ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ: ಕುಮಾರಸ್ವಾಮಿ ಆಗ್ರಹ
ಮೈಸೂರು, ಜುಲೈ 06: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೆಎಸ್ಆರ್ಟಿಸಿ ಉದ್ಯೋಗಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಎನ್ ಚಲುವರಾಯಸ್ವಾಮಿ ವಜಾಗೊಳಿಸುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಸದ್ಯಕ್ಕೆ ವೆಂಟಿಲೇಟರ್ನಲ್ಲಿ ಇದ್ದಾರೆ. ಸರ್ಕಾರ ಬಂದು ಐವತ್ತು ದಿನ ಆಗಿಲ್ಲ. ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯತಿ ಸದಸ್ಯರು. ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಬಂದಿದೆ.ಆದರೆ ಇನ್ನೂ ಒಂದು ತಿಂಗಳಾಗಿಲ್ಲ.ಆಗಲೇ ದ್ವೇಷ ರಾಜಕಾರಣ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.

ಊರಿನಲ್ಲಿರುವ ರೌಡಿ, ಚೇಲಾ ಮಹದೇವ ಎಂಬಾತ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ. ಮತ್ತೊಂದೆಡೆ ಜಗದೀಶ್ ಗೆ ಅಧಿಕಾರಿಗಳ ಮೂಲಕ ಕಿರುಕುಳ ಕೊಡಿಸಲಾಗಿದೆ. ಪತ್ರದಲ್ಲಿ ಜಗದೀಶ್ ಅವರು ಇದನ್ನು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲಿ ಎಂದು ಆಗ್ರಹಿಸಿದರು.
ಮಂತ್ರಿ ಸ್ಥಾನ ಏನು ಶಾಶ್ವತಾನಾ? ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ. ಆ ಕಾರಣಕ್ಕೆ ಎಫ್ ಐ ಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟ ಆಡಲು ಅಲ್ಲ.ನೆನ್ನೆ ಅವರ ಕುಟುಂಬಕ್ಕೆ ಕರೆ ಮಾಡಿದಾಗ ಕುಟುಂಬದವರು ಅಳುತ್ತಿದ್ದರು. ರಾತ್ರಿ 1.30 ಕ್ಕೆ ಮೈಸೂರಿಗೆ ಶಿಫ್ಟ್ ಮಾಡಿದ್ದಾರೆ. ವೈದ್ಯರು ಕೈಲಾದ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ದುಡ್ಡು ತೆಗೆದುಕೊಂಡು ವರ್ಗಾವಣೆ ಅವರ ಛಾಳಿ, ಅದು ಅವರ ಹಣೆಬರಹ. ಆದರೆ ರಾಜಕೀಯ ಕಾರಣಕ್ಕಾಗಿ ಈ ರೀತಿಯ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ.
ಆತ್ಮಹತ್ಯೆ ಗೆ ಯತ್ನಿಸಿರುವ ಜಗದೀಶ್ ಕುಟುಂಬದವರು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು. ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು. ಹಣದ ದಂಧೆ ಆಯ್ತು, ಈಗ ರಾಜಕೀಯದ ತೆವಲುಗಳಿಗೆ ಜೀವದ ಜೊತೆ ಚೆಲ್ಲಾಟ ಶುರು ಮಾಡಿದ್ದಾರೆ. ಈ ಬಗ್ಗೆ ಇವತ್ತು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಇದಕ್ಕಿಂತ ಮುಖ್ಯ ವಿಚಾರ ಇನ್ನೇನಿದೆ ಹೇಳಿ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹೊಸ ಹೊಸ ಟ್ಯಾಕ್ಸ್ ಗಳು ಆರಂಭವಾಗಿವೆ. ಟ್ಯಾಕ್ಸ್ ನೀಡಿದರೆ ಮಾತ್ರ ಇವರಿಗೆ ಲಾಭ, ವೈಎಸ್ಟಿ ಟ್ಯಾಕ್ಸ್ ಬಗ್ಗೆ ಎಲ್ಲಾ ರಾಜಕಾರಣಿಗಳಿಗೂ ಗೊತ್ತಿದೆ, ನನಗೂ ಯಾರೋ ಈ ಬಗ್ಗೆ ಹೇಳಿದರು. ವೈಎಸ್ಟಿ ಅಂದರೆ ಏನು? ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿರುವ ಕುಮಾರಸ್ವಾಮಿ, ನನಗೂ ಸರಿಯಾಗಿ ಗೊತ್ತಿಲ್ಲ ಬ್ರದರ್. ಈ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಮಂತ್ರಿಗಳು ಹದ್ದುಬಸ್ತಿನಲ್ಲಿ ಕೆಲಸ ಮಾಡುವಂತೆ ಮಾಡಿ. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ, ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಒಂದು ವರ್ಗಾವಣೆ ಮಾಡಿಲ್ಲ. ರಾಜ್ಯದಲ್ಲಿ ಎಲ್ಲಾ ಕಡೆ ಧ್ವೇಷದ ರಾಜಕಾರಣ ಶುರುವಾಗಿಬಿಟ್ಟಿದೆ. ಕಾಂಗ್ರೆಸ್ ಶಾಸಕರ ಹಣೆ ಬರಹ ಏನಾಗಿದೆ ಅಂತಲೂ ಗೊತ್ತು. ಹಣ ಕೊಡದಿದ್ದರೇ ಅವರ ಕೆಲಸವೂ ಆಗುತ್ತಿಲ್ಲ. ದುಡ್ಡು ಬೇಕಾದರೆ ಮಾಡಿಕೊಳ್ಳಲಿ, ಜೀವದ ಜೊತೆ ಚೆಲ್ಲಾಟವಾಡುವುದು ಬೇಡ. ಈ ವಿಚಾರದವನ್ನ ಸದನದಲ್ಲಿಇಟ್ಟು ಹೋರಾಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ವಿರೋಧ ಪಕ್ಷದ ಶಾಸಕರ ಮನೆ ಹಾಳಾಗಲಿ, ಕೆಲವು ಕಾಂಗ್ರೆಸ್ ಶಾಸಕರು ಮನೆ ಕೂಡ ಇಲ್ಲಿ ಹಾಳಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಇಬ್ಬರಿಗೂ ವಿರೋಧ ಪಕ್ಷದ ಸ್ಥಾನದಲ್ಲಿ ಜನ ಕೂರಿಸಿದ್ದಾರೆ.
ಬಿಜೆಪಿಯಲ್ಲೂ ವಿರೋಧ ಪಕ್ಷದ ನಾಯಕರಾಗಲು ಹಲವಾರು ಸಮರ್ಥರಿದ್ದು, ಯಾರಾದರೂ ಒಬ್ಬರು ಆಗುತ್ತಾರೆ. ನಮ್ಮ ಕುಟುಂಬದ ಆಸ್ತಿಯ ಬಗ್ಗೆ ಈ ಸರ್ಕಾರ ಇಂಟರ್ ನ್ಯಾಷನಲ್ ತನಿಖಾ ಸಂಸ್ಥೆಯಿಂದ ಬೇಕಾದರೆ ತನಿಖೆ ಮಾಡಿಸಲಿ ಎಂದರು.












Click it and Unblock the Notifications