ಡಿಕೆ ಶಿವಕುಮಾರ್ ಈ ವಿಚಾರದಲ್ಲಿ ಎದೆಗಾರಿಕೆ ತೋರಿಸಿ: ಜೆಡಿಎಸ್ ಹಾಕಿದ ಸವಾಲೇನು?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಸವಾಲು ಹಾಕಿದೆ. ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ "ನಮ್ಮ ನೀರು, ನಮ್ಮ ಹಕ್ಕು" ಮೇಕೆದಾಟು ಅಣೆಕಟ್ಟೆ ಕಟ್ಟುತ್ತೇವೆ ಎಂದು ಢೋಂಗಿ ಪಾದಯಾತ್ರೆ ಮೂಲಕ ರಾಜ್ಯದ ಜನರ ಕಿವಿಗೆ ಹೂ ಮುಡಿಸಿದ್ದು ಕಾಂಗ್ರೆಸ್ ಪಕ್ಷ ಅಲ್ಲವೇ? ಎಂದು ವ್ಯಂಗ್ಯವಾಡಿದೆ.
ತಮಿಳುನಾಡಿನ ಡಿಎಂಕೆ ಸರ್ಕಾರ ಮೇಕೆದಾಟು ಆಣೆಕಟ್ಟು ಕಟ್ಟಲು ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುತ್ತಿದೆ. ಆದರೆ, ಈಗ ಮೇಕೆದಾಟಿಗೆ ಕೇಂದ್ರ ಸರ್ಕಾರದಿಂದ ಸಹಿ ಹಾಕಿಸಿಕೊಡುವಂತೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕೇಳುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದೆ.

ಮೇಕೆದಾಟು ಯೋಜನೆಗೆ ಸದಾ ಅಡ್ಡಗಾಲು ಹಾಕುತ್ತಿರುವ ಇಂಡಿ ಮೈತ್ರಿಕೂಟದ ಮಿತ್ರಪಕ್ಷ ಡಿಎಂಕೆ ಸರ್ಕಾರವನ್ನು ಮೊದಲು ಒಪ್ಪಿಸುವ ತಾಕತ್ತು, ಎದೆಗಾರಿಕೆ ನಿಮ್ಮಲ್ಲಿ ಇದೆಯೇ ತೋರಿಸಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಎಂದು ಜೆಡಿಎಸ್ ಕೇಳಿದೆ. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ಹಾಗೂ ದ್ವೇಷ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ, ಎಚ್ಎಂಟಿ ಮತ್ತು ಕೆಐಒಸಿಎಲ್ ಸಂಸ್ಥೆ ಪುನಃಶ್ಚೇತನಕ್ಕೆ ಸಹಕಾರ ನೀಡದೆ ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸಲು ಶ್ರಮಿಸುತ್ತಿರುವ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಸಹಕಾರ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ಹಠಮಾರಿತನದಿಂದ ಎಚ್ಎಂಟಿ, ಕುದುರೆಮುಖ ಸಂಸ್ಥೆಯ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಎಂದು ಗುಡುಗಿದೆ.

ಈಗಲಾದರೂ ಒಣ ಪ್ರತಿಷ್ಠೆ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಸಹಕರಿಸಿ, ಕರ್ನಾಟಕದ ಅಭಿವೃದ್ಧಿಗೆ ಮೊದಲು ಆದ್ಯತೆ ಕೊಡಿ. ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ವಿಚಾರದಲ್ಲಿ ಎಚ್.ಡಿ.ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿಯವರು ಹಾಗೂ ಜನತಾದಳ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಹೇಳಿದೆ.
ಖೋಖೋ ವಿಶ್ವಕಪ್ ವಿಜೇತ ಆಟಗಾರರಿಗೆ ಸೂಕ್ತ ಪ್ರೋತ್ಸಾಹಧನ ಹಾಗೂ ಸರ್ಕಾರಿ ಉದ್ಯೋಗ ನೀಡಲು ಹೈಕಮಾಂಡ್ ಆದೇಶವೇನಾದರೂ ಬರಬೇಕೇ? ಎಂದೂ ಜೆಡಿಎಸ್ ಕೇಳಿದೆ. ಖೋಖೋ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಇತರೆ ರಾಜ್ಯಗಳ ಆಟಗಾರರಿಗೆ ಆಯಾ ರಾಜ್ಯಗಳು ಸೂಕ್ತ ಪ್ರೋತ್ಸಾಹಧನದ ಜೊತೆ ಸರ್ಕಾರಿ ಹುದ್ದೆ ನೀಡಿ ಗೌರವಿಸಿದೆ ಎಂದಿದೆ.
ಕೇರಳದವರಿಗೆ ಲಕ್ಷ ಲಕ್ಷ ಕೊಡುವ ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಗ್ರಾಮೀಣ ಪ್ರತಿಭೆಗಳ ಸಾಧನೆಗೆ ಕೇವಲ 5 ಲಕ್ಷ ರೂಪಾಯಿ ನೀಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ ಎಂದು ದೂರಿದೆ. ಸರ್ಕಾರ ಕ್ರೀಡಾಪಟುಗಳ ಸಾಧನೆ ಮತ್ತು ಪರಿಶ್ರಮವನ್ನು ಅವಮಾನಿಸದೆ ಗೌರವದಿಂದ ನಡೆಸಿಕೊಂಡು, ಭವಿಷ್ಯದ ಆಟಗಾರರಿಗೂ ಸೂಕ್ತ ಪ್ರೋತ್ಸಾಹ ನೀಡಬೇಕು. ಕಾಂಗ್ರೆಸ್ಸಿಗರೇ, ಮೊದಲು ಗುಲಾಮಿ ಮನಸ್ಥಿತಿಯಿಂದ ಹೊರಬನ್ನಿ ಎಂದು ಕುಟುಕಿದೆ.












Click it and Unblock the Notifications