ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಪತರುಗುಟ್ಟಿದ ಜೆಡಿಎಸ್
Congress convention in Hassan: ಜೆಡಿಎಸ್ನ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ಗುಡುಗಿದ್ದು, ಜೆಡಿಎಸ್ ಇದರಿಂದ ಪತರುಗುಟ್ಟಿದೆ. ಜೆಡಿಎಸ್ನ ಭದ್ರಕೋಟೆ ಎಂದೇ ಹಾಸನ ಹಾಗೂ ಹಳೇ ಮೈಸೂರು ಭಾಗ ಗುರುತಿಸಿಕೊಂಡಿದೆ. ಆದರೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಪೆನ್ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಮಕಾಡೆ ಮಲಗಿದೆ. ಅಲ್ಲದೇ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುವ ರಾಮನಗರದಲ್ಲೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮೊಟ್ಟ ಮೊದಲ ಬಾರಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ನಡುಗಿದೆ.
ಹಾಸನದಲ್ಲಿ ಜೆಡಿಎಸ್ ಮೊದಲಿನಿಂದಲೂ ತನ್ನ ಆಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಆದರೆ, ಈಚೆಗೆ ನಡೆದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಕೇಸ್ಗಳಿಂದ ಈ ಭಾಗದಲ್ಲಿ ಜೆಡಿಎಸ್ ಹಾಗೂ ಆ ಪಕ್ಷದ ನಾಯಕರು ತೀವ್ರ ಮುಖಭಂಗ ಎದುರಿಸಿದ್ದಾರೆ. ಈ ಕೇಸ್ಗಳು ಹೊರ ಬಂದ ಮೇಲೆ ಹಾಸನದಲ್ಲಿ ಜೆಡಿಎಸ್ನ ಜಂಘಾಬಲವೇ ಕುಸಿದಿದೆ. ಅದರ ನಡುವೆ ಕಾಂಗ್ರೆಸ್ನ ನಾಯಕರು ಅದೇ ನೆಲದಲ್ಲಿ ನಿಂತು ಜೆಡಿಎಸ್ನ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಹಾಸನದಲ್ಲಿ ಕಾಂಗ್ರೆಸ್ ಗುಡುಗುತ್ತಿದ್ದಂತೆಯೇ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನೇ ನಡೆಸಿದೆ. ಈ ಸಂಬಂಧ ಜೆಡಿಎಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿದೆ. ಮೂಲ ಕಾಂಗ್ರೆಸ್ ನಾಯಕರ ಅಧಿಕಾರ ತಪ್ಪಿಸಿ, ಸಮಾವೇಶಗಳ ಮೂಲಕ ಏಕವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಲಜ್ಜೆಗೆಟ್ಟ ಸಿದ್ದಹಸ್ತ ಸಿದ್ದರಾಮಯ್ಯ ಎಂದಿದೆ. ಜೆಡಿಎಸ್ ಈ ರೀತಿ ತೀಕ್ಷ್ನವಾಗಿ ಟ್ವೀಟ್ ಮಾಡುತ್ತಿರುವುದರ ಹಿಂದೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.
ಮುಂದುವರಿದು ಜೆಡಿಎಸ್, ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದಕುತಂತ್ರಿ ಎಂದಿದೆ. ಅಲ್ಲದೇ ಷಡ್ಯಂತ್ರ ಹಾಗೂ ಗುಂಪುಗಾರಿಕೆ ನಡೆಸಿದ ರಾಜಕಾರಣದಿಂದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬಲವಂತವಾಗಿ ದೆಹಲಿಯ ರಾಜಕೀಯಕ್ಕೆ ತಳ್ಳಿದ ಪರಮ ಸ್ವಾರ್ಥಿ ನೀವು. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಕುತಂತ್ರದಿಂದ ಸೋಲಿಸಿದ ಷಡ್ಯಂತ್ರಿ ಎಂದೂ ಹೇಳಿದೆ.
ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರ ತಪ್ಪಿಸಿ, ಸಮಾವೇಶಗಳ ಮೂಲಕ ಏಕವ್ಯಕ್ತಿ ಪ್ರದರ್ಶನ ಮಾಡುತ್ತಿರುವ ಲಜ್ಜೆಗೆಟ್ಟ ಸಿದ್ದಹಸ್ತ. @siddaramaiah
— Janata Dal Secular (@JanataDal_S) December 6, 2024
ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದಕುತಂತ್ರಿ.
ಇನ್ನಿಲ್ಲದ ಷಡ್ಯಂತ್ರ, ಗುಂಪುಗಾರಿಕೆ ನಡೆಸಿ ರಾಜಕಾರಣದಿಂದ ಖರ್ಗೆಯವರನ್ನು ಬಲವಂತವಾಗಿ…
ಮುಖ್ಯಮಂತ್ರಿ ರೇಸ್ನಲ್ಲಿದ್ದ ಡಾ.ಪರಮೇಶ್ವರ್ ಅವರನ್ನು ಸ್ವಾರ್ಥಕ್ಕಾಗಿ ಸೋಲಿಸಿ ಮುಖ್ಯಮಂತ್ರಿ ಗಾದಿಗೇರಿದ ಕಪಟಿ ಎಂದೂ ಜರಿದಿದ್ದು, ಅಹಿಂದ ಹೆಸರಲ್ಲಿ ಪ್ರತಿಸ್ಪರ್ಧಿಗಳನ್ನು ಬಲಿ ಹಾಕಿದ ಸಿದ್ಧಸೂತ್ರದಾರ. ಮೂಲ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮೇಲಾಗಿ ಸಾಯುವ ತನಕ ಜತೆಯಲ್ಲಿರುವೆ ಎನ್ನುವ ಕನಕಪುರ ಬಂಡೆಗೂ ಹೆಜ್ಜೆ ಹೆಜ್ಜೆಗೂ ಅಧಿಕಾರ ತಪ್ಪಿಸುತ್ತಿರುವ ಸರ್ವಾಧಿಕಾರಿ ಎಂದೂ ಹೇಳಿದೆ.
ಒಂದೇ ಎರಡೇ.. ಹೆಸರಿಗೆ ಮಾತ್ರ ಅಹಿಂದಾ, ಅಧಿಕಾರ ಸೂತ್ರವೆಲ್ಲ ನನ್ನದೇ ಎನ್ನುವ ಢೋಂಗಿ ಸಮಾಜವಾದಿ ವೈಟ್ನರ್ ತೇಪೆಗಳಿಗೂ ಈಗ ರಂಧ್ರಗಳು ಬೀಳುತ್ತಿವೆ ಎಂದು ಅತ್ಯಂತ ತೀಕ್ಷ್ಣವಾಗಿ ಟ್ವೀಟ್ ಮಾಡಲಾಗಿದೆ. ಸಮಾವೇಶ ನಡೆಯುವ ಸಂದರ್ಭದಿಂದ ಇಲ್ಲಿಯ ವರೆಗೆ ಜೆಡಿಎಸ್ ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುತ್ತಿದೆ.












Click it and Unblock the Notifications