ಕಾವೇರಿಗಾಗಿ ಜನಾರ್ಧನ ಪೂಜಾರಿ ಉರುಳುಸೇವೆ, ಸಿಎಂಗೂ ಆಹ್ವಾನ
ಮಂಗಳೂರು, ಸೆ 17: ವಾರಕ್ಕೆ ಎರಡು ಬಾರಿಯಾದರೂ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸಿದ್ದರಾಮಯ್ಯ ಸರಕಾರದ ಕಾರ್ಯವೈಖರಿಯನ್ನು ಕಟು ಶಬ್ದದಲ್ಲಿ ಟೀಕಿಸುವ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಈಗ ಜೀವನದಿ ಕಾವೇರಿಗಾಗಿ ಉರುಳುಸೇವೆ ಮಾಡಲು ಸಜ್ಜಾಗಿದ್ದಾರೆ.
ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಭಾನುವಾರ (ಸೆ 18) ಬೆಳಗ್ಗೆ 10.30ಕ್ಕೆ ಪೂಜಾರಿಯವರು ಉರುಳುಸೇವೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಆಹ್ವಾನಿಸಿದ್ದಾರೆ. (ಕಾವೇರಿ ವಿವಾದ, ರಾಘವೇಶ್ವರ ಶ್ರೀಗಳ ನಿಲುವು)
ರಾಜ್ಯದ ಜಲವಿವಾದ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ದೇವರ ಮೊರೆ ಹೋಗುವುದು ಅಗತ್ಯವೆನಿಸಿದ್ದು, ಹಾಗಾಗಿ ಉರುಳು ಸೇವೆ ಮಾಡಲು ಮುಂದಾಗಿದ್ದೇನೆಂದು ಜನಾರ್ಧನ ಪೂಜಾರಿ ಹೇಳಿದ್ದಾರೆ.
ತಮಿಳುನಾಡು, ಕೇರಳ ಮತ್ತು ಕರ್ನಾಟಕ ಮೂರು ರಾಜ್ಯಗಳಲ್ಲಿ ಕಾವೇರಿ ಸಮಸ್ಯೆ ಜಾಸ್ತಿಯಾಗಿದೆ. ಸೆ. 18 ರಂದು ಬೆಳಿಗ್ಗೆ 10.30ಕ್ಕೆ ಗೋಕರ್ಣನಾಥೇಶ್ವರ ದೇಲಾಯದಲ್ಲಿ ಉರುಳು ಸೇವೆ ಮಾಡುತ್ತೇನೆ.
ಈ ಸಮಸ್ಯೆ ಕೇವಲ ಒಂದು ರಾಜ್ಯಕ್ಕೆ ಸೀಮಿತವಲ್ಲ, ಎಲ್ಲರೂ ಒಟ್ಟಾಗಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಎತ್ತಿನಹೊಳೆ ಹೋರಾಟಗಾರರು ಮತ್ತು ಮುಖ್ಯಮಂತ್ರಿಗಳು ಬರಬೇಕೆಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ವಿನಂತಿಸಿಕೊಂಡಿದ್ದಾರೆ.
ಸರಕಾರ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಅವರ ದಿನವನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಮಾಡುತ್ತಿರುವುದು ಶ್ಲಾಘನೀಯ, ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಆದರೆ ಕೆಟ್ಟ ದಾರಿಯಲ್ಲಿ ನಡೆದಾಗ ಅವರನ್ನು ಟೀಕಿಸುವುದು ಅಗತ್ಯವಾಗಿದೆ ಎಂದು ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ. (ಕಾವೇರಿಗಾಗಿ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ)
ಕುದ್ರೋಳಿ ದೇವಾಲಯವನ್ನು ಬ್ರಹ್ಮಶ್ರೀ ನಾರಾಯಣಗುರು ಅವರು ಸ್ಥಾಪನೆ ಮಾಡಿದರು. ಇಂತಹ ದೇವಾಲಯದಲ್ಲಿ ಸಿಎಂ ಬಂದು ಉರುಳು ಸೇವೆ ಮಾಡಿದರೆ ರಾಜ್ಯದ ಸಮಸ್ಯೆಗೆ ಪರಿಹಾರ ಸಿಗಬಹುದು.
ಉರುಳು ಸೇವೆ ಮಾಡದೇ ಹೋದರೂ ಕೂಡ ಸಿಎಂ ದೇವಾಲಯಕ್ಕೆ ಬಂದು ಪ್ರಾರ್ಥನೆ ಮಾಡಿದರೆ ಸಾಕು ಎಲ್ಲವೂ ಒಳಿತಾಗಲಿದೆ. ಕಾವೇರಿ ಜಲವಿವಾದದ ಸಮಸ್ಯೆಗೆ ದೇವರ ಮೊರೆ ಹೋಗುವುದು ಅಗತ್ಯ ಎಂದು ಜನಾರ್ಧನ ಪೂಜಾರಿ ತಿಳಿಸಿದ್ದಾರೆ.