ಮಹಿಳಾ ಅಭ್ಯರ್ಥಿಯ ಎದುರು ದೇವೇಗೌಡ್ರು ಸೋಲ್ತಾರಾ?
ಜ್ಯೋತಿಷಿಗಳ ಮಾತನ್ನು ವಸ್ತುನಿಷ್ಠವಾಗಿ ಆಲಿಸಿ, ಪಾಲಿಸಿಕೊಂಡು ಬರುವ ದೇವೇಗೌಡರಿಗೆ ಚುನಾವಣೆಯಲ್ಲಿ ಮಹಿಳೆ ಎದುರಾಳಿಯಾದರೆ ಸೋಲು ಎನ್ನುವ ಭವಿಷ್ಯವನ್ನು ಹಿಂದೊಮ್ಮೆ ಜ್ಯೋತಿಷಿಗಳು ನುಡಿದಿದ್ದರಂತೆ. ಅದು ನಿಜವೇ?
ಆ ಭವಿಷ್ಯದ ಸತ್ಯಾಸತ್ಯತೆಯನ್ನು ಹುಡುಕಿ ಕೊಂಡು ಹೋದಾಗ ದೇವೇಗೌಡರ ರಾಜಕೀಯ ಜೀವನದಲ್ಲಿ ಅವರಿಗೆ ಮಹಿಳೆಯರು ಎದುರಾಳಿಯಾದ ಉದಾಹರಣೆ ಒಂದೇ ಬಾರಿ. ಅದು 2004ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕನಕಪುರ (ಇಂದಿನ ಬೆಂಗಳೂರು ಗ್ರಾಮಾಂತರ) ಕ್ಷೇತ್ರ.
ದೇವೇಗೌಡರನ್ನು ಶತಾಯುಗತಾಯು ಸೋಲಿಸಲೇ ಬೇಕೆಂದು ಹಠಕ್ಕೆ ಬಿದ್ದಿದ್ದ ಅವರ ಕಟ್ಟಾ ರಾಜಕೀಯ ವಿರೋಧಿ ಡಿ ಕೆ ಶಿವಕುಮಾರ್ ಆ ಸಮಯದಲ್ಲಿ ತನ್ನ ಪರಮಾಪ್ತೆಯಾಗಿದ್ದ ತೇಜಶ್ವಿನಿ ರಮೇಶ್ ಅವರನ್ನು ಕಣಕ್ಕಿಳಿಸಿದ್ದರು. (ದೇವೇಗೌಡರ ಮನೆಯಲ್ಲಿ ವಾರಗಿತ್ತಿಯರ ಕಲಹ)
ಚುನಾವಣೆಯಲ್ಲಿ ಕನಕಪುರ ಲೋಕಸಭಾ ವ್ಯಾಪ್ತಿಯಲ್ಲಿ ಹಣ, ಹೆಂಡದ ಹೊಳೆಯೇ ಹರಿದಿತ್ತು. ದೇಶದ ಅತ್ಯಂತ ಸೂಕ್ಷ್ಮ ಕ್ಷೇತ್ರ ಎನ್ನುವ ಕುಖ್ಯಾತಿಯನ್ನೂ ಪಡೆಯಿತು. ಡಿಕೆಶಿ ಮತ್ತು ಗೌಡ್ರ ನಡುವಣ ಪ್ರತಿಷ್ಠೆಯ ರಾಜಕೀಯ ಮೇಲಾಟದಲ್ಲಿ ಅಚ್ಚರಿ ಎನ್ನುವಂತೆ ದೇವೇಗೌಡರು 116,863 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಮಹಿಳೆಯಿಂದ ಗೌಡರಿಗೆ ಸೋಲು ಎಂದೇ ಅಂದು ವ್ಯಾಖ್ಯಾನಿಸಲಾಗಿತ್ತು.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೌಡ್ರ ಪುತ್ರ ರೇವಣ್ಣ ತನ್ನ ಎದುರಾಳಿ ಮಹಿಳೆ ಎಂದು ಅಧಿಕೃತವಾದ ನಂತರ ಹೊಳೇನರಸೀಪುರ ಕ್ಷೇತ್ರದ ಬದಲಾಗಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಅದು ವರ್ಕೌಟ್ ಆಗಿರಲಿಲ್ಲ.

ಹೊಳೇನರಸೀಪುರದಲ್ಲಿ ಅಂದು ಏನಾಗಿತ್ತು?
ಹಾಸನದಲ್ಲಿ ಗೌಡ್ರ ಕಟ್ಟಾ ರಾಜಕೀಯ ವಿರೋಧಿ ದಿ. ಶ್ರೀಕಂಠಯ್ಯ ಅವರ ಸೊಸೆ ಎಸ್ ಜಿ ಅನುಪಮ, ರೇವಣ್ಣ ವಿರುದ್ದ ಹೊಳೇನರಸೀಪುರದಲ್ಲಿ ಕಣಕ್ಕಿಳಿದಿದ್ದರು. ರೇವಣ್ಣ ತನ್ನ ಪತ್ನಿ ಜೊತೆ ಕ್ಷೇತ್ರದಲ್ಲಿ ಬೀಡು ಬಿಟ್ಟು ಬಿರುಸಿನ ಪ್ರಚಾರ ನಡೆಸಿದ್ದರು. ರೇವಣ್ಣ 30,058 ಅಂತರದಲ್ಲಿ ಗೆದ್ದು ಅಸೆಂಬ್ಲಿ ಪ್ರವೇಶಿಸಿದ್ದರು.

ಹುಸಿಯಾದ ಭವಿಷ್ಯ
ಮಹಿಳೆ ಎದುರಾಳಿಯಾದರೆ ಸೋಲು ಖಚಿತ ಎನ್ನುವ ಭವಿಷ್ಯ ಗೌಡ್ರ ಕುಟುಂಬದ ವಿಚಾರದಲ್ಲಿ ಅಂದು ಹುಸಿಯಾಗಿತ್ತು. ಆದರೆ, ಅವರ ಎದುರಾಳಿ ಪಕ್ಷಗಳು ಇದನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾಗುತ್ತಿವೆಯೇ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುವಂತೆ ಮಾಡಿರುವುದು ಈಗಿನ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ.

ಮಹಿಳೆ ಹೆಸರು ತೇಲಿಬಿಟ್ಟ ಬಿಜೆಪಿ
ಕೆಲವು ದಿನಗಳ ಇದೇ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ದೇವೇಗೌಡರ ವಿರುದ್ದ ಸ್ಪರ್ಧಿಸಲು ಹಿರಿಯ ನಟಿ ಶೃತಿ ಹೆಸರನ್ನು ಬಿಜೆಪಿ ತೇಲಿ ಬಿಟ್ಟಿದ್ದು ಗೌಡರ ಜ್ಯೋತಿಷ್ಯ ಭವಿಷ್ಯದ ನಂಬಿಕೆಗೆ ಸವಾಲು ಎನ್ನುವಂತಿತ್ತು. ಶೃತಿ ತಾಯಿ ಕೂಡಾ ಹಾಸನ ಮೂಲದವರು, ಹಾಗಾಗಿ ಗೌಡರ ವಿರುದ್ದ ಸ್ಪರ್ಧಿಸಲು ಶೃತಿ ಹೆಸರನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿ, ಅವರ ಹೆಸರನ್ನು ತೇಲಿ ಬಿಟ್ಟಿದ್ದರು.

ವಿಜಯ್ ಶಂಕರ್
ಆದರೆ, ಸದ್ಯ ಹಾಸನದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ವಿಜಯಶಂಕರ್ ಅವರ ಹೆಸರನ್ನು ಮಾತ್ರ ಬಿಜೆಪಿ ಅಖೈರು ಮಾಡಿದೆ. ಮೈಸೂರು ಮೂಲದ ಸಿ ಎಚ್ ವಿಜಯಶಂಕರ್ ಹಾಸನದಿಂದ ಸ್ಪರ್ಧಿಸಲು ಬಿಲ್ ಕುಲ್ ಒಪ್ಪದೇ ಇರುವುದರಿಂದ ಅಂತಿಮವಾಗಿ ಬಿಜೆಪಿ ಬಿ-ಫಾರಂ ಈ ಕ್ಷೇತ್ರದಲ್ಲಿ ಯಾರಿಗೆ ನೀಡಲಿದೆ ಎನ್ನುವದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ. ನವಿಲೆ ಅಣ್ಣಪ್ಪ ಅವರ ಹೆಸರೂ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಈಗಾಗಲೇ ಗೌಡರ ವಿರುದ್ದ ಎ ಮಂಜು ಅವರನ್ನು ಕಣಕ್ಕಿಳಿಸಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆ
ಕಳೆದ ಬಾರಿಯ (2009) ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ ಎಚ್ ಹನುಮೇ ಗೌಡ ಅವರನ್ನು ಸುಮಾರು 2.9 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ ಶಿವರಾಮು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಬಿಜೆಪಿಗೆ ಇಲ್ಲಿ ನೆಲೆ ಇಲ್ಲ ಎಂದೇನೂ ಇಲ್ಲ
ಕಳೆದ ಚುನಾವಣೆಯ ಕೋನದಲ್ಲಿ ನೋಡುವುದಾದರೆ ಬಿಜೆಪಿಗೆ ಇಲ್ಲಿ ನೆಲೆ ಇಲ್ಲ ಎಂದೇನೂ ಇಲ್ಲ. ದೇಶದೆಲ್ಲಡೆ ಇರುವ ನರೇಂದ್ರ ಮೋದಿ ಹವಾದ ಜೊತೆಗೆ ಬಿಜೆಪಿ ಅತಿಯಾಗಿ ಭವಿಷ್ಯವನ್ನು ನಂಬುವ ಗೌಡರ ವಿರುದ್ದ ಮಹಿಳೆ ಎನ್ನುವ ಅಸ್ತ್ರವನ್ನು ಬಳಸಿಕೊಳ್ಳಲು ಮುಂದಾಗಲಿದೆಯೇ ಎನ್ನುವುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ.












Click it and Unblock the Notifications