ಯಾವೊಬ್ಬ ಪಾಕ್ ಪ್ರಜೆಯೂ ಕರ್ನಾಟಕದಲ್ಲಿ ಇರಬಾರದು: ಜೆಡಿಎಸ್
ಕಾಶ್ಮೀರದಲ್ಲಿ ಅಮಾಯಕರ ಮೇಲಿನ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ದಿಟ್ಟ ಹೆಜ್ಜೆ ಇಟ್ಟಿದೆ. ಭಾರತದ ಎಲ್ಲ ರಾಜ್ಯಗಳಲ್ಲಿರುವ ಪಾಕ್ ಪ್ರಜೆಗಳನ್ನು ಎರಡು ದಿನದೊಳಗೆ ವಾಪಸ್ ಕಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಸೂಚನೆಯಂತೆ ರಾಜ್ಯದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಪತ್ತೆಹಚ್ಚಿ, ಹೊರ ಹಾಕಲು ಕಾಂಗ್ರೆಸ್ ಸರ್ಕಾರ, ಗೃಹ ಸಚಿವರಾದ ಜಿ.ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಇಲಾಖೆ ಅಗತ್ಯ ತುರ್ತು ಕ್ರಮವಹಿಸಬೇಕು ಎಂದು ಜೆಡಿಎಸ್ ಪಕ್ಷ ಆಗ್ರಹಿಸಿದೆ.
ಸಿದ್ದರಾಮಯ್ಯ ಅವರೆಲ್ಲರೂ ನಮ್ಮವರೇ ಎನ್ನಬೇಡಿ. ಡಿಸಿಎಂ ಡಿಕೆ ಶಿವಕುಮಾರ್ ಅವರೆಲ್ಲ ನಮ್ಮ ಬ್ರದರ್ಸ್ ಎಂದು ಹೇಳಬೇಡಿ, ಜಿ.ಪರಮೇಶ್ವರ್ ಅವರೆಲ್ಲರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದೆ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಯವಂಚಕ ಪಾಕಿಸ್ತಾನದ ಉಗ್ರರ ಕೃತ್ಯವಾಗಿದೆ. ಶಾಂತಿಯ ದೇಶವಾದ ಭಾರತದಲ್ಲಿ ಭಯೋತ್ಪಾದಕ ದೇಶವಾದ ಪಾಕಿಸ್ತಾನಕ್ಕೆ ಸೇರಿದ ಯಾವೊಬ್ಬ ಪಾಕ್ ಪ್ರಜೆಯೂ ಇರಬಾರದು ಎಂದು ಜೆಡಿಎಸ್ ಹೇಳಿದೆ.

ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. ಭಾರತದ ಆತ್ಮದ ಮೇಲೆ ದಾಳಿ ನಡೆಸಿರುವ ಪ್ರತಿಯೊಬ್ಬ ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಮಣ್ಣಿನಲ್ಲಿ ಹೂತು ಹಾಕುತ್ತೇವೆ. ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಕೊಡುತ್ತೇವೆ ಎನ್ನುವ ಮೂಲಕ ಭಯೋತ್ಪಾದನಾ ದಾಳಿಗೆ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ ಎಂದು ಕರ್ನಾಟಕ ಬಿಜೆಪಿ ಕೂಡ ಹೇಳಿದೆ.
ಪಾಕಿಸ್ತಾನ ಪ್ರೇರಿತ ಉಗ್ರವಾದವನ್ನು ಭಾರತ ಹತ್ತಿಕ್ಕಲಿದೆ. ಆದರೆ ಭಾರತದೊಳಗಿದ್ದು ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆ ಹೊಂದಿರುವವರು, ಉಗ್ರ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುವವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

ಭಯೋತ್ಪಾದಕರು ಧರ್ಮವನ್ನು ಹುಡುಕಿ ಹುಡುಕಿ ಕೊಲ್ಲುವಾಗ ಭಯೋತ್ಪಾದಕರಿಗೆ ಧರ್ಮವಿಲ್ಲ ಎಂಬ ಬಾಲಿಶತನದ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು. ಉಗ್ರವಾದದ ವಿರುದ್ಧ ಹೋರಾಡಲು ದೇಶದೊಂದಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದೆ.
ಪಾಕಿಸ್ತಾನಕ್ಕೆ ಇರುವ ಏಕೈಕ ರಸ್ತೆಮಾರ್ಗ ಅಟ್ಟಾರಿ-ವಾಘಾ ಗಡಿ ರಸ್ತೆಯನ್ನು ಸಹ ಬಂದ್ ಮಾಡಿರುವುದು ಪಾಕಿಸ್ತಾನಕ್ಕೆ ಕೊಟ್ಟ ಅತ್ಯಂತ ದೊಡ್ಡ ಮರ್ಮಾಘಾತ. ಈ ಗಡಿ ಭಾಗವನ್ನು ಬಂದ್ ಮಾಡಿರುವ ಕಾರಣ ಪಾಕಿಸ್ತಾನ ಭಾರತದಿಂದ ರಫ್ತಾಗುತ್ತಿದ್ದ ಪದಾರ್ಥಗಳಿಗೆ ಹೊಸ ಸರಬರಾಜುದಾರನನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ ವರ್ಷ ಈ ಗಡಿಭಾಗದಲ್ಲಿ ಬರೋಬ್ಬರಿ 3,886.53 ಕೋಟಿ ವ್ಯವಹಾರ ನಡೆದಿದ್ದು, ಪಾಕಿಸ್ತಾನಕ್ಕೆ ಈಗ ದೊಡ್ಡ ಹೊಡೆತ ಬಿದ್ದಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದಿನಬಳಕೆ ವಸ್ತುಗಳ ದರ ಮತ್ತಷ್ಟು ಏರಿಕೆಯಾಗುವುದರಲ್ಲಿ ಅಚ್ಚರಿಯಿಲ್ಲ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡಿರುವ ರಾಜತಾಂತ್ರಿಕ ದಾಳಿಯಿಂದ ಪಾಕಿಸ್ತಾನ ಅವಸಾನದತ್ತ ಸಾಗುವುದು ಖಚಿತ ಎಂದು ಹೇಳಿದೆ.












Click it and Unblock the Notifications