇಬ್ಬರು ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರ ಇತ್ತೀಚಿನ ನಿರ್ಗಮನದಿಂದ ನಲುಗಿರುವ ಬಿಜೆಪಿ ಪಕ್ಷವು ಇನ್ನೊಬ್ಬರನ್ನು ಕಳೆದುಕೊಳ್ಳಲು ಹಿಂಜರಿದಿದೆ. ಸಂಸದ ಕರಡಿ ಸಂಗಣ್ಣ ಪಂಚಮಸಾಲಿ ಜಾತಿಗೆ ಸೇರಿದವರು. ಇದು ಲಿಂಗಾಯತ ಸಮುದಾಯದ ಪ್ರಬಲ ಉಪ ಪಂಗಡವಾಗಿದೆ.
ಸೋಮವಾರ ಸಂಜೆ ಬಿಜೆಪಿ ತನ್ನ ಪಟ್ಟಿಯಲ್ಲಿ ಪ್ರಕಟಿಸಿದ ಅಭ್ಯರ್ಥಿಗಳ ಪೈಕಿ ಮಂಜುಳಾ ಅಮರೇಶ್ ಕೂಡ ಸೇರಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಎದುರಿಸಲಿದ್ದಾರೆ. ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸೋಮವಾರವಷ್ಟೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಕಾಂಗ್ರೆಸ್ ಬಿ ಪಾರ್ಮ್ ನೀಡಿದೆ.

ಬೆಂಗಳೂರಿನಲ್ಲಿ ಮಹದೇವಪುರ ( ಎಸ್ಸಿ ) ಕ್ಷೇತ್ರದಿಂದ ಹಾಲಿ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಆದರೆ ಪಕ್ಷವು ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರನ್ನು ನಾಮನಿರ್ದೇಶನ ಮಾಡಿದೆ. ಈ ಮೂಲಕ ಅರವಿಂದ ಲಿಂಬಾವಳಿ ಬಂಡಾಯವನ್ನು ಶಮನಗೊಳಿಸುವಲ್ಲಿ ಪಕ್ಷವು ಯಶಸ್ವಿ ಆಗಿದೆ.
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ಎ ರಾಮದಾಸ್ಗೆ ಟಿಕೆಟ್ ನಿರಾಕರಿಸಲಾಗಿದೆ. ಶ್ರೀವತ್ಸ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮೈಸೂರಿನಲ್ಲಿ ರಾಮದಾಸ್ ಮತ್ತು ಬಿಜೆಪಿ ಸಂಸದ ಪ್ರತಾಪ್ ಸಿಂಹ ನಡುವೆ ವಾಗ್ವಾದ ನಡೆದಿದೆ. ತಮಗೆ ಟಿಕೆಟ್ ತಪ್ಪಲು ಪ್ರತಾಪ್ ಸಿಂಹ ಅವರೇ ಕಾರಣವೆಂದು ರಾಮದಾಸ್ ಆರೋಪಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್ಗೆ ಪಕ್ಷ ಟಿಕೆಟ್ ನೀಡಿದೆ.












Click it and Unblock the Notifications