ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ? ಮಾಧುಸ್ವಾಮಿಗೆ ಜೆಡಿಎಸ್ ಪ್ರಶ್ನೆ
ಬೆಂಗಳೂರು,ಜನವರಿ23: ನೆಟ್ಟಗೆ ಆಡಳಿತ ನಡೆಸಲು ಬಾರದ ರಾಜ್ಯ ಬಿಜೆಪಿ ಸರ್ಕಾರದ ಕುಕೃತ್ಯಗಳಿಗೆ ಬೌದ್ಧಿಕ ಪೋಷಾಕು ತೊಡಿಸಿ, ಸಮರ್ಥನೆಗೆ ಇಳಿಯುವ ಮೊಂಡುವಾದಿ ಸಚಿವ ಮಾಧುಸ್ವಾಮಿ ಅವರೇ ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ? ಅಥವಾ ಈ ರೀತಿ ಮಾತಿನ ಬೇಧಿಯಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರವೆ? ಎಂದು ಜೆಡಿಎಸ್ ರಾಜಾfಯ ಘಟಕ ಸಚಿವ ಮಾಧುಸ್ವಾಮಿ ಅವರನ್ನ ಪ್ರಶ್ನಿಸಿದೆ.
ಗೌಡರ ಕುಟುಂಬದಲ್ಲಿ ಎಲ್ಲರೂ ದೋಚಲು ಶುರು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಚಿವ ಮಾಧುಸ್ವಾಮಿ ಅವರಿಗೆ ಟ್ವೀಟ್ ಮೂಲಕ ಜೆಡಿಎಸ್ ತಿರುಗೇಟು ನೀಡಿದೆ. ಆಡಳಿತ ನಡೆಸುವ ಬದಲು ಸರ್ಕಾರವು ಏನೋ ಒಂದು ನಿಭಾವಣೆ ಮಾಡುತ್ತಾ, ಕಾಲತಳ್ಳುತ್ತಿದ್ದೆ ಎಂದು ಹೇಳಿದ ಭೂಪ ನೀವೇ ಅಲ್ಲವೆ? 40% ಕಮಿಷನ್ ಸರ್ಕಾರವೆಂದೆ ಕುಖ್ಯಾತವಾಗಿರುವ ನಿಮ್ಮ ಸರ್ಕಾರ ದೋಚುತ್ತಿರುವ ಸಾರ್ವಜನಿಕರ ಹಣದ ಬಗ್ಗೆ ಲೆಕ್ಕ ಇದೆಯೆ? ಯಾವ ಮುಖ ಇಟ್ಟುಕೊಂಡು ದೇವೇಗೌಡರ ಕುಟುಂಬದ ಬಗ್ಗೆ ಜನತೆಯ ಮುಂದೆ ಹಸಿಸುಳ್ಳು ಹೇಳುತ್ತಿದ್ದೀರಿ? ಎಂದು ಜೆಡಿಎಸ್ ಕಿಡಿಕಾರಿದೆ'.

ಮಾಧುಸ್ವಾಮಿ ಅವರೆ, ದೇವೇಗೌಡರು ಕೆಳಮಟ್ಟದಿಂದ ಬೆಳೆದು ದೇಶದ ಪ್ರಧಾನಿ ಸ್ಥಾನ ಅಲಂಕರಿಸಿದವರು. ರಾಜ್ಯದ ಜನತೆಯ ಸ್ವಾಭಿಮಾನ ಮತ್ತು ನೆಮ್ಮದಿ ಕಾಪಾಡಲು ಈ ಇಳಿವಯಸ್ಸಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ. ಸವೆಸಿದ ಹಾದಿಯ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಹೆಮ್ಮಯಿದೆ. ಹಲಾಲುಟೋಪಿ ಕೆಲಸ ಮಾಡುತ್ತಾ, ಮೇಲೆ ಬಂದವರಲ್ಲ ಅವರು ಎಂದು ಮಾಧುಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದೆ.

ಸೋಲು-ಗೆಲುವುಗಳಿಂದ ಯಾರೂ ಹೊರತಾಗಿಲ್ಲ. ಆದರೆ, ಅಧಿಕಾರವಿಲ್ಲದಿದ್ದರೂ ಕನ್ನಡಿಗರ ಏಳ್ಗೆಗೆ ಪ್ರಾಮಾಣಿಕವಾಗಿ ದುಡಿಯುವ ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟರೆ, ಜನತೆ ನಿಮಗೆ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ. ನಿಮ್ಮ ದುರಹಂಕಾರದ ಕತೆ ರಾಜ್ಯದ ಜನತೆಗೆ ಗೊತ್ತೇ ಇದೆ ಎಂದು ಟ್ವೀಟ್ ಮೂಲ ಜೆಡಿಎಸ್ ಕುಟುಕಿದೆ.












Click it and Unblock the Notifications