ಸಿಎಂ ಸ್ಥಾನಕ್ಕೆ ಜಯಲಲಿತಾ, ಮೇಲ್ಮನವಿ ಕಥೆ ಏನು?
ಬೆಂಗಳೂರು, ಮೇ 21 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತರಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಪುನಃ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತ ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಸದ್ಯದ ಮಾಹಿತಿ ಪ್ರಕಾರ ತಮಿಳುನಾಡಿನ ಪುರಚ್ಚಿ ತಲೈವಿ ಎಐಎಡಿಎಂಕೆ ಮುಖ್ಯಸ್ಥೆ ಸೆಲ್ವಿ ಜಯಲಲಿತಾ ಅವರ ಮರು ಪಟ್ಟಾಭಿಷೇಕ ಮೇ.23ರ ಶನಿವಾರ ನಡೆಯಲಿದೆ. ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಿದರೆ ಸುಪ್ರೀಂನಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. [ಜಯಲಲಿತಾ ಕೇಸ್ Timeline]

ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕ ಮೇಲ್ಮನವಿ ಸಲ್ಲಿಸಿ, ಅದು ಸುಪ್ರೀಂನಲ್ಲಿ ವಿಚಾರಣೆಗೆ ಬಂದು ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ಸಿಕ್ಕಿದರೆ, ಜಯಲಲಿತಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹೈಕೋರ್ಟ್ ಆದೇಶಕ್ಕೆ ತಡೆ ಸಿಕ್ಕರೆ, ವಿಶೇಷ ನ್ಯಾಯಾಲಯದ ಆದೇಶ ಜಾರಿಗೆ ಬರುತ್ತದೆ. [ಬಿ.ವಿ.ಆಚಾರ್ಯ ಸಂದರ್ಶನ ಓದಿ]
ಸರಣಿ ಸಭೆ ನಡೆಸಿರುವ ಅಮ್ಮಾ : ಕರ್ನಾಟಕ ಹೈಕೋರ್ಟ್ ಖುಲಾಸೆ ಆದೇಶ ನೀಡುತ್ತಿದ್ದಂತೆ ಕಾನೂನು ತಜ್ಞರೊಂದಿಗೆ ಸರಣಿ ಸಭೆಗಳನ್ನು ನಡೆಸಿರುವ ಜಯಲಲಿತಾ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. [ಮೇ.23ಕ್ಕೆ ಜಯಲಲಿತಾ ಪ್ರಮಾಣ ವಚನ?]
ತಕ್ಷಣ ಮೇಲ್ಮನವಿ ಸಲ್ಲಿಸಿ : ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ಅವರು ಹೈಕೋರ್ಟ್ ಆದೇಶವವನ್ನು ಪ್ರಶ್ನಿಸಿ ತಕ್ಷಣ ಮೇಲ್ಮನವಿ ಸಲ್ಲಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮೇಲ್ಮನವಿ ಸಲ್ಲಿಸುವುದು ವಿಳಂಬವಾದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಆಚಾರ್ಯ ತಮ್ಮ ಸಲಹೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ 4 ವರ್ಷದ ಜೈಲು ಶಿಕ್ಷೆ ಮತ್ತು 100 ಕೋಟಿ ದಂಡ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಕೋರ್ಟ್ ಪ್ರಕರಣದಲ್ಲಿ ಅವರು ದೋಷಮುಕ್ತರು ಎಂದು ತೀರ್ಪು ನೀಡಿದೆ.












Click it and Unblock the Notifications