ರಾಜ್ಯ ಸರ್ಕಾರದಿಂದ ತಮಗೂ ಏನಾದರೂ ಪಾಲು ಸಿಕ್ಕಿದೆಯಾ? ನಿತಿನ್ ಗಡ್ಕರಿಗೆ ಪ್ರಶ್ನಿಸಿದ ಜೆಡಿಎಸ್
ಬೆಂಗಳೂರು,ಜನವರಿ 5: 40% ಕಮಿಷನ್ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸ್ವಾಗತ ಎಂದು ಬಿಜೆಪಿ ವಿರುದ್ದ ಜೆಡಿಎಸ್ ಕಿಡಿಕಾರಿದೆ.
ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಟ್ವೀಟ್ ವಾರ್ ಮುಂದುವರೆದಿದ್ದು, ಇಂದು ಸಹ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದ ರಸ್ತೆ ಕಿತ್ತು ಹೋದ ಸಂಗತಿ ರಾಜ್ಯದ ಜನತೆಗೆ ಗೊತ್ತಿದೆ. ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ, ಅದೇ ಪಕ್ಷದ ರಸ್ತೆ ಸಾರಿಗೆ ಹಾಗೂ ಹೆದ್ದಾರಿಯ ಕೇಂದ್ರ ಸಚಿವರಾಗಿರುವ ತಾವು ಯಾವ ಸಲಹೆ ಕೊಡಲು ಬಯಸುತ್ತೀರಿ? ಎಂದು ನಿತಿನ್ ಗಡ್ಕರಿಗೆ ಜೆಡಿಎಸ್ ಪ್ರಶ್ನಿಸಿದೆ.
ಬೆಂಗಳೂರು-ಮೈಸೂರು ದಶಪಥ ಮುಖ್ಯ ಹೆದ್ದಾರಿಯು ಮಳೆಯ ಕಾರಣದಿಂದ ಜಲಾವೃತಗೊಂಡಾಗ ಜನರ ಸಂಕಷ್ಟ ಆಲಿಸಲು ಬಾರದ ಕೇಂದ್ರ ಸಚಿವರೆ, ಅದ್ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಿದ್ದೀರಿ? ಈಗ ಅದೇ ರಸ್ತೆ ಕಾಮಗಾರಿಯ ವೈಮಾನಿಕ ಸಮೀಕ್ಷೆ ಮಾಡಲು ಬಂದಿರುವ ತಮಗೆ ಅಲ್ಲಿನ ಅಸಮರ್ಪಕತೆ ವಿಷಯಗಳು ತಿಳಿದಿಲ್ಲವೆ? ಎಂದು ಪ್ರಶ್ನಿಸಿದೆ.
40% ಕಮಿಷನ್ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ @nitin_gadkari ಅವರಿಗೆ ಸ್ವಾಗತ!
— Janata Dal Secular (@JanataDal_S) January 5, 2023
1/7
ಸುರಕ್ಷತೆಗಿಂತ ಅಸುರಕ್ಷತೆಯೇ ಹೆಚ್ಚಾಗಿರುವ ಈ ರಸ್ತೆಯಲ್ಲಿ ಸಿಸಿಟಿವಿಗಳು ಯಾಕೆ ಅಳವಡಿಕೆಯಾಗಿಲ್ಲ? ಇವೇ ಕಾರಣಗಳಿಂದ ಸಂಭವಿಸಿರುವ ಹತ್ತಾರು ಅಪಘಾತಗಳಿಗೆ ಯಾರು ಜವಾಬ್ದಾರರು? ಅಪಘಾತ ತಡೆ ಸಂಬಂಧ ಪೆಟ್ರೋಲಿಂಗ್ ಯಾಕೆ ಇನ್ನೂ ಆರಂಭವಾಗಿಲ್ಲ? ಸರ್ವೀಸ್ ರಸ್ತೆಯಲ್ಲಿ ವೇಗ ಮಿತಿಗಾಗಿ ವೈಜ್ಞಾನಿಕವಾಗಿ ಹಂಪ್ ಗಳನ್ನು ನಿರ್ಮಿಸಿಲ್ಲ? ಎಂದು ಹಲವು ಪ್ರಶ್ನೆಗಳನ್ನ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರ ಮುಂದೆ ಇಟ್ಟಿದೆ.

ಇದೇ ದಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಸಭೆಗಳು, ನೀಡಿದ ನೆರವು ಮರೆತುಬಿಟ್ರಾ? ಇದೆಲ್ಲ ಹೋಗಲಿ, ನೀವು ಮಾಡಿರುವ ಕೆಲಸವಾದರೂ ನೆಟ್ಟಗಿದೆಯಾ? ಎಂದು ಜೆಡಿಎಸ್ ಪ್ರಶ್ನಿಸುವ ಮೂಲಕ ಕುಟುಕಿದೆ.
ಬಿಜೆಪಿ ಆಡಳಿತ ಬಂದ ನಂತರ ಈ ಯೋಜನೆಗೆ ಅವೈಜ್ಞಾನಿಕವಾಗಿ ಭೂಸ್ವಾಧೀನ ಪಡಿಸಿಕೊಂಡು ಲೂಟಿ ಹೊಡೆದ ವಿಷಯಗಳು ತಮಗೆ ತಿಳಿದಿಲ್ಲವೇ, ನಿತಿನ್ ಗಡ್ಕರಿ ಅವರೆ? ಅಥವಾ 40% ಕಮಿಷನ್ ಹೊಡೆಯುವ ದಂಧೆಯಲ್ಲಿ ನಿರತರಾಗಿರುವ ನಿಮ್ಮದೇ ರಾಜ್ಯ ಸರ್ಕಾರದಿಂದ ತಮಗೂ ಏನಾದರೂ ಪಾಲು ಸಿಕ್ಕಿದೆಯಾ? ಎಂದು ಪ್ರಶ್ನಿಸಿದೆ.
ಈ ರಸ್ತೆಯ ಕಾಮಗಾರಿಗೆ ಸಂಬಂಧಿಸಿದ ಮಹತ್ವದ ಕಾರ್ಯಗಳಿಗೆ ಅನುಕೂಲವಾಗುವ ಹಲವು ನಿರ್ಧಾಗಳನ್ನು ತೆಗೆದುಕೊಂಡಿದ್ದು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು. ವೈಮಾನಿನ ಸಮೀಕ್ಷೆಗೆ ಬಂದಿರುವ ಗಡ್ಕರಿ ಅವರೆ, ಈ ರಸ್ತೆ ಕಾಮಗಾರಿಯಲ್ಲಿ ನಡೆದ ಅಕ್ರಮದ ಬಗ್ಗೆ ತುಟಿ ಬಿಚ್ಚುತ್ತೀರೋ? ಎಂದು ಜೆಡಿಎಸ್ ರಾಜ್ಯ ಘಟಕ ಪ್ರಶ್ನಿಸಿದೆ.












Click it and Unblock the Notifications