HD Kumaraswamy: 20 ಕೋಟಿ ಕೊಟ್ರೆ ಜೆಡಿಎಸ್ 129 ಸ್ಥಾನಕ್ಕೇರುತ್ತೆ : ಎಚ್ ಡಿ ಕುಮಾರಸ್ವಾಮಿ
ಕೋಲಾರ,ಏಪ್ರಿಲ್30: ರಾಜ್ಯ ವಿಧಾನಸಭಾ ಚುನಾವಣ ಕಾವು ಜೋರಾಗಿದೆ. ಹಲವು ತಂತ್ರಗಾರಿಕೆಗಳ ಜೊತೆಗೆ ಹತ್ತು ಹಲವು ಸಮೀಕ್ಷೆಗಳನ್ನ ನಡೆಸುವ ಮೂಲಕ ಪಕ್ಷದ ಬಲವನ್ನ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಸ ಹೊಸ ತಂತ್ರಗಾರಿಕೆಯನ್ನ ಹಾಕಿಕೊಂಡಿದ್ರೆ, ಇತ್ತ ಸಮೀಕ್ಷೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೋಲಾರ ಜಿಲ್ಲಾಯ ಮಾಲೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಜೆಡಿಎಸ್ ಗೆ ಈ ಬಾರೀ 29 ಸ್ಥಾನಗಳು ಬರಲಿದೆ ಎಂದು ಹೇಳುತ್ತಿದ್ದಾರೆ. ನಾನು ಯಾವುದಾದರೂ ಖಾಸಗಿ ಸಮೀಕ್ಷೆ ನಡೆಸಿ ಯಾವುದಾದರೂ ಸುದ್ದಿ ವಾಹಿನಿಗೆ 10 ಕೋಟಿಯಿಂದ 20 ಕೋಟಿ ನೀಡಿದರೇ 29 ಸ್ಥಾನ ಇದ್ದದ್ದು ನಾಳೆಗೆ 129 ಸ್ಥಾನ ಆಗುತ್ತದೆ ಎಂದು ಆರೋಪಿಸಿದ್ದಾರೆ.

ಚುನಾವಣೆ ಹೊತ್ತಲಿ ಸಾಕಷ್ಟು ಸಮೀಕ್ಷೆಗಳು ಬರುತ್ತವೆ, ಈ ಸಮೀಕ್ಷೆಗಳನ್ನ ನಂಬಬೇಡಿ, ಜನಬಲ ಇದ್ದರೂ ನನಗೆ ಹಣದ ಕೊರತೆ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ರೀತಿ ಕಮಿಷನ್ ಪಡೆದಿದ್ದರೆ ಇವತ್ತು ನಾನು ದುಡ್ಡು ಚೆಲ್ಲಿ ಮತ ಪಡೆಯಬಹುದಿತ್ತು. ಆದರೆ ಅಂತಹ ಕುಟುಂಬದಲ್ಲಿ ನಾನು ಬಂದಿಲ್ಲ. ಭಿಕ್ಷೆ ಎತ್ತಿ ಚುನಾವಣೆ ಎದುರಿಸಬೇಕಾಗಿದೆ ಎಂದು ಹೇಳಿದರು.
ಇನ್ನೂ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ನ ಉತ್ತರ ಭಾರತದ ನಾಯಕರು ಈಗ ಕರ್ನಾಟಕ ಹಾಗೂ ಕನ್ನಡಿಗರನ್ನು ನೆನಪಿಸಿಕೊಂಡು ಬರುತ್ತಿದ್ದಾರೆ. ಮತ ಕೇಳಿ ವಾಪಸ್ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿಯ ಹೈಕಮಾಂಡ್ ನಾಯಕರ ವಿರುದ್ದ ಹರಿಹಾಯ್ದರು.

ಚುನಾವಣೆ ಬಂದಾಗ ರಾಜ್ಯ ನೆನಪಾಗುತ್ತದೆ. ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರವಾಹ ಉಂಟಾದಾಗ, ಕೋಲಾರದಲ್ಲಿ ಮಾವಿನ ಬೆಳೆ ಕುಸಿದಾಗ ಬರಲಿಲ್ಲ. ಕೋಲಾರ ಜನರಿಗೆ ಅವಶ್ಯವಾಗಿ ಬೇಕಿರುವ ನೀರಾವರಿ ಸೌಲಭ್ಯವನ್ನ ಕೊಡಲು ಬರಲಿಲ್ಲ. ಈಗ ಎಡಗೈನಲ್ಲಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಲು ಕೋಲಾರಕ್ಕೆ ಭಾನುವಾರ ಭೇಟಿ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ಟೀಕಿಸಿದರು.
ಕಾಂಗ್ರೆಸ್, ಬಿಜೆಪಿಗೆ ಮತ ಹಾಕಿದರೆ ದೆಹಲಿಯಿಂದ ಕನ್ನಡಿಗರ ಆಡಳಿತ ನಡೆಯುತ್ತದೆ. ದೆಹಲಿಯಿಂದ ಬರುವ ಸೂಚನೆಗೆ ಕಾಯಬೇಕಾಗುತ್ತದೆ. ಆದರೆ, ಜೆಡಿಎಸ್ ಆಡಳಿತ ರಾಜ್ಯದ ಹಳ್ಳಿಗಳಿಂದ ನಡೆಯುತ್ತದೆ. ತಮಗೆ ಯಾವ ರೀತಿ ಆಡಳಿತ ಬೇಕು ತೀರ್ಮಾನಿಸಿ ಎಂದು ಕುಮಾರಸ್ವಾಮಿ ಹೇಳಿದರು.
ಇನ್ನೂ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಡೂಪ್ಲಿಕೇಟ್ ಕಾರ್ಡ್. ಯಾವುದೇ ಕಾರಣಕ್ಕೂ ಅದನ್ನು ನಂಬಬೇಡಿ ಎಂದರು
ಕೋಲಾರದಲ್ಲಿ ಕಾಂಗ್ರೆಸ್ ಪಕ್ಷವು ಮತ ಪಡೆಯಲು ಡಿಸಿಸಿ ಬ್ಯಾಂಕ್ ದುರುಪಯೋಗಪಡಿಸಿಕೊಂಡಿದೆ. ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಿದ್ದು, ಆ ಸಾಲ ತೀರಿಸಲು ಸಾಧ್ಯವಾಗಿಲ್ಲ. ಹೀಗಾಗಿ, ನಮ್ಮ ಸರ್ಕಾರ ಬ೦ದ ಕೂಡಲೇ ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳ ಸಾಲವನ್ನು ಒಂದು ಬಾರಿ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಇನ್ನೂ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಬಂಗಾರಪೇಟೆಯಲ್ಲಿ 2006ರಲ್ಲಿ ಯರಗೋಳು ಜಲಾಶಯ ನಿರ್ಮಾಣವಾಯಿತು. ಈ ಬಾರಿ ಮಳೆ ಬಂದು ಜಲಾಶಯ ತುಂಬಿತು. ಆದರೆ, ಆ ನೀರನ್ನು ಬಳಸುವ ಕೆಲಸವನ್ನು ದರಿದ್ರ ಬಿಜೆಪಿ ಸರ್ಕಾರ ಮಾಡಲಿಲ್ಲ. ಜಲಾಶಯ ತುಂಬಿ ತಮಿಳುನಾಡಿಗೆ ನೀರು ಹರಿದು ಹೋಯಿತು ಎಂದು ಕಿಡಿಕಾರಿದರು.












Click it and Unblock the Notifications