ಮೈತ್ರಿ ಸರಕಾರ ಉಳಿಯಲ್ಲ ಎಂಬ ಬಗ್ಗೆ ದೇವೇಗೌಡರಿಗೆ ಮುಂಚೆಯೇ ಗೊತ್ತಿತ್ತೆ?
ಚುನಾವಣೆಗೆ ಸಿದ್ಧರಾಗಿ, ಈ ಸರಕಾರ ಬಹಳ ದಿನಗಳ ಕಾಲ ಉಳಿಯುವ ಸಾಧ್ಯತೆ ಇಲ್ಲ ಎಂದಿದ್ದರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು. ಅಷ್ಟೇ ಅಲ್ಲ, ರಾಜ್ಯದಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂಬ ಮಾತನ್ನು ಹೇಳಿದ್ದರು. ಈ ಎರಡೂ ವಿಚಾರವನ್ನು ಅವರು ತಿಳಿಸಿ ಹದಿನೈದು ದಿನ ಆಗಿರಬಹುದು ಅಷ್ಟೇ.
ದೇವೇಗೌಡರಂಥ ಅನುಭವಿ ರಾಜಕಾರಣಿಗೆ ಯಾವ ಸ್ಥಿತಿ ಎತ್ತ ಕರೆದೊಯ್ಯಬಹುದು ಎಂದು ಊಹಿಸುವುದು ಕಷ್ಟವಲ್ಲ. ಈ ಪೈಕಿ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಎಂಬ ಮಾತು ಸಮ್ಮಿಶ್ರ ಸರಕಾರದಲ್ಲಿ ಸಾಮಾನ್ಯ ಎಂದುಕೊಳ್ಳಬಹುದಾದರೂ ಪಕ್ಷ ಸಂಘಟನೆಗೆ ರಾಜ್ಯದಾದ್ಯಂತ ಪ್ರವಾಸ ಮಾಡುವ ಅಗತ್ಯ ಏನು ಎಂಬ ಪ್ರಶ್ನೆ ಮೂಡುತ್ತದೆ.
ಯಾರ್ಯಾರು ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದ ದೇವೇಗೌಡರು
ಜೆಡಿಎಸ್ ಅಧಿಕಾರದಲ್ಲೇ ಇದ್ದು, ಆ ಪಕ್ಷದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಇನ್ನು ಚುನಾವಣೆ ದೂರ ಇದೆ ಅನ್ನೋದಾದರೆ ಪಕ್ಷ ಸಂಘಟನೆಗೆ ಇಷ್ಟು ಬೇಗ ರಾಜ್ಯ ಪ್ರವಾಸ ಅಗತ್ಯ ಏನಿತ್ತು ಎಂಬ ಪ್ರಶ್ನೆ ಎದುರಾಗುತ್ತದೆ. ಅಲ್ಲಿಗೆ ದೇವೇಗೌಡರಿಗೆ ರಾಜ್ಯದಲ್ಲಿ ಚುನಾವಣೆ ನಡೆಯುವ ಬಗ್ಗೆ ಸೂಚನೆ ಸಿಕ್ಕಿತ್ತು ಅಂತಲ್ಲವೆ?
ರಾಜ್ಯದಲ್ಲಿ ತಕ್ಷಣಕ್ಕೆ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದ್ದು, ಈ ವರ್ಷದ ಡಿಸೆಂಬರ್ ನೊಳಗೆ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದಲೇ ದೇವೇಗೌಡರು ಸರಕಾರ ಉರುಳುವ ಸಾಧ್ಯತೆ ಬಗ್ಗೆ ಮಾತನಾಡಿದ್ದರು.