ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!
Recommended Video
ಬೆಂಗಳೂರು, ಏಪ್ರಿಲ್ 10: ಅದು 2017 ರ ಮಾರ್ಚ್ ತಿಂಗಳು.ಭಾರತೀಯ ಜನತಾ ಪಕ್ಷಬ(ಬಿಜೆಪಿ)ದಲ್ಲಿ ಸಂಭ್ರಮವೋ ಸಂಭ್ರಮ! ಕಾಂಗ್ರೆಸ್ ನ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಹೊತ್ತು ಅದು.
ಅದಾಗಿ ವರ್ಷ ಕಳೆದಿದೆಯಷ್ಟೆ. ಇದೀಗ ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಇದೇ ಎಸ್ ಎಂ ಕೃಷ್ಣ ಕಾಂಗ್ರೆಸ್ಸಿಗೆ ಮರಳಿ ಬರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಇದು ವದಂತಿಯೋ, ಅಥವಾ ನಿಖರ ಸುದ್ದಿಯೋ ಗೊತ್ತಿಲ್ಲ. ಆದರೆ "ಸ್ವತಂತ್ರವಾಗಿ ಯೋಚಿಸಿ, ನಿಮ್ಮ ದಾರಿಯನ್ನು ಕಂಡುಕೊಳ್ಳಿ" ಎಂದು ತಮ್ಮ ಬೆಂಬಲಿಗರಿಗೆ ಎಸ್ ಎಂ ಕೃಷ್ಣ ಹೇಳಿದ್ದಾರೆ ಎಂಬ ಮಾತು 'ಕೃಷ್ಣ ಗರ್ ವಾಪ್ಸಿ'ಯ ಎಲ್ಲಾ ಸೂಚನೆಗಳನ್ನು ನೀಡುತ್ತಿದೆ!
ಚುನಾವಣೆ ಹೊತ್ತಲ್ಲಿ 'ಕೃಷ್ಣ' ಅಜ್ಞಾತವಾಸ! ಬಿಜೆಪಿಯಲ್ಲೂ ಕಡೆಗಣನೆ?
ಕಾಂಗ್ರೆಸ್ಸಿನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬಿಜೆಪಿಯತ್ತ ಹೊರಳಿದ್ದ ಕೃಷ್ಣ ಅವರಿಗೆ ಬಿಜೆಪಿಯಲ್ಲೂ ಯಾವ ಸ್ಥಾನಮಾನವೂ ಸಿಕ್ಕಿಲ್ಲ. ಪ್ರಬಲ ಒಕ್ಕಲಿಗ ನಾಯಕ ಕೃಷ್ಣ ಅವರನ್ನು ಬಳಸಿಕೊಂಡು ಮಂಡ್ಯ-ಮೈಸೂರು ಭಾಗದಲ್ಲಿ ನೆಲೆ ಕಂಡುಕೊಳ್ಳಲುವ ಪ್ರಯತ್ನವನ್ನು ಬಿಜೆಪಿ ಮಾಡಲೇ ಇಲ್ಲ!
ಪರಮೇಶ್ವರ್, ಡಿಕೆಶಿ ಜೊತೆ ಮಾತುಕತೆ?!
ಕೆಲವು ಮೂಲಗಳ ಪ್ರಕಾರ ಈಗಾಗಲೇ ಎಸ್ ಎಂ ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಎಸ್ ಎಂ ಕೃಷ್ಣ ಅವರು ಮರಳಿ ಕಾಂಗ್ರೆಸ್ಸಿಗೆ ಬರುವ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಕೃಷ್ಣ ವಾಪಸ್ ಬರುವುದಾದರೆ ಅವರನ್ನು ಪ್ರೀತಿಯಿಂದ ಸ್ವಾಗತಿಸಲು ಕಾಂಗ್ರೆಸ್ ನಾಯಕರು ಸಿದ್ದವಿದ್ದಾರೆ. ಅವರು ವಾಪಸ್ ಬಂದಿದ್ದೇ ಆದರೆ ಮತ್ತೆ ಮಂಡ್ಯ-ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲ ವೃದ್ಧಿಸುತ್ತದೆ.
ರಾಹುಲ್ ಗಾಂಧಿ ಏನಂತಾರೆ?
ಎಸ್ ಎಂ ಕೃಷ್ಣ ಗರ್ ವಾಪ್ಸಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಸಮ್ಮತಿ ಸೂಚಿಸಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಅವರು ಬರುವುದಾದರೆ ನಮ್ಮ ಸ್ವಾಗತ ಇದ್ದೇ ಇದೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವ ಹೊತ್ತಲ್ಲಿ, 'ಬಿಜೆಪಿ ನಾಯಕರಿಂದ ಕಡೆಗಣನೆಗೊಳಗಾಗಿ ಕೃಷ್ಣ ಕಾಂಗ್ರೆಸ್ಸಿಗೆ ಮರಳಿದರು' ಎಂಬ ಮಾತು ಎದ್ದರೆ ಅದರಿಂದ ಬಿಜೆಪಿಗೆ ನಷ್ಟವಾಗುವುದು ಖಂಡಿತ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?
ಪುತ್ರಿಗೆ ಟಿಕೇಟ್ ಕೈತಪ್ಪಿದ್ದು ಕಾರಣವೇ..?
ಎಸ್ ಎಂ ಕೃಷ್ಣ ಅವರು ಈಗಾಗಲೇ ಬಿಜೆಪಿ ನಾಯಕರ ಬಳಿ ತಮ್ಮ ಪುತ್ರಿ ಶಾಂಭವಿ ಅವರಿಗೆ ಮಂಡ್ಯದ ಮದ್ದೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿನಗರದ ಟಿಕೇಟ್ ನೀಡುವಂತೆ ಕೇಳಿದ್ದರು. ಆದರೆ ಈ ಕುರಿತು ಬಿಜೆಪಿಯ ಯಾವೊಬ್ಬ ನಾಯಕರು ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೆ ಮೊನ್ನ ತಾನೇ ಬಿಡುಗಡೆಯಾದ ಬಿಜೆಪಿಯ ಮೊದಲ ಪಟ್ಟಿಯಲ್ಲಿ ರಾಜರಾಜೇಶ್ವರಿನಗರದ ಟಿಕೇಟ್ ಅನ್ನು ಪಿ.ಎಂ.ಮುನಿರಾಜು ಗೌಡ ಅವರಿಗೆ ನೀಡಲಾಗಿದೆ. ಇದು ಸಹ ಕೃಷ್ಣ ಅವರ ಮುನಿಸಿಗೆ ಕಾರಣ ಎನ್ನಲಾಗುತ್ತಿದೆ.
ಬಿಜೆಪಿಯಲ್ಲಿ ಕೃಷ್ಣ ಕಡೆಗಣನೆ
'ಎಸ್ ಎಂ ಕೃಷ್ಣ ಅವರು ಹಿರಿಯ ರಾಜಕಾರಣಿ, ಅನುಭವಿ ಕೂಡ. ಅವರ ಅನುಭವ ಮತ್ತು ಹಿರಿತನ ನಮಗೆ ಮಾರ್ಗದರ್ಶನ' ಎಂದಿದ್ದ ಬಿಜೆಪಿ ನಾಯಕರು ನಿಜಕ್ಕೂ ಅವರ ಅನುಭವವನ್ನು ಬಳಸಿಕೊಂಡಿದ್ದಾರಾ? ಮಹತ್ವದ ನಿರ್ಧಾರಗಳಿಗೂ ಮುನ್ನ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾ? ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಳೆದ ಒಂದೂವರೆ ತಿಂಗಳಿನಿಂದ ಕರ್ನಾಟಕಕ್ಕೆ ಎಡತಾಕುತ್ತಲೇ ಇದ್ದಾರೆ. ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ... ಆದರೆ ಒಮ್ಮೆಯಾದರೂ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿದ್ದಾರಾ..? ಪ್ರಚಾರಕ್ಕೆ ಬರುವಂತೆ ಆಮಂತ್ರಿಸಿದ್ದಾರಾ..? ಟಿಕೇಟ್ ಹಂಚಿಕೆ ಸಂದರ್ಭದಲ್ಲೂ ಕೃಷ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣುವುದಿಲ್ಲ ಎಂಬ ದೂರೂ ಇದೆ. ಈ ಎಲ್ಲವೂ ಕೃಷ್ಣ ಬೆಂಬಲಿಗರಲ್ಲೂ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಕೃಷ್ಣ ಗರ್ ವಾಪ್ಸಿಗೆ ಈ ಎಲ್ಲವೂ ವೇದಿಕೆ ಒದಗಿಸಿವೆ ಎಂಬುದು ವದಂತಿ. ಒಟ್ಟಿನಲ್ಲಿ ಕೃಷ್ಣ ನಡೆ ವಿಧಾನಸಭೆ ಚುನಾವಣೆಯಲ್ಲಿ ಸಂಚಲನ ಮೂದಿಸಿದರೆ ಅಚ್ಚರಿಯಿಲ್ಲ.