ಚುನಾವಣೆಯಲ್ಲಿ ಜೆಡಿಎಸ್ ಟಾರ್ಗೆಟ್ ಈ ಕ್ಷೇತ್ರಗಳು
ಬೆಂಗಳೂರು, ಫೆ.4 : ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಎಸ್ ಲೋಕಸಭೆ ಉಪ ಚುನಾವಣೆಯಲ್ಲಿ ಉಂಟಾದ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಜೆಡಿಎಸ್ ಕೆಲವು ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದು, ಅವುಗಳನ್ನು ಗೆದ್ದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲು ತಂತ್ರ ರಚಿಸಿದೆ.
ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿತ್ತು. ಸದ್ಯ ಆ ನೋವನ್ನು ಮರೆಯಲು ಅದು ಸಿದ್ಧತೆ ನಡೆಸಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲು ಸ್ವತಃ ದೊಡ್ಡ ಗೌಡರೇ ಸಜ್ಜಾಗಿ ನಿಂತಿದ್ದಾರೆ. [ಗೌಡರ ಚಿತ್ತ ಬೆಂಗಳೂರು ಗ್ರಾಮಾಂತರ ದತ್ತ]

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇಂಧನ ಸಚಿವ ಡಿಕೆ ಶಿವಕುಮಾರ್, ಉಪ ಚುನಾವಣೆಯಲ್ಲಿ ಗೆದ್ದ ಡಿಕೆ ಸುರೇಶ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಪ್ರಭಾವ ತೋರಿಸಲು ದೇವೇಗೌಡರು ಸಜ್ಜಾಗಿದ್ದಾರೆ. ಆದ್ದರಿಂದಲೇ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕೆ ಧುಮುಕುತ್ತಿದ್ದಾರೆ.
ಉಳಿದಂತೆ ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಶಿವಮೊಗ್ಗ, ಉತ್ತರ ಕನ್ನಡ, ಬಿಜಾಪುರ, ರಾಯಚೂರು ಮತ್ತು ಚಿತ್ರದುರ್ಗ ಕ್ಷೇತ್ರಗಳನ್ನು ಜೆಡಿಎಸ್ ತನ್ನ ಗೆಲ್ಲುವ ಪಟ್ಟಿಗೆ ಸೇರಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಎಷ್ಟೇ ಸ್ಪರ್ಧೆ ಎದುರಾದರೂ ಕ್ಷೇತ್ರ ಕೈ ತಪ್ಪಬಾರದು ಎಂಬ ತಂತ್ರವನ್ನು ಜೆಡಿಎಸ್ ರೂಪಿಸಿದೆ. [ಶಿವಮೊಗ್ಗದಿಂದ ಬಂಗಾರಪ್ಪ ಕುಟುಂಬದವರು ಸ್ಪರ್ಧೆ]
ಶಿವಮೊಗ್ಗ ಕ್ಷೇತ್ರದಲ್ಲಿ ಮೂವರು ಶಾಸಕರನ್ನ ಹೊಂದಿರುವ ಪಕ್ಷ ಬಂಗಾರಪ್ಪ ಕುಟುಂಬದವರಿಗೆ ಟಿಕೆಟ್ ನೀಡುವ ಮೂಲಕ ಕ್ಷೇತ್ರದಲ್ಲಿ ಜಯ ಸಾಧಿಸಲು ಹಂಬಲಿಸುತ್ತಿದೆ. ಮಂಡ್ಯದಲ್ಲಿ ಅಭ್ಯರ್ಥಿಯ ಹುಡುಕಾಡ ನಡೆದಿದೆ. ಕೋಲಾರದಲ್ಲಿ ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ ಅಭ್ಯರ್ಥಿ ಎಂದು ನಿರ್ಧರಿಸಲಾಗಿದೆ. ತುಮಕೂರು ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. [ಕೋಲಾರದಲ್ಲಿ ಸಿದ್ದಯ್ಯ ಜೆಡಿಎಸ್ ಅಭ್ಯರ್ಥಿ]
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಅದು ಪಕ್ಷಕ್ಕೆ ಸಹಾಯಕವಾಗಬಹುದು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರವಾದ ಅಲೆ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ತಂದು ಕೊಡುವ ಸಾಧ್ಯತೆ ಇದೆ. ಇವೆಲ್ಲವನ್ನೂ ಮೀರಿ ಜೆಡಿಎಸ್ ರಾಜ್ಯದಲ್ಲಿ ತನ್ನ ಶಕ್ತಿ ಪ್ರದರ್ಶಿಸಬೇಕಾಗಿದೆ. ಆದ್ದರಿಂದ ಪಕ್ಷ ಕೆಲವು ಕ್ಷೇತ್ರಗಳ ಮೇಲೆ ಮಾತ್ರ ತನ್ನ ಗಮನ ಕೇಂದ್ರಿಕರಿಸಿದೆ.












Click it and Unblock the Notifications