ಕರ್ನಾಟಕದಲ್ಲಿ ಐಎಸ್ಐಎಸ್ ಉಗ್ರ ಚಟುವಟಿಕೆ: ನಾಲ್ವರು ಉಗ್ರರನ್ನು ಬಂಧಿಸಿದ ಎನ್ಐಎ
ಬೆಂಗಳೂರು, ಆ. 04: ಸಾಮಾಜಿಕ ಜಾಲ ತಾಣ ಬಳಸಿಕೊಂಡು ಐಸಿಸ್ ಉಗ್ರ ಚಟುವಟಿಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ( NIA) ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ದೇಶದ ಐದು ಕಡೆ ದಾಳಿ ನಡೆಸಿದೆ. ಐಸಿಸ್ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಬಂಧಿಸಿದೆ.
ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್ ಹಾಗೂ ಮಂಗಳೂರಿನ ಅಮ್ಮರ್ ಅಬ್ದುಲ್ ರೆಹಮಾನ್ ಸೇರಿ ನಾಲ್ವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಕಾಶ್ಮೀರದ ಶ್ರೀನಗರ ನಿವಾಸಿ ಬೆಮೀನಾ, ಮುಜಮಿಲ್ ಹಸೀನ್ ಭಟ್ ಕೂಡ ಬಂಧನಕ್ಕೆ ಒಳಗಾಗಿದ್ದಾರೆ.
ಇದೇ ವರ್ಷ ಮಾ. 5 ರಂದು ಕೇರಳಾ ಮೂಲದ ಮೊಹಮದ್ ಅಮೀನ್ ಸೇರಿದಂತೆ ಮೂವರು ಉಗ್ರರನ್ನು ಎನ್ಐಎ ಬಂಧಿಸಿತ್ತು. ಇದೀಗ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಬಂಧಿತ ಇಬ್ಬರು ಆರೋಪಿಗಳು ಪ್ರಮುಖ ಆರೋಪಿ ಕೇರಳ ಮೂಲದ ಅಮೀನ್ ಜತೆ ಸಂಪರ್ಕ ಹೊಂದಿವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ದಾಳಿ ನಡೆಸಲಾಗಿದೆ ಎಂದು ಎನ್ಐಎ ತಿಳಿಸಿದೆ.

ಕೇರಳಾ ಮೂಲದ ಅಮೀನ್ ಸೇರಿ ಏಳು ಮಂದಿ ಐಸಿಸ್ ಉಗ್ರಗಾಮಿ ಸಂಘಟನೆ ಜತೆ ಕೈ ಜೋಡಿಸಿ ಭಯೋತ್ಪಾದಕ ಕತ್ಯ ಎಸಗಲು ಸಂಚು ರೂಪಿಸಿದ್ದರು.ಐಸಿಸ್ ನ ವಿಚಾರಧಾರೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚುವ ಮೂಲಕ ಯುವಕರನ್ನು ಸೆಳೆಯುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ಕಳೆದ ಮಾ. 5 ರಂದು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದರು.
ಕೇರಳಾ ಮೂಲದ ಮಹಮದ್ ಅಮೀನ್ ಅಲಿಯಾಸ್ ಯಹ್ ಮತ್ತು ಆತನ ಇಬ್ಬರು ಸ್ನೇಹಿತರು ಫೇಸ್ ಬುಕ್ ಇನ್ಸ್ಟಾಗ್ರಾಮ್, ಟೆಲಿಗ್ರಾಮ್ ಚಾನೆಲ್ ಸೃಷ್ಟಿಸಿ ಜಿಹಾದಿ ಬಗ್ಗೆ ವಿಚಾರಧಾರೆ ಹಂಚಿಕೊಂಡು ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಕಳೆದ ಮಾರ್ಚ್ ನಲ್ಲಿಯೇ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಶಂಕಿತ ಉಗ್ರರಾದ ಡಾ. ರಹೀಸ ರಶೀದ್, ಮಹಮದ್ ಅಮೀನ್ ಹಾಗೂ ಅನ್ವರ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರು ಹಾಗೂ ಮಂಗಳೂರು ನಂಟು ಇರುವುದು ಬೆಳಕಿಗೆ ಬಂದಿತ್ತು. ಬಂಧಿತ ಆರೋಪಿಗಳಿಂದ ಕಂಪ್ಯೂಟರ್ , ಹಾರ್ಡ್ ಡಿಸ್ಕ್ ಪೆನ್ ಡ್ರೈವ್ ಮತ್ತಿತರ ಉಪಕರಣ ವಶಪಡಿಸಿಕೊಂಡಿದ್ದರು.
ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಐಸಿಸ್ ನಲ್ಲಿ ತರಬೇತಿ ಪಡೆದಿದ್ದ ಅಮೀನ್ 2020 ರಲ್ಲಿ ಕಾಶ್ಮೀರ್ ಗೆ ಬಂದು ಉಗ್ರಗಾಮಿ ಚಟುವಟಿಕೆ ನಡಸುತ್ತಿದ್ದ. ಸ್ಥಳೀಯ ಯುವಕರನ್ನು ಐಸಿಎಸ್ ಗೆ ಸೇರುವಂತೆ ಪ್ರಚೋದಿಸುವ ಜತೆಗೆ ಮತ್ತೊಬ್ಬ ಉಗ್ರ ಮಹಮದ್ ವಾಕ್ವರ್ ಲೋನೆ ಜತೆ ಸೇರಿಕೊಂಡು ಉಗ್ರ ಚಟುವಟಿಕೆಗಾಗಿ ಚಂದಾ ಸಂಗ್ರಹಿಸಿದ್ದ. ಮಹಮದ್ ಅಮೀನ್ ನಿರ್ದೇಶನದಂತೆ ಆನ್ಲೈನ್ ನಲ್ಲಿ ಹಣವನ್ನು ಲೋನೆ ವರ್ಗಾವಣೆ ಮಾಡಿರುವುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಇದರ ಜತೆಗೆ ಸ್ಥಳೀಯ ಯುವಕರನ್ನು ಐಸಿಎಸ್ ಉಗ್ರ ಸಂಘಟನೆಗೆ ಸೇರಿಸಿಕೊಂಡು ಕರ್ನಾಟಕ,ಕೇರಳಾ ಹಾಗೂ ಕಾಶ್ಮೀರದಲ್ಲಿ ಉಗ್ರ ಜಾಲ ವಿಸ್ತರಿಸಲು ಬಂಧಿತ ಮಹಮದ್ ಅಮೀನ್ ಸಂಚರು ರೂಪಿಸಿದ್ದ. ಹೀಗೆ ಉಗ್ರ ಜಾಲ ಹೆಚ್ಚಿಸಿ ಜಿಹಾದ್ ಹೆಸರಿನಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನುಎಸಗಲು ಯೋಜನೆ ಹಾಕಿಕೊಂಡಿದ್ದರು. ಈ ಎಲ್ಲಾ ಅಂಶಗಳು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಅಮೀನ್ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರು, ಮಂಗಳೂರು ಹಾಗೂ ಕಾಶ್ಮೀರದಲ್ಲಿ ದಾಳಿ ನಡೆಸಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
Recommended Video
ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರಮಾಳ್ ಹಾಗೂ ಮಂಗಳೂರಿನ ಅಮ್ಮರ್ ಅಬ್ದುಲ್ ರೆಹಮಾನ್ ಸಹ ಐಸಿಎಸ್ ಉಗ್ರ ಸಂಘಟನೆಗಾಗಿ ಹಣ ಸಂಗ್ರಹಿಸಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ. ಐಸಿಸ್ ಸಂಘಟನೆ ಜತೆ ಸಂಪರ್ಕ ಹೊಂದಿರುವ ಬಗ್ಗೆ ದಾಳಿ ವೇಳೆ ಹಲವು ಸಾಕ್ಷಾಧಾರಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಐಸಿಸ್ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ರಾಜ್ಯದ ಇಬ್ಬರು ಶಂಕಿತರು ಬಂಧನಕ್ಕೆ ಒಳಗಾಗಿರುವುದು ಬೆಚ್ಚಿ ಬೀಳಿಸಿದೆ.












Click it and Unblock the Notifications