ಜನಾರ್ದನ ರೆಡ್ಡಿ ಹೊಸವರ್ಷಾಚರಣೆ ಜೈಲಿನಲ್ಲೇ!
ಬೆಂಗಳೂರು, ಡಿ. 17 : ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಹೊಸ ವರ್ಷವನ್ನು ಜೈಲಿನ ಹೊರಗೆ ಆಚರಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆಗೆ ಪ್ರಕರಣದಲ್ಲಿ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿಗೆ ಮುಂದೂಡಲಾಗಿದೆ.
ಮಂಗಳವಾರ ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ ಸುಪ್ರೀಂಕೋರ್ಟ್, ದೈನಂದಿನ ಕಲಾಪದೊಂದಿಗೆ ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿತು. ಆದ್ದರಿಂದ ಜನವರಿ 5ರ ನಂತರ ಅರ್ಜಿ ವಿಚಾರಣೆ ನಡೆಯಲಿದೆ. [ರೆಡ್ಡಿಗೆ ಕರ್ನಾಟಕ ಎಲ್ಲಾ ಪ್ರಕರಣದಲ್ಲಿ ಜಾಮೀನು]

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠದ ಮುಂದೆ ಮಂಗಳವಾರ ಜನಾರ್ದನ ರೆಡ್ಡಿ ಅರ್ಜಿಯು ವಿಚಾರಣೆ ಇತ್ತು. ಇತರ ಪ್ರಕರಣಗಳ ವಿಚಾರಣೆಗೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ಬೆಳಗಿನ ಕಲಾಪದ ವೇಳೆ ಈ ಜಾಮೀನು ಅರ್ಜಿ ವಿಚಾರಣೆಗೆ ಬರಲಿಲ್ಲ.[ರೆಡ್ಡಿ ಬಿಡುಗಡೆಗೆ ಸಿಬಿಐ 7 ಷರತ್ತುಗಳು]
ಭೋಜನ ವಿರಾಮದ ಬಳಿಕ ನ್ಯಾಯಪೀಠ ವಿಚಾರಣಾ ಕಲಾಪ ಆರಂಭಿಸುತ್ತಿದ್ದಂತೆ ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ರೆಡ್ಡಿ ಪರ ವಕೀಲರು ಮನವಿ ಮಾಡಿಕೊಂಡರು. ಆದರೆ, ನ್ಯಾಯಮೂರ್ತಿಗಳು ಈ ಬೇಡಿಕೆಯನ್ನು ತಳ್ಳಿಹಾಕಿದರು.
ನ್ಯಾಯಪೀಠದ ಮಂಗಳವಾರದ ಕಲಾಪ ಮುಗಿದು ನ್ಯಾಯಮೂರ್ತಿಗಳು ವಿಶೇಷ ಪೀಠದ ವಿಚಾರಣೆಗೆ ಹೊರಡುತ್ತಿದ್ದಂತೆ ರೆಡ್ಡಿ ಪರ ವಕೀಲರು ಮತ್ತೂಮ್ಮೆ ತಮ್ಮ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದರು. ಅವರ ಮನವಿಯನ್ನು ತಳ್ಳಿ ಹಾಕಿದ ಮುಖ್ಯ ನ್ಯಾಯಮೂರ್ತಿಗಳು, ಅರ್ಜಿಯ ವಿಚಾರಣೆಯನ್ನು ದೈನಂದಿನ ಕಲಾಪದೊಂದಿಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಅಂದಹಾಗೆ ಡಿ.19ರಿಂದ ಜನವರಿ 4ರವರೆಗೆ ಸುಪ್ರೀಂಕೋರ್ಟ್ಗೆ ಕ್ರಿಸ್ಮಸ್ ರಜೆ ಇದೆ. ಆ ಬಳಿಕವೇ ರೆಡ್ಡಿ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಆದ್ದರಿಂದ ಹೊಸವರ್ಷವನ್ನು ಜೈಲಿನ ಹೊರಗೆ ಆಚರಿಸಬೇಕೆಂಬ ಜನಾರ್ದನ ರೆಡ್ಡಿ ಅವರ ನಿರೀಕ್ಷೆಗಳು ಹುಸಿಯಾಗಿವೆ.
ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಅವಿಭಜಿತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ರಾಯದುರ್ಗ ತಾಲೂಕಿನ ಓಬಳಾಪುರಂ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿ ಸಾಕಷ್ಟು ಅಕ್ರಮ ನಡೆಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ, ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೆ ರೆಡ್ಡಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.












Click it and Unblock the Notifications