ಗೌಡ್ರ ಮನೆಯಲ್ಲಿ ವಾರಗಿತ್ತಿಯರ ಕಲಹ: ಜೆಡಿಎಸ್ ಪಟ್ಟಿ ವಿಳಂಬ?
ಬೆಂಗಳೂರು, ಮಾ 14: ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಬಹುತೇಕ ತಮ್ಮ ಪಟ್ಟಿಗಳನ್ನು ಅಂತಿಮಗೊಳಿಸಿ ಪ್ರಕಟಿಸಿದ್ದರೂ, ಜೆಡಿಎಸ್ ಮಾತ್ರ ಇನ್ನು 16 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಬಾಕಿ ಉಳಿಸಿಕೊಂಡಿದೆ.
ಮೂಲಗಳ ಪ್ರಕಾರ ದೇವೇಗೌಡರ ಕುಟುಂಬದಲ್ಲಿನ ವಾರಗಿತ್ತಿಯರ ಶೀತಲ ಸಮರ ಪಟ್ಟಿ ಬಿಡುಗಡೆ ವಿಳಂಬಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಅಸಮಾಧಾನಿಗಳ ಪಟ್ಟಿಯನ್ನು ನೋಡಿ, ಅವಲೋಕಿಸಿ ಜೆಡಿಎಸ್ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ರಾಜಕೀಯ ನಡೆ.
ಆದರೂ, ಗೌಡರ ಕುಟುಂಬದಲ್ಲಿ ಎದ್ದಿರುವ ಅಸಮಾಧಾನದ ಹೊಗೆ ಪಟ್ಟಿ ಬಿಡುಗಡೆ ವಿಳಂಬಕ್ಕೆ ಇನ್ನೊಂದು ಕಾರಣ. (ರೇವಣ್ಣ ಪತ್ನಿಗೆ ಟಿಕೆಟ್ ಇಲ್ಲ)
ನನ್ನ ಹೊರತಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರೂ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿಕೆ ನೀಡುತ್ತಾ ಬರುತ್ತಿದ್ದರಾದರೂ, ಅನಿತಾ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿ ಇರುವುದು ಕುಟುಂಬದಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎನ್ನುವುದು ಸದ್ಯ ಹರಿದಾಡುತ್ತಿರುವ ಸುದ್ದಿ.

ಭವಾನಿ ರೇವಣ್ಣ ಹಠ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರೆ, ನನಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಭವಾನಿ ರೇವಣ್ಣ ಹಠಕ್ಕೆ ಬಿದ್ದಿರುವುದು ದೇವೇಗೌಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಭವಾನಿ ಸ್ಪರ್ಧಿಸಲು ಹರ ಸಾಹಸ ಪಟ್ಟಿದ್ದರು. ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಭವಾನಿ ತನ್ನ ಮಾವನವರ (ದೇವೇಗೌಡ) ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಮಂಡ್ಯ ಗೊಂದಲ
ಒಂದು ಮೂಲಗಳ ಪ್ರಕಾರ, ಮಂಡ್ಯ ಕ್ಷೇತ್ರದಲ್ಲಿ ಸಿ ಎಸ್ ಪುಟ್ಟರಾಜು ಅವರ ಹೆಸರು ಇನ್ನೂ ಅಂತಿಮ ಗೊಂಡಿಲ್ಲ. ದೇವೇಗೌಡರು ಪುಟ್ಟರಾಜು ಪರ ಒಲವು ತೋರಿದ್ದರೂ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತು ಅವರ ಮಗ ಕೂಡಾ ಟಿಕೆಟಿಗಾಗಿ ಭಾರೀ ಲಾಬಿ ನಡೆಸುತ್ತಿರುವುದು ಗೌಡರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಗೌಡರ ಮಾಸ್ಟರ್ ಪ್ಲಾನ್
ಪುಟ್ಟರಾಜು ಮತ್ತು ತಮ್ಮಣ್ಣ ಇಬ್ಬರೂ ಮಂಡ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವಿಗಳು. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಇಬ್ಬರ ನಡುವಿನ ಮನಸ್ತಾಪದಿಂದ ಜೆಡಿಎಸ್ ತನ್ನ ಭದ್ರಕೋಟೆಯನ್ನು ಕಳೆದು ಕೊಳ್ಳಬೇಕಾಯಿತು. ಈಗ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಚುನಾವಣೆಯ ಸಮಯದಲ್ಲಿ ಮತ್ತೆ ಗೊಂದಲ ಉಂಟಾಗಬಹುದು. ಆದುದರಿಂದ ಸೊಸೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಇಬ್ಬರೂ ಒಟ್ಟಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವುದು ಗೌಡರ ಮಾಸ್ಟರ್ ಪ್ಲಾನ್ ಗಳಲ್ಲಿ ಒಂದು ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರ ಕ್ಷೇತ್ರ
ಜೆಡಿಎಸ್ ಪಕ್ಷಕ್ಕೆ ನೆಲೆಯಿರುವ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಕೂಡಾ ಒಂದು. ಈವರೆಗೂ ಅಲ್ಲಿ ಅನಿತಾ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿತ್ತು. ಕಾಂಗ್ರೆಸ್ ಅಲ್ಲಿ ವೀರಪ್ಪ ಮೊಯ್ಲಿ ಹೆಸರು ಅಂತಿಮ ಗೊಳಿಸಿದ ನಂತರ ಆ ಕ್ಷೇತ್ರಕ್ಕೆ ಅನಿತಾ ಜೊತೆ ಮದ್ಯದ ಉದ್ಯಮಿ ದಿ. ಆದಿಕೇಶವಲು ಅಳಿಯ ಶ್ರೀನಿವಾಸಮೂರ್ತಿ ಹೆಸರು ಕೇಳಿ ಬರಲಾರಂಭಿಸಿದೆ.

ಮೂರು ಕ್ಷೇತ್ರ ಗೊಂದಲದಲ್ಲಿ
ಮಂಡ್ಯ, ಚಿಕ್ಕಬಳ್ಳಾಪುರ ಕ್ಷೇತ್ರದ ಹಾಗೆ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಗ್ಗಂಟಾಗಿರುವ ಕ್ಷೇತ್ರವೆಂದರೆ ಬೆಂಗಳೂರು ಸೆಂಟ್ರಲ್. ಅಲ್ಲಿ ನಂದಿನಿ ಆಳ್ವ ಮತ್ತು ಅಬ್ದುಲ್ ಅಜೀಂ ನಡುವೆ ಯಾರಿಗೆ ಟಿಕೆಟ್ ನೀಡಬೇಕೆನ್ನುವ ಗೊಂದಲ್ಲಿದೆ ಜೆಡಿಎಸ್.












Click it and Unblock the Notifications