ನಟಿ ರಮ್ಯಾ ವಿರುದ್ದ ಸ್ಪರ್ಧೆ: ಸರಕಾರೀ ಹುದ್ದೆ ತ್ಯಜಿಸಿದ ಜೆಡಿಎಸ್ ಅಭ್ಯರ್ಥಿ?
Recommended Video

ಎಐಸಿಸಿ ಸಾಮಾಜಿಕ ತಾಣದ ಉಸ್ತುವಾರಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ವಿರುದ್ದ ಸ್ಪರ್ಧಿಸಲು ಸರಕಾರೀ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯೊಬ್ಬರು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಜಿದ್ದಾಜಿದ್ದಿನ ಪೈಪೋಟಿಗೆ ಹೆಸರುವಾಸಿಯಾಗಿರುವ ಮಂಡ್ಯ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯ ನಡುವೆ ಜೆಡಿಎಸ್, 'ಹೆಣ್ಣಿಗೆ ಹೆಣ್ಣೇ ಸ್ಪರ್ಧಿಯಾಗಲಿ' ಎನ್ನುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಮಂಡ್ಯದಲ್ಲಿ ಅಂಬರೀಶ್ ಅವರಿಗೆ ಟಿಕೆಟ್ ಸಿಗುವುದು ಡೌಟು, ರಮ್ಯಾ ಅಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಊಹಾಪೋಹದ ಸುದ್ದಿಯ ನಡುವೆ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ರಾಜಕೀಯ ತಂತ್ರಗಾರಿಕೆ ಹಣೆದಿದ್ದಾರೆ ಎನ್ನುವ ಸುದ್ದಿಯಿದೆ.
ಈ ಘಟನೆಗಳಿಗೆ ಪೂರಕ ಎನ್ನುವಂತೆ, ರಮ್ಯಾ ಬೇಕಾದರೂ ಸ್ಪರ್ಧೆ ಮಾಡಲಿ, ಎಸ್ ಎಂ ಕೃಷ್ಣನವರೂ ಬೇಕಾದರೂ ಸ್ಪರ್ಧಿಸಲಿ, ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎನ್ನುವ ಹೇಳಿಕೆಯನ್ನು ಹಾಲೀ ಮಂಡ್ಯದ ಶಾಸಕ ಅಂಬರೀಶ್ ನೀಡಿದ್ದರು.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸಲಿದ್ದಾರೆ, ಅವರು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎನ್ನುವ ಸುದ್ದಿಯು ಕೆಲವು ದಿನಗಳ ಹಿಂದೆ ಹರಿದಾಡುತ್ತಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ, ಜೆಡಿಎಸ್ ಅಭ್ಯರ್ಥಿ ಸಿ ಎಸ್ ಪುಟ್ಟರಾಜು ಅವರೆದುರು ಕೇವಲ 5,518 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸರಕಾರೀ ಹುದ್ದೆ ತ್ಯಜಿಸಿದ ಜೆಡಿಎಸ್ ಅಭ್ಯರ್ಥಿ ಯಾರು? ಮುಂದೆ ಓದಿ

ಐಆರ್ಎಸ್ ಅಧಿಕಾರಿಯಾಗಿರುವ ಲಕ್ಷ್ಮೀ ಅಶ್ವಿನ್ ಗೌಡ
ಐಆರ್ಎಸ್ (ಇಂಡಿಯನ್ ರೆವೆನ್ಯೂ ಸರ್ವಿಸ್) ಅಧಿಕಾರಿಯಾಗಿರುವ ಲಕ್ಷ್ಮೀ ಅಶ್ವಿನ್ ಗೌಡ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಮಂಡ್ಯದ ಭಾಗದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿಗೆ ಪುಷ್ಟಿ ನೀಡುವಂತೆ ಲಕ್ಷ್ಮೀ ಅಶ್ವಿನ್ ಗೌಡ ತನ್ನ ಸರಕಾರೀ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಬೇರೆ..

ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಹೌದು
ಮಂಡ್ಯದಿಂದ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಿದ್ದ ಲಕ್ಷ್ಮೀ ಅಶ್ವಿನ್ ಗೌಡ, ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಹೌದು. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಕುಮಾರಣ್ಣನವರನ್ನು ಕೇಳಿ, ನಾನೇ ಮುಂದೆ ನಿಮಗೆ ಉತ್ತರ ನೀಡುತ್ತೇನೆಂದು ಲಕ್ಷ್ಮೀ ಅಶ್ವಿನ್ ಗೌಡ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಕುಮಾರಪರ್ವ ಕಾರ್ಯಕ್ರಮದಲ್ಲಿ ಭಾಗಿ
ಗೌಡರ ಕುಟುಂಬದ ಜೊತೆ ಹಿಂದಿನಿಂದಲೂ ಸಂಪರ್ಕದಲ್ಲಿರುವ ಲಕ್ಷ್ಮೀ ಅಶ್ವಿನ್ ಗೌಡ, ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಪಕ್ಷದ ಕುಮಾರಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಮ್ಯಾ ಅವರನ್ನು ಒಂದು ವೇಳೆ ಕಾಂಗ್ರೆಸ್ ಕಣಕ್ಕಿಳಿಸಿದರೆ, ಪ್ರಭಲ ಮಹಿಳಾ ಅಭ್ಯರ್ಥಿಯಾಗಿ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ನಿಲ್ಲಿಸಲು ಕುಮಾರಸ್ವಾಮಿ ರಣತಂತ್ರ ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ಮಂಡ್ಯದಲ್ಲಿ ನಿರ್ಣಾಯಕವಾಗಿರುವುದು ಒಕ್ಕಲಿಗ ಮತಬ್ಯಾಂಕ್
ಮಂಡ್ಯದಲ್ಲಿ ನಿರ್ಣಾಯಕವಾಗಿರುವುದು ಒಕ್ಕಲಿಗ ಮತಬ್ಯಾಂಕ್. ಒಂದು ವೇಳೆ ರಮ್ಯಾ ಸ್ಪರ್ಧಿಸುವುದೇ ಅಂತಿಮವಾದರೆ, ಒಕ್ಕಲಿಗ ಸಮುದಾಯದ ಅದರಲ್ಲೂ ಮಹಿಳೆಯರನ್ನೇ ಕಣಕ್ಕಿಳಿಸಿದರೆ, ಪ್ರಭಲ ಪೈಪೋಟಿ ನೀಡಿ ಕ್ಷೇತ್ರವನ್ನು ಗೆಲ್ಲಬಹುದು ಎನ್ನುವುದು ಕುಮಾರಸ್ವಾಮಿ ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.

ಮಂಡ್ಯ ಟಿಕೆಟಿಗಾಗಿ ಮತ್ತೊಂದು ಸುತ್ತಿನ ಕಲಹ ಶುರು
ರಮ್ಯಾ ಮತ್ತು ಅಂಬರೀಶ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ಲೋಕಸಭಾ ಚುನಾವಣೆಯ ನಂತರ, ಇವರಿಬ್ಬರ ನಡುವಿನ ಮನಸ್ತಾಪ ಜೋರಾದ ಬಗ್ಗೆಯೂ ವರದಿಯಾಗಿತ್ತು. ಈಗ ಅಂಬರೀಶ್ ಮತ್ತು ರಮ್ಯಾ ನಡುವೆ ಅಸೆಂಬ್ಲಿ ಚುನಾವಣೆಯ ಹೊಸ್ತಿಲಲ್ಲಿ ಮಂಡ್ಯ ಟಿಕೆಟಿಗಾಗಿ ಮತ್ತೊಂದು ಸುತ್ತಿನ ಕಲಹ ಶುರುವಾದರೂ ಆಗಬಹುದು.












Click it and Unblock the Notifications