ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲಿದ್ದಾರೆ ವಿಶ್ವನಾಥ್, ಕಾರಣ ಏನು?
ಬೆಂಗಳೂರು, ಜನವರಿ 01: ಅಧಿಕಾರರೂಢ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಎಚ್.ವಿಶ್ವನಾಥ್ ಚಿಂತಿಸುತ್ತಿದ್ದಾರೆ.
ಮೈತ್ರಿ ಸರ್ಕಾರ ರಚನೆ ಆದ ಬೆನ್ನಿಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದ್ದ ಎಚ್.ವಿಶ್ವನಾಥ್ಗೆ ಇಷ್ಟು ಬೇಗ ಹುದ್ದೆ ಬೇಡವಾಗಲು ಕಾರಣ, ಅವರ ಆರೋಗ್ಯ.
ಆರೋಗ್ಯ ಸಮಸ್ಯೆಯಿಂದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಕ್ಕಾಗುತ್ತಿಲ್ಲವೆಂದು ಸ್ವತಃ ವಿಶ್ವನಾಥ್ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಅನಾರೋಗ್ಯದಿಂದಾಗಿ ಪಕ್ಷದ ಸಂಘಟನೆಗೆ ಪೂರ್ಣವಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ, ಹಾಗಾಗಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವಂತೆ ವರಿಷ್ಠರನ್ನು ಕೇಳೋಣ ಎಂದುಕೊಂಡಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದರು.

ಜನವರಿ 3 ರಂದು ದೇವೇಗೌಡರ ಜೊತೆ ಚರ್ಚೆ
ಜನವರಿ ಮೂರನೇ ತಾರೀಖು ಜೆಡಿಎಸ್ ಪಕ್ಷದ ಮುಖಂಡರ ಸಭೆ ಇದ್ದು, ಅದೇ ಸಭೆಯಲ್ಲಿ ದೇವೇಗೌಡರೊಂದಿಗೆ ಈ ವಿಷಯ ಚರ್ಚಿಸಿ, ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕೆಳಗಿಸುವಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ದೇವೇಗೌಡರ ಕೊಂಡಾಡಿದ ವಿಶ್ವನಾಥ್
ಇದೇ ಸಮಯದಲ್ಲಿ ದೇವೇಗೌಡ ಅವರನ್ನು ಕೊಂಡಾಡಿದ ವಿಶ್ವನಾಥ್ ಅವರು, 'ದೇವೇಗೌಡರು ಹಿರಿಯರು, ಅನುಭವಿಗಳು, ಮುತ್ಸದಿಗಳು. ನನ್ನ ರಾಜಕೀಯ ಸಂಧ್ಯಾಕಾಲದಲ್ಲಿ ನಾನು ಶಾಸಕನಾಗಲು ಅವಕಾಶ ನೀಡಿದರು' ಎಂದು ಹೇಳಿದರು.

ಜೆಡಿಎಸ್ಗೆ ಅಲ್ಪ ಹಿನ್ನಡೆ
ಲೋಕಸಭೆ ಚುನಾವಣೆ ಮುಂದಿರುವ ಸಮಯದಲ್ಲಿ ಹಿರಿಯ ರಾಜಕೀಯ ಪಟು ವಿಶ್ವನಾಥ್ ಅವರು ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಜೆಡಿಎಸ್ಗೆ ಹಿನ್ನಡೆ ಆಗಲಿದೆ. ವಿಶ್ವನಾಥ್ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಯಾರನ್ನು ತಂದು ಕೂರಿಸುತ್ತಾರೆ ಎಂಬುದು ಸಹ ಕುತೂಹಲ.

ಹಲವರು ಇದ್ದಾರೆ ರೇಸಿನಲ್ಲಿ
ಬಸವರಾಜ ಹೊರಟ್ಟಿ, ವೈಎಸ್ವಿ ದತ್ತ, ಶರವಣ ಅವರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರೇಸಿನಲ್ಲಿದ್ದಾರೆ. ಈ ಮುಂಚೆ ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಿದ್ದರು, ಸಿಎಂ ಆದ ಬಳಿಕ ವಿಶ್ವನಾಥ್ ಅವರನ್ನು ದೇವೇಗೌಡರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದರು.












Click it and Unblock the Notifications