ಜ್ಯೋತಿಷಿಗಳ ಸಲಹೆ: ಇಂದೇ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
Recommended Video

ಬೆಂಗಳೂರು, ಮಾರ್ಚ್ 21: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣಾ ಕಣ ಈಗಾಗಲೇ ಕಾವು ಪಡೆದುಕೊಂಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಕಣಕ್ಕಿಳಿದಿರುವುದು ಮತ್ತು ಅವರಿಗೆ ದೊರೆತಿರುವ ಬೆಂಬಲ ಪೈಪೋಟಿಯನ್ನು ತೀವ್ರಗೊಳಿಸುವ ಸೂಚನೆ ನೀಡಿದೆ.
ಈ ನಡುವೆ ಮಾರ್ಚ್ 25ರಂದು ನಾಮಪತ್ರ ಸಲ್ಲಿಸುವುದಾಗಿ ನಿರ್ಧರಿಸಿದ್ದ ನಿಖಿಲ್ ಕುಮಾರಸ್ವಾಮಿ, ಗುರುವಾರವೇ ನಾಮಪತ್ರ ಸಲ್ಲಿಸಲು ಮನಸ್ಸು ಬದಲಿಸಿದ್ದಾರೆ. ಇದಕ್ಕೆ ಜ್ಯೋತಿಷಿಗಳ ಸಲಹೆ ಕಾರಣ ಎನ್ನಲಾಗಿದೆ.
ಜ್ಯೋತಿಷಿಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ದೇವೇಗೌಡರ ಕುಟುಂಬ ನಾಮಪತ್ರ ಸಲ್ಲಿಕೆಯ ದಿನಾಂಕವನ್ನು ಬದಲಿಸಿದೆ. ಆದರೆ, ಗುರುವಾರ ಸಲ್ಲಿಸಲಿರುವ ನಾಮಪತ್ರ ಸಾಂಕೇತಿಕವಾಗಿರಲಿದೆ. ಸಂಪೂರ್ಣ ದಾಖಲಾತಿಗಳನ್ನು ಅವರು ಈ ವೇಳೆ ಸಲ್ಲಿಸುವುದಿಲ್ಲ.

ಗುರುವಾರ ಮಧ್ಯಾಹ್ನ 3.30ರವರೆಗೂ ಶುಭ ಗಳಿಗೆ ಇರಲಿದೆ. ಈ ಸಮಯದಲ್ಲಿ ಅಂದುಕೊಂಡ ಕೆಲಸ ನೆರವೇರಲಿದೆ. ಹೀಗಾಗಿ ಗುರುವಾರವೇ ನಾಮಪತ್ರ ಸಲ್ಲಿಸುವುದು ಒಳಿತು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ ಮತ್ತು ಅನಿತಾ ಕುಮಾರಸ್ವಾಮಿ ಅವರು ಬೆಳಿಗ್ಗೆ 9 ಗಂಟೆಗೆ ಮಂಡ್ಯಕ್ಕೆ ತೆರಳಲಿದ್ದಾರೆ. ನಿಖಿಲ್ ನಾಮಪತ್ರ ಸಲ್ಲಿಸುವ ವೇಳೆ ದೇವೇಗೌಡರ ಕುಟುಂಬದ ಉಪಸ್ಥಿತಿ ಇರಲಿದೆ.
ನಾಮಪತ್ರ ಸಲ್ಲಿಕೆಯ ದಿನಾಂಕವನ್ನು ದಿಢೀರ್ ಬದಲಾವಣೆ ಮಾಡಿದ್ದರೂ ಒಂದು ಸೆಟ್ ನಾಮಪತ್ರವನ್ನು ಮಾತ್ರ ಸಲ್ಲಿಸಲಾಗುತ್ತದೆ. ಎರಡನೆಯ ಸೆಟ್ಅನ್ನು ಮಾರ್ಚ್ 25ರಂದು ಸಲ್ಲಿಕೆ ಮಾಡಲು ನಿರ್ಧರಿಸಲಾಗಿದೆ.












Click it and Unblock the Notifications