Breaking; ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ!
ಬೆಂಗಳೂರು, ಡಿಸೆಂಬರ್ 25; 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷ ಘೋಷಣೆ ಮಾಡಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾನುವಾರ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಘೋಷಣೆ ಮಾಡಿದರು. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯವರು.
ಭಾನುವಾರ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೊಸ ಪಕ್ಷದ ಹೆಸರು ಘೋಷಣೆ ಮಾಡಿರು ಜನಾರ್ದನ ರೆಡ್ಡಿ. "ನಾನು ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ" ಎಂದರು.

"ಮುಂದಿನ 15 ದಿನದೊಳಗೆ ಪಕ್ಷದ ಲಾಂಛನ ಬಿಡುಗಡೆ ಮಾಡುತ್ತೇನೆ. ಪಕ್ಷದ ಕಚೇರಿ ಉದ್ಘಾಟನೆ ಮಾಡುತ್ತೇನೆ. ಪತ್ನಿಯೂ ನನ್ನ ಜೊತೆ ಇರುತ್ತಾರೆ, ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ" ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, "ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ. ರಾಜ್ಯದ ಎಲ್ಲೆಲ್ಲಿ ಸ್ಪರ್ಧೆ ಮಾಡಲಿದ್ದೇವೆ ಎಂದು ಪಕ್ಷದ ಪ್ರಣಾಳಿಕೆ ಜೊತೆ ಕೆಲವೇ ದಿನಗಳಲ್ಲಿ ಮಾಹಿತಿ ನೀಡುತ್ತೇನೆ" ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಈಗಾಗಲೇ ಜನಾರ್ದನ ರೆಡ್ಡಿ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಈಗ ಅಲ್ಲಿಂದಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಪರಣ್ಣ ಮುನವಳ್ಳಿ.
2018ರ ಚುನಾವಣೆಯಲ್ಲಿ ಪರಣ್ಣ ಮುನವಳ್ಳಿ 67,617 ಮತಗಳನ್ನು ಪಡೆದು ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ (59,644) ಸೋಲಿಸಿದ್ದಾರೆ. ಜೆಡಿಎಸ್ನಿಂದ ಕರಿಯಣ್ಣ ಸಂಘಟಗಿ ಕಣಕ್ಕಿಳಿದಿದ್ದು 14,161 ಮತ ಪಡೆದಿದ್ದರು.
ಶಾಸಕರ ಪ್ರತಿಕ್ರಿಯೆ; ಮಾಜಿ ಸಚಿವ ಹೊಸ ಪಕ್ಷ ಸ್ಥಾಪನೆ, ಗಂಗಾವತಿಯಿಂದ ಕಣಕ್ಕಿಳಿಯುವ ಬಗ್ಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ. "ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲುತ್ತದೆ. ಹೊಸ ಪಕ್ಷದ ಬಗ್ಗೆ ನಮ್ಮ ರಾಜ್ಯ ನಾಯಕರು ನೋಡಿಕೊಳ್ಳುತ್ತಾರೆ" ಎಂದರು.
"ಜನಾರ್ದನ ರೆಡ್ಡಿ ಜೊತೆ ನಮ್ಮ ಕೆಲವು ನಾಯಕರು ಕಾಣಿಸಿಕೊಂಡಿದ್ದರು. ಅವರು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಹೊಸ ಪಕ್ಷಕ್ಕೆ ಬಿಜೆಪಿಯಿಂದ ಯಾವ ನಾಯಕರು ಹೋಗುವುದಿಲ್ಲ" ಎಂದು ಶಾಸಕರ ಸ್ಪಷ್ಟಪಡಿಸಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, "ಗಂಗಾವತಿಯಿಂದ 2 ಬಾರಿ ಗೆದ್ದಿದ್ದೇನೆ. ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ನಮಗೇನು ನಷ್ಟ ಆಗುವುದಿಲ್ಲ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಜನರಿಗೆ ಗೊತ್ತಿದೆ. ಅದನ್ನು ಜನರು ತೀರ್ಮಾನ ಮಾಡುತ್ತಾರೆ" ಎಂದು ಹೇಳಿದರು.












Click it and Unblock the Notifications