ಅವಿಶ್ವಾಸ ನಿರ್ಣಯ ಮಂಡನೆಗೆ ಅಸ್ತು ಎಂದ ಸ್ಪೀಕರ್
ಬೆಂಗಳೂರು, ಜುಲೈ 14 : ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಒಪ್ಪಿಗೆ ನೀಡಿದ್ದಾರೆ. ಜೆಡಿಎಸ್ನ 28 ಶಾಸಕರು ಅವಿಶ್ವಾಸ ನಿರ್ಣಯದ ಪರವಾಗಿದ್ದಾರೆ. ಈ ಬಗ್ಗೆ ಚರ್ಚಿಸಲು ದಿನಾಂಕ ನಿಗದಿಪಡಿಸುವುದಾಗಿ ಸ್ಪೀಕರ್ ಹೇಳಿದ್ದಾರೆ.
ಸೋಮವಾರದ ಕಲಾಪದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಅವಕಾಶ ನೀಡುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ಪಕ್ಷದ ಶಾಸಕರು ಎದ್ದು ನಿಂತು ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಸ್ಪೀಕರ್ ಸೂಚನೆ ನೀಡಿದರು. [ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೇಳಿದ ಜೆಡಿಎಸ್]

ಈ ಸಂದರ್ಭದಲ್ಲಿ ಜೆಡಿಎಸ್ನ 28 ಶಾಸಕರು ಎದ್ದು ನಿಲ್ಲುವ ಮೂಲಕ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದರು. ಪ್ರಸ್ತಾಪ ಮಂಡಿಸಲು 23 ಶಾಸಕರ ಬೆಂಬಲ ಬೇಕಾಗಿತ್ತು. 28 ಶಾಸಕರು ಬೆಂಬಲ ನೀಡಿದ್ದರಿಂದ ಪ್ರಸ್ತಾವನೆಯನ್ನು ಸ್ಪೀಕರ್ ಅಂಗೀಕರಿಸಿದರು.[ಸೋಮವಾರದ ಕಲಾಪದ ಮುಖ್ಯಾಂಶಗಳು]
ಚರ್ಚೆ ಮಾಡೋಣ ಅಂದ್ರು ಸಿಎಂ : ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಒಪ್ಪಿಗೆ ಸಿಕ್ಕ ತಕ್ಷಣ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಕ್ಷಣ ಚರ್ಚೆ ನಡೆಸಲು ಅವಕಾಶ ಕೊಡಿ, ಉತ್ತರ ನೀಡಲು ತಾವು ಸಿದ್ಧರಾಗಿರುವುದಾಗಿ ಸ್ಪೀಕರ್ಗೆ ಮನವಿ ಮಾಡಿದರು.
ಸರ್ಕಾರ ಮತ್ತು ಸಚಿವ ಸಂಪುಟದ ಮೇಲೆ ವಿಶ್ವಾಸವಿಲ್ಲವೆಂದು ನಿರ್ಣಯ ಮಂಡಿಸಿದ್ದಾರೆ. ಈ ಕುರಿತು ಈಗಲೇ ಚರ್ಚಿಸಲಿ ಎಂದರು. ಈಗ ರೈತರ ಆತ್ಮಹತ್ಯೆ ಪ್ರಕರಣದ ವಿಚಾರವಾಗಿ ಚರ್ಚಿಸಲು ಬಿಜೆಪಿ ಅವಕಾಶ ಕೋರಿದೆ. ಜೆಡಿಎಸ್ಗೆ ನಂತರ ಸಮಯ ನಿಗದಿ ಮಾಡಲಾಗುವುದು ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು.
ನಾವು ಚರ್ಚೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಆದರೆ, ನಿಯಮಾವಳಿ ಪ್ರಕಾರ 2ರಿಂದ 3 ದಿನದೊಳಗೆ ಅಧ್ಯಕ್ಷರು ಸಮಯ ನಿಗದಿ ಮಾಡಲಿ ಎಂದರು.
ಸರ್ಕಾರಕ್ಕ ಧಕ್ಕೆ ಇಲ್ಲ : ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದರೂ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. . ಬಿಜೆಪಿ ಜೆಡಿಸ್ ಜೊತೆ ಅವಿಶ್ವಾಸ ನಿರ್ಣಯಕ್ಕೆ ಕೈಜೋಡಿಸಿದರೂ ಒಟ್ಟು 84 ಸದಸ್ಯರ ಬಲ ಸಿಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.
ಶಾಸಕರ ಬಲಾಬಲ
* 224 ಸಂಖ್ಯಾಬಲದ ಕರ್ನಾಟಕ ವಿಧಾನಸಭೆ
* ಕಾಂಗ್ರೆಸ್ 123
* ಬಿಜೆಪಿ 44
* ಜೆಡಿಎಸ್ 40 ಶಾಸಕರು












Click it and Unblock the Notifications