ಜನವರಿ 8, 9ರ ಭಾರತ್ ಬಂದ್ : ಯಾರು ಏನು ಹೇಳಿದರು?
Recommended Video
ಬೆಂಗಳೂರು, ಜನವರಿ 07 : 'ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಕರೆ ನೀಡಿರುವ ಬಂದ್ಗೆ ನಮ್ಮ ಬೆಂಬಲವೂ ಇದೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, 'ಕಾರ್ಮಿಕರ ಕಾನೂನು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಆದ್ದರಿಂದ ನಮ್ಮ ಬೆಂಬಲವೂ ಇದೆ' ಎಂದರು.
ಭಾರತ ಬಂದ್ : ಕರ್ನಾಟಕದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜಾ ಇದೆ, ಇಲ್ಲ
'ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಬಸ್ ಸೇವೆ ಇರುವುದಿಲ್ಲ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.
ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ರಜೆ ನೀಡಿಲ್ಲ. 'ಜಿಲ್ಲೆಗಳಲ್ಲಿನ ಸ್ಥಿತಿ-ಗತಿಗಳನ್ನು ನೋಡಿಕೊಂಡು ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಲಿದ್ದಾರೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಹೇಳಿದ್ದಾರೆ.
ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?
ಕಾನೂನು ಕಾಪಾಡಲು ಕ್ರಮ
'ಕಾರ್ಮಿಕ ಸಂಘಟನೆಗಳು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಈ ಕುರಿತು ಚರ್ಚೆ ನಡೆಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತಡೆ ಉಂಟಾಗುವುದಿಲ್ಲ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಮುಷ್ಕರಕ್ಕೆ ಬೆಂಬವಿಲ್ಲ
ಆಟೋ ಚಾಲಕರ ಸಂಘ ಸಂಸ್ಥೆಗಳ ಒಕ್ಕೂಟ ಜನವರಿ 8 ಮತ್ತು 9ರ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಈ ಒಕ್ಕೂಟದಲ್ಲಿ ಒಟ್ಟು 12 ಸಂಘಟನೆಗಳಿದ್ದು, 1 ಲಕ್ಷ ಕ್ಕೂ ಅಧಿಕ ಆಟೋ ಚಾಲಕರು ಇದ್ದಾರೆ.
'ನಮ್ಮ ಮೇಲೆ ಅಹಿತಕರ ಘಟನೆಗಳು ನಡೆದರೆ ಕಾರ್ಮಿಕ ಸಂಘಟನೆಗಳ ಮೇಲೆ ದೂರು ನೀಡುತ್ತೇವೆ' ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಎಂ.ಮಂಜುನಾಥ್ ಹೇಳಿದ್ದಾರೆ.
ಟ್ಯಾಕ್ಸಿಗಳು ಸಂಚಾರ ನಡೆಸಲಿವೆ
ಕಾರ್ಮಿಕ ಸಂಘಟನೆಗಳು ಎರಡು ದಿನದ ಬಂದ್ಗೆ ಕರೆ ನೀಡಿವೆ. 'ಮುಷ್ಕರಕ್ಕೆ ನೈತಿಕ ಬೆಂಬಲವಷ್ಟೇ ನೀಡಿದ್ದೇವೆ. ಟ್ಯಾಕ್ಸಿ/ಕ್ಯಾಬ್ಗಳು ಓಡಾಟ ನಡೆಸಲಿವೆ' ಎಂದು ಓಲಾ, ಊಬರ್ ಕ್ಯಾಬ್ ಚಾಲಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷ ತಿಳಿಸಿದ್ದಾರೆ.
ಸರ್ಕಾರಿ ಬಸ್ ಸ್ಥಗಿತ
'ಜನವರಿ 8 ಮತ್ತು 9ರಂದು ಭಾರತ್ ಬಂದ್ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಎರಡು ದಿನ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ' ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.
|
ಬಂದ್ ಸಂಸ್ಕೃತಿ
ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜವಾಬ್ದಾರಿಯುತ ಸಂಘ-ಸಂಸ್ಥೆಗಳು ಒಕ್ಕೊರಲಿನಿಂದ "ಬಂದ್" ಸಂಸ್ಕೃತಿಯ ವಿರುದ್ಧ ಬಂದ್ ಘೋಷಿಸಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಸಿನಿಮಾ ಪ್ರದರ್ಶನವಿದೆ
'ಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಬಂದ್ಗೆ ನೈತಿಕ ಬೆಂಬಲ ನೀಡಿದ್ದೇವೆ. ಕಪ್ಪು ಪಟ್ಟಿ ಹಿಡಿದುಕೊಳ್ಳುವ ಮೂಲಕ ಬೆಂಬಲ ನೀಡುತ್ತೇವೆ. ಸಿನಿಮಾ ಪ್ರದರ್ಶನ, ಚಲನಚಿತ್ರ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ' ಎಂದು ಕರ್ನಾಟಕ ಫಿಲ್ಮ್ ಛೇಂಬರ್ ಅಧ್ಯಕ್ಷ ಚಿನ್ನೇಗೌಡ ಹೇಳಿದರು.
ಬಿಎಂಟಿಸಿ ಸಂಚಾರವಿದೆಯೇ?
'ನಾವು ರಜೆ ಘೋಷಣೆ ಮಾಡಿಲ್ಲ. ಬಂದ್ಗೆ ಬೆಂಬಲವಿಲ್ಲ. ಪೊಲೀಸರ ಸಹಕಾರದೊಂದಿಗೆ ಬಸ್ ಸಂಚಾರ ನಡೆಸುತ್ತೇವೆ. ಪ್ರಯಾಣಿಕರಿಗೆ ತೊಂದರೆ ಆದರೆ ಬಸ್ ಸಂಚಾರ ಸ್ಥಗಿತಗೊಳಿಸುತ್ತೇವೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ವಿ.ಪ್ರಸಾದ್ ಹೇಳಿದ್ದಾರೆ.
ಬಂದ್ಗೆ ಬಿಜೆಪಿ ವಿರೋಧ
'ಮುಂದಿನ ಲೋಕಸಭಾ ಚುನಾವಣೆ ಕಾರಣಕ್ಕೆ ಬಂದ್ ಮಾಡಲಾಗುತ್ತಿದೆ. ಎಡಪಕ್ಷ ಮತ್ತು ಕಾರ್ಮಿಕರು ಕರೆ ನೀಡಿರುವ ಬಂದ್ಗೆ ಬಿಜೆಪಿಯ ವಿರೋಧವಿದೆ' ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.