Get Updates
Get notified of breaking news, exclusive insights, and must-see stories!

Jarkiholi Brothers: ಕರ್ನಾಟಕ ರಾಜಕಾರಣದಲ್ಲಿ ದಟ್ಟವಾಗುತ್ತಲೇ ಇದೆ ಜಾರಕಿಹೊಳಿ ಸಹೋದರರ ಪ್ರಭಾವ- ಐವರು ಸಹೋದರರ ಬಗ್ಗೆ ತಿಳಿಯಿರಿ

ಕರ್ನಾಟಕ ರಾಜಕಾರಣ ಮೇಲೆ ಜಾರಕಿಹೊಳಿ ಕುಟುಂಬದ ಪ್ರಭಾವ ದಟ್ಟವಾಗಿದೆ. ಯಾವುದೇ ಪಕ್ಷ ಅಧಿಕಾರ ಹಿಡಿದರೂ, ಜಾರಕಿಹೊಳಿ ಸಹೋದರರು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಲೇ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಭಾಗದಲ್ಲಿ ಈ ಕುಟುಂಬದ ಬೇರುಗಳು ಆಳವಾಗಿದೆ. ಐವರು ಸಹೋದರರಾದ ರಮೇಶ್, ಸತೀಶ್, ಬಾಲಚಂದ್ರ, ಭೀಮಶಿ ಮತ್ತು ಲಖನ್ ಅವರನ್ನು ಒಳಗೊಂಡಿರುವ ಅಧಿಕಾರಶಾಹಿ ಪ್ರಭಾವವನ್ನು ಯಾರೂ ಅಲ್ಲಗಳೆಯುವಂತಿಲ್ಲ.

ರಮೇಶ್, ಸತೀಶ್ ಹಾಗೂ ಬಾಲಚಂದ್ರ ಸಹೋದರರು 2018 ರ ಕರ್ನಾಟಕ ವಿಧಾನಸಭೆ ಚುನಾಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ರಮೇಶ್‌ ಹಾಗೂ ಸತೀಶ್‌ ಅವರು ಕಾಂಗ್ರೆಸ್‌ನಿಂದ ಜಯಗಳಿಸಿದರೆ, ಬಾಲಚಂದ್ರ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಆ ಮೂಲಕ ಕರ್ನಾಟಕ ರಾಜಕೀಯದಲ್ಲಿ ಜಾರಕಿಹೊಳಿಗಳ ಪ್ರಭಾವಳಿಯನ್ನು ಮುಂದುವರಿಸಿದರು.

Jarkiholi Brothers: Party Jumpers Yet Influential Politicians in Karnataka Election

ಪಕ್ಷ ಬದಲಿಸಿದರೂ ಜಾರಕಿಹೊಳಿ ಸಹೋದರರಿಗೆ ಗೆಲುವು

ಪ್ರಸ್ತುತ ಜಾರಕಿಹೊಳಿ ಸಹೋದರರರು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಪಕ್ಷಗಳನ್ನು ಬದಲಿಸಿದರೂ ಗೆಲುವು ಸಾಧಿಸಿತ್ತಲೇ ಬಂದಿದ್ದಾರೆ. ಪರಸ್ಪರ ವಿರೋಧದ ನಡುವೆಯೂ ಜಾರಕಿಹೊಳಿ ಸಹೋದರರು ಅಧಿಕಾರ ಗದ್ದುಗೆ ಹಿಡಿದಿರುವುದು ಎಲ್ಲರಿಗೂ ಸೋಜಿಗದ ಸಂಗತಿಯಾಗಿದೆ. ಇದು ಸಾರ್ವಜನಿಕರಲ್ಲಿ ಕುತೂಹಲವನ್ನು ಕೆರಳಿಸುತ್ತದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ರಮೇಶ್ ಮತ್ತು ಸತೀಶ್ ಸ್ಪರ್ಧಿಸಿದ್ದರು. ಬಾಲಚಂದ್ರ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಯಿತು. 2019 ರಲ್ಲಿ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಆ ಸಮದಯದಲ್ಲಿ ನಡೆದ ಉಪಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ರಮೇಶ್‌ ಹಾಗೂ ಅವರ ಕಿರಿಯ ಸಹೋದರ ಲಖನ್‌ ಅವರ ನಡುವೆ ಹಣಾಹಣಿ ಏರ್ಪಟ್ಟಿತು. ಲಖನ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅವರಿಗೆ ಬೆಂಬಲವಾಗಿ ಸತೀಶ್‌ ನಿಂತಿದ್ದರು. ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್‌ಗೆ ಬೆಂಬಲ ನೀಡಿದ್ದರು.

ಜಾರಕಿಹೊಳಿ ಸಹೋದರರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಲೇ ಬಂದಿದ್ದಾರೆ. ಆದರೆ, ಚುನಾವಣಾ ರಾಜಕಾರಣದ ಮೇಲೆ ಅವರು ಹಿಡಿತವನ್ನು ಸಾಧಿಸುತ್ತಲೇ ಬಂದಿದ್ದಾರೆ.

ಬದಲಾಗುತ್ತಲೇ ಇದೆ ನಿಷ್ಠೆ

ರಮೇಶ್ 2019 ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ತೆರಳಿದರೆ, ಸತೀಶ್ 2005 ರಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದರು. ಬಾಲಚಂದ್ರ 2013 ರಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿಯಲ್ಲಿದ್ದ ಭೀಮಶಿ 2013ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಲ್ಲಿದ್ದ ಲಖನ್‌ ಅವರು ಈಗ ಸ್ವತಂತ್ರ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದಾರೆ.

Jarkiholi Brothers: Party Jumpers Yet Influential Politicians in Karnataka Election

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಇಬ್ಬರು ಸಹೋದರರಾದ ರಮೇಶ್ ಮತ್ತು ಸತೀಶ್ ನಡುವೆ ಸಂಘರ್ಷ ಏರ್ಪಟ್ಟಿತು. ಇದು ಕೌಟುಂಬಿಕ ಕಲಹಕ್ಕೂ ಕಾರಣವಾಯಿತು. ಅಲ್ಲಿಂದಲೇ ಈ ಇಬ್ಬರು ಸಹೋದರರ ನಡುವೆ ಅಸಮಾಧಾನಗಳು ಭುಗಿಲೆದ್ದವು.

2016ರಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಅವರು ಸತೀಶ್ ಅವರನ್ನು ಸಂಪುಟದಿಂದ ಕೈಬಿಟ್ಟು ರಮೇಶ್ ಅವರಿಗೆ ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಸಂಪುಟದಿಂದ ಕೈಬಿಟ್ಟ ನಂತರ ರಮೇಶ್ ಬಿಜೆಪಿಗೆ ನಿಷ್ಠೆಯನ್ನು ಬದಲಾಯಿಸಿದರು. ಪಕ್ಷಾಂತರ ಬೆದರಿಕೆ ಹಾಕಿದ್ದ ಅತೃಪ್ತ ಶಾಸಕರ ಸಾರಥ್ಯವನ್ನು ರಮೇಶ್‌ ವಹಿಸಿಕೊಂಡಿದ್ದರು.

ಸಹೋದರರ ನಡುವೆ ರಾಜಕೀಯ ಸಂಘರ್ಷಗಳಿದ್ದರೂ, ಕುಟುಂಬವು ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿದೆ. ಹೊರನೋಟಕ್ಕಷ್ಟೇ ಜಾರಕಿಹೊಳಿ ಸಹೋದರರ ನಡುವೆ ಅಸಮಾಧಾನವಿದೆ. ಆದರೆ, ಅವರು ಒಳಗೊಳಗೆ ಒಂದೇ ಆಗಿದ್ದಾರೆ ಎಂದು ಬೆಳಗಾವಿ ಭಾಗದ ಸಾರ್ವಜನಿಕರ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ಅವರು ಸಕ್ಕರೆ ಉದ್ಯಮವನ್ನು ನಿಯಂತ್ರಿಸುತ್ತಿದ್ದಾರೆ.

ಸಕ್ಕರೆ ಉದ್ಯಮದಲ್ಲಿ ಮುಂಚೂಣಿಗೆ ಬಂದ ಜಾರಕಿಹೊಳಿ ಕುಟುಂಬ

ಬೆಳಗಾವಿ ಜಿಲ್ಲೆ ಸಕ್ಕರೆ ವ್ಯವಹಾರಕ್ಕೆ ಮೊದಲಿನಿಂದಲೂ ಪ್ರಸಿದ್ದಿ ಪಡೆದಿದೆ. ಕತ್ತಿ, ಕೌಜಲಗಿ ಮತ್ತು ಜೊಲ್ಲೆಯಂತಹ ಕುಟುಂಬಗಳು ಸಕ್ಕರೆ ವ್ಯವಹಾರದಲ್ಲಿ ತೊಡಗಿಕೊಂಡಿದ್ದವು. ಅವರು ಬೆಳಗಾವಿ ರಾಜಕೀಯವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.

2000 ರ ದಶಕದ ಆರಂಭದಲ್ಲಿ ಜಾರಕಿಹೊಳಿ ಸಹೋದರರು ಈ ಉದ್ಯಮದಲ್ಲಿ ಹೊಸದಾಗಿ ಪ್ರವೇಶಿಸಿದ್ದರು. ಹಳೆ ಮೈಸೂರು ಪ್ರದೇಶದಲ್ಲಿನ ಮಂಡ್ಯದ ಸಾಂಪ್ರದಾಯಿಕ ಸಕ್ಕರೆ ಉದ್ಯಮವನ್ನು ಮೀರಿ ಬೆಳಗಾವಿ ಸಕ್ಕರೆ ಉದ್ಯಮ ಬೆಳೆಯಿತು. ಇದಕ್ಕೆ ಜಾರಕಿಹೊಳಿ ಸಹೋದರರ ಕೊಡುಗೆ ಅಪಾರವಾಗಿದೆ. ಮದ್ಯದ ವ್ಯವಹಾರವನ್ನು ಬಿಟ್ಟು ಸಕ್ಕರೆ ವ್ಯವಹಾರಕ್ಕೆ ಬಂದ ಜಾರಕಿಹೊಳಿ ಕುಟುಂಬ ಅದರಲ್ಲಿ ಅಪಾರ ಯಶಸ್ಸನ್ನೂ ಗಳಿಸಿತು.

ಗೋಕಾಕ್ ಪ್ರದೇಶದಲ್ಲಿ ಐದು ಸಕ್ಕರೆ ಕಾರ್ಖಾನೆಗಳನ್ನು ಜಾರಕಿಹೊಳಿ ಸಹೋದರರು ಸ್ಥಾಪಿಸಿದರು. ಸತೀಶ್ ಶುಗರ್ಸ್ ಲಿಮಿಟೆಡ್, ಬೆಳಗಾವಿ ಶುಗರ್ಸ್ ಲಿಮಿಟೆಡ್, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮತ್ತು ಲಕ್ಷ್ಮಣರಾವ್ ಜಾರಕಿಹೊಳಿ ಶುಗರ್ಸ್ ಲಿಮಿಟೆಡ್‌ಗಳನ್ನು ಆರಂಭಿಸಿದರು.

ಎಲ್‌&ಜಿ ಮೈನ್ಸ್ ಮತ್ತು ಮಿನರಲ್ಸ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಎಂಬ ಗಣಿ ಕಂಪನಿಯನ್ನು ಪ್ರಾರಂಭಿಸಿದರು. ಸಂಜೀವಿನಿ ವೆಲ್ಫೇರ್ ಫೌಂಡೇಶನ್ ಎಂಬ ಸಾಮಾಜಿಕ ಸಂಸ್ಥೆಯನ್ನು ಸ್ಥಾಪಿಸಿದರು. ಇದಲ್ಲದೆ, ಕುಟುಂಬವು ಗೋಕಾಕ್ ಸ್ಟೀಲ್ಸ್ ಲಿಮಿಟೆಡ್ ಮೇಲೆ ನಿಯಂತ್ರಣವನ್ನು ಹೊಂದಿದೆ. ಗೋಕಾಕ್ ಪ್ರದೇಶದಲ್ಲಿ ವಿಜ್ಞಾನ, ಕಲೆ, ವಾಣಿಜ್ಯ ಮತ್ತು ಕಾನೂನಿನ ಕೋರ್ಸ್‌ಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳನ್ನು ಜಾರಕಿಹೊಳಿ ಕುಟುಂಬ ಸ್ಥಾಪಿಸಿದೆ.

Jarkiholi Brothers: Party Jumpers Yet Influential Politicians in Karnataka Election

ಅಧಿಕಾರ ರಾಜಕಾರಣದ ಮಹತ್ವಾಕಾಂಕ್ಷೆ

ಇದೇ ಸಮಯದಲ್ಲಿ ಜಾರಕಿಹೊಳಿ ಕುಟುಂಬ ಬೆಳಗಾವಿ ಭಾಗದಲ್ಲಿ ಅಧಿಕಾರ ರಾಜಕಾರಣದ ಮಹತ್ವಾಕಾಂಕ್ಷೆಯನ್ನು ಮುನ್ನೆಲೆಗೆ ತಂದಿತು. ರಾಜ್ಯದಲ್ಲಿ ಬೆಳಗಾವಿಯು ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಎರಡನೇ ಜಿಲ್ಲೆಯಾಗಿದೆ. ಬೆಂಗಳೂರಿನ ನಂತರ (28 ಸ್ಥಾನಗಳು) ಜಿಲ್ಲೆಯು 18 ಕ್ಷೇತ್ರಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಲಿಂಗಾಯತ ಸಮುದಾಯವು ಪ್ರಾಬಲ್ಯವನ್ನು ಹೊಂದಿದೆ. ಇಂತಹ ಪ್ರದೇಶದಲ್ಲಿ ನಾಯಕ ಸಮುದಾಯಕ್ಕೆ ಸೇರಿದ ಜಾರಕಿಹೊಳಿ ಕುಟುಂಬ ರಾಜಕೀಯ ನೆಲೆ ಕಂಡುಕೊಂಡಿದ್ದು, ಅಚ್ಚರಿಯ ಬೆಳವಣಿಗೆಯೆಂದೇ ಹೇಳಬಹುದು.

ಬಿಜೆಪಿಯ ರೆಡ್ಡಿ ಸಹೋದರರನ್ನು ಹತ್ತಿಕ್ಕಲು ಕಾಂಗ್ರೆಸ್ ಜಾರಕಿಹೊಳಿ ಸಹೋದರರಿಗೆ ಬೆಂಬಲ ನೀಡಿತು ಎಂದು ಹೇಳಲಾಗುತ್ತದೆ. ರೆಡ್ಡಿ ಸಹೋದರರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಕಾಂಗ್ರೆಸ್‌ನಲ್ಲಿ ಜಾರಕಿಹೊಳಿಗಳ ಪ್ರಾಬಲ್ಯ ಹೆಚ್ಚಾಯಿತು ಎಂಬುದನ್ನು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಬಿಜೆಪಿಯ ಶ್ರೀರಾಮುಲು ಅವರನ್ನು ಸೋಲಿಸಲು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜಾರಕಿಹೊಳಿಗಳನ್ನು ಕಾಂಗ್ರೆಸ್ ಬೆಂಬಲಿಸಿತು. ರಾಮುಲು ಅವರು ರೆಡ್ಡಿ ಬ್ರದರ್ಸ್ ಅವರ ಆಪ್ತರಾಗಿದ್ದರು. ಅವರು ಅದೇ ಸಮುದಾಯದಿಂದ ಬಂದವರು. ರೆಡ್ಡಿ ಬ್ರದರ್ಸ್ ಅನುಪಸ್ಥಿತಿಯಲ್ಲಿ ಬಿಜೆಪಿಯ ಮುಖವಾಗಿ ಹೊರಹೊಮ್ಮಿದರು.

ಬೆಳಗಾವಿ ರಾಜಕಾರಣಕ್ಕೆ ಡಿಕೆ ಎಂಟ್ರಿ

ಒಕ್ಕಲಿಗ ಸಮುದಾಯದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಈಗಾಗಲೇ ದಕ್ಷಿಣ ಭಾಗದಲ್ಲಿ ಪ್ರಾಬಲ್ಯವಿದೆ. ಆದರೆ, ಅವರು ತಮ್ಮ ಈ ಪ್ರಾಬಲ್ಯವನ್ನು ಬೆಳಗಾವಿಗೆ ವಿಸ್ತರಿಸಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಡಿಕೆಶಿಗೆ ಬೆಳಗಾವಿ ಅತ್ಯಂತ ಪ್ರಮುಖ ಜಿಲ್ಲೆಯಾಗಿದೆ.

ಡಿಕೆ ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್‌ ಮೂಲಕ ಬೆಳಗಾವಿ ಪ್ರವೇಶಿಸಲು ಯತ್ನಿಸಿದರು. ಸಹಕಾರಿ ಬ್ಯಾಂಕ್‌ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ರಮೇಶ್‌ ಜಾರಕಿಹೊಳಿ ನಡುವೆ ಸಂಘರ್ಷ ಏರ್ಪಟ್ಟಿತು. ಒಂದೇ ಪಕ್ಷದಲ್ಲಿದ್ದ ಈ ಇಬ್ಬರ ನಡುವೆ ವೈಷಮ್ಯ ಬೆಳೆಯಿತು. ಶಿವಕುಮಾರ್‌ ಅವರು ಲಕ್ಷ್ಮೀ ಬೆಂಬಲಕ್ಕೆ ನಿಂತರು.

ಶಿವಕುಮಾರ್ ಅವರ ಸಹಾಯದಿಂದ ಹೆಬ್ಬಾಳ್ಕರ್ ಅವರು ಬೆಳಗಾವಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನ ಮಂಡಳಿಯಲ್ಲಿ ತಮ್ಮ ನಿಷ್ಠರನ್ನು ತಂದು ಕೂಡಿಸುವಲ್ಲಿ ಸಫಲರಾದರು. ಹೆಬ್ಬಾಳ್ಕರ್ ಅವರೂ ಸಕ್ಕರೆ ಉದ್ಯಮದಲ್ಲಿ ತೊಡಗಿಕೊಂಡಿದ್ದು, ಜಾರಕಿಹೊಳಿ ಅವರಿಗೆ ಆತಂಕ ತಂದೊಡ್ಡಿತು.

2014ರಲ್ಲಿ ಹೆಬ್ಬಾಳ್ಕರ್ ಮತ್ತು ಅವರ ಕುಟುಂಬದವರು ₹69.9 ಕೋಟಿ ಆರಂಭಿಕ ಬಂಡವಾಳ ಹೂಡಿ ಬೆಳಗಾವಿಯಲ್ಲಿ ಹರ್ಷ ಶುಗರ್ಸ್ ಲಿಮಿಟೆಡ್ ಸ್ಥಾಪಿಸಿದರು. ಅವರು ಮತ್ತು ಅವರ ಮಗ ಮೃಣಾಲ್ ಹೆಬ್ಬಾಳ್ಕರ್ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ.

ಇದರಿಂದ ಕೆರಳಿದ ರಮೇಶ್ ಮತ್ತು ಸತೀಶ್ ಅವರು ಸಿದ್ದರಾಮಯ್ಯ ಹಾಗೂ ಇತರ ಹಿರಿಯ ನಾಯಕರಿಗೆ ಎಚ್ಚರಿಕೆ ನೀಡಿ ಶಿವಕುಮಾರ್ ಅವರನ್ನು ಬೆಳಗಾವಿ ರಾಜಕೀಯದಿಂದ ದೂರವಿಡುವಂತೆ ಸೂಚಿಸಿದರು. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ ತೊರೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಸಿದ್ದರಾಮಯ್ಯ ಅವರು ಮೂವರ ನಡುವೆ ಶಾಂತಿ ಮಾತುಕತೆ ಮಾಡಲು ಪ್ರಯತ್ನಿಸಿದರು. ಅವರು ಸ್ವಲ್ಪ ಸಮಯದ ನಂತರ ಮೂಕ ಪ್ರೇಕ್ಷಕರಾದರು.

ಈ ಪ್ರದೇಶದಲ್ಲಿ ಸಕ್ಕರೆ ವ್ಯಾಪಾರದ ಮೇಲೆ ತಮ್ಮ ಕುಟುಂಬ ನಿಯಂತ್ರಣವನ್ನು ಕಳೆದುಕೊಂಡಿರುವ ಸೂಚನೆಯನ್ನು ರಮೇಶ್‌ ಪಡೆದರು. ಈ ಬಗ್ಗೆ ಕೋಪಗೊಂಡ ರಮೇಶ್, ಬಿಜೆಪಿಗೆ ತೆರಳಿ ಸಮ್ಮಿಶ್ರ (ಜೆಡಿಎಸ್ ಮತ್ತು ಕಾಂಗ್ರೆಸ್) ಸರ್ಕಾರವನ್ನು ಉರುಳಿಸುವುದಾಗಿ ಪಕ್ಷದ ನಾಯಕತ್ವಕ್ಕೆ ಬೆದರಿಕೆ ಹಾಕಿದರು. ಆ ನಂತರ ಬಿಜೆಪಿಗೆ ತೆರಳಿ ಸಚಿವರಾಗುವಲ್ಲಿ ರಮೇಶ್‌ ಸಫಲರಾದರು. ಇದು ಡಿಕೆ ಶಿವಕುಮಾರ್‌ ಅವರಿಗೆ ಹಿನ್ನೆಡೆ ಎಂದೇ ಹೇಳಬಹುದು.

ಮತ್ತೆ ಬಂಡಾಯದ ಮುನ್ಸೂಚನೆ

2018 ರಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದ ಮೊದಲ ಶಾಸಕರಲ್ಲಿ ರಮೇಶ್ ಒಬ್ಬರು. ಈ ಅವಕಾಶವನ್ನು ಬಿಜೆಪಿ ಸದುಪಯೋಗ ಮಾಡಿಕೊಂಡಿತು. ರಮೇಶ್ ಅವರು ಬಿಜೆಪಿಗೆ ಬಂದರೆ ಕ್ಯಾಬಿನೆಟ್ ಸ್ಥಾನದ ಭರವಸೆ ನೀಡಿತು. ರಮೇಶ್ ಅವರು ತಮ್ಮ ಜೊತೆ ಹಲವು ಬಂಡಾಯ ನಾಯಕರನ್ನು ಬಿಜೆಪಿ ಕರೆದೊಯ್ದರು. ಆ ನಂತರ ರಮೇಶ್‌ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅವರ ಸಹೋದರ ಬಾಲಚಂದ್ರ ಅವರಿಗೆ ಕೆಎಂಎಫ್‌ ಅಧ್ಯಕ್ಷರ ಸ್ಥಾನವನ್ನೂ ಬಿಜೆಪಿ ನೀಡಿತು.

ಈಗ ರಮೇಶ್‌ ಜಾರಕಿಹೊಳಿ ಅವರು ಗೋಕಾಕದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಯಮಕನಮರಡಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತೀಶ್‌ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಕೊನೆಯ ಸಹೋದರ ಲಖನ್‌ ಜಾರಕಿಹೊಳಿ ಎಂಎಲ್‌ಸಿ ( ಪಕ್ಷೇತರ ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಮುಂದುವರಿಯುವ ಮುನ್ಸೂಚನೆ ದಟ್ಟವಾಗುತ್ತಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+