ಅಮಿತ್ ಶಾ Vs ಬಿಎಸ್ವೈ: ದೆಹಲಿ ಬಿಜೆಪಿ ಅಂಗಣದಲ್ಲಿ ಏನಿದು ಗುಸುಗುಸು ಸುದ್ದಿ?
ಬೆಂಗಳೂರು, ಆಗಸ್ಟ್ 26: ಹೊಸತಾಗಿ ಮುಖ್ಯಮಂತ್ರಿ ಗದ್ದುಗೆ ಏರಿದ ಯಡಿಯೂರಪ್ಪ ಮೊನ್ನೆ ದೆಹಲಿಗೆ ಹೋಗಿದ್ದಷ್ಟೆ ಅಲ್ಲ, ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿ ಬಂದಿದ್ದಾರೆ ಎಂಬ ಸುದ್ದಿ ಈಗ ದೆಹಲಿ ರಾಜಕೀಯ ಪಡಶಾಲೆಯಲ್ಲಿ ಹರಿದಾಡುತ್ತಿದೆ.
ಕಷ್ಟಪಟ್ಟು ಸಮ್ಮಿಶ್ರ ಸರಕಾರ ಉರುಳಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಸರಾಗವಾಗಿ ಸರಕಾರ ನಡೆಸಲು ಬಿಎಸ್ವೈಗೆ ಸಾಧ್ಯವಾಗುತ್ತಿಲ್ಲ. ಹಗ್ಗ ಜಗ್ಗಾಟಗಳು ನಡೆದು ಸಚಿವರ ಪಟ್ಟಿಯನ್ನೇನೋ ಅಂತಿಮಗೊಳಿಸಲಾಯಿತಾದರೂ ಖಾತೆ ಹಂಚಿಕೆ ಪ್ರಕ್ರಿಯೆಗೆ ಈ ಹೊತ್ತಿಗೂ ಹಾಗೆಯೇ ಉಳಿದಿದೆ.
ಮುಗಿದ ಖಾತೆ ಕಿತ್ತಾಟ: ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
ಒಂದು ಕಡೆ 22 ಜಿಲ್ಲೆಗಳಲ್ಲಿ ನೆರೆ, ಮತ್ತೊಂದು ಕಡೆ 3 ಜಿಲ್ಲೆಗಳಲ್ಲಿ ಬರದ ವಾತಾವರಣವಿರುವಾಗ ಜನ ತ್ವರಿತಗತಿಯ ಕೆಲಸವನ್ನು ಸರಕಾರದಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಅಗತ್ಯ ವೇಗದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂಬುದು ಯಡಿಯೂರಪ್ಪರ ಸಹಜ ಕೋಪಕ್ಕೆ ಕಾರಣ.
ತಿಂಗಳ ಹಿಂದೆ ಶ್ರೀರಾಮುಲು ಬಗ್ಗೆ ಡಿ ಕೆ ಶಿವಕುಮಾರ್ ನುಡಿದ ಭವಿಷ್ಯ ನಿಜವಾಯಿತು
ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಿಗೆ ಖಾತೆಗಳನ್ನು ಹಂಚಿ ಸಿಎಂ ಯಡಿಯೂರಪ್ಪ ಇಷ್ಟೊತ್ತಿಗಾಗಲೇ ನಿರಾಳರಾಗಬೇಕಿತ್ತು. ಆದರೆ ಹೈಕಮಾಂಡ್ ಉಪಮುಖ್ಯಮಂತ್ರಿಗಳ ಹುದ್ದೆ ಎನ್ನುವ ಹೊಸ ದಾಳವನ್ನು ಉರುಳಿಸಿದೆ. ಇದು ಯಡಿಯೂರಪ್ಪನವರ ನೆಮ್ಮದಿಗೆ ಭಂಗ ತಂದಿದೆ ಎಂಬುದು ಕಳೆದೆರಡು ದಿನಗಳ ಅಂತರದಲ್ಲಿ ಕೇಳಿಬರುತ್ತಿರುವ ಪ್ರಮುಖ ರಾಜಕೀಯ ವಿಶ್ಲೇಷಣೆ. ಈ ನಡುವೆ ಸೋಮವಾರ ಖಾತೆ ಹಂಚಿಕೆಯ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಅರುಣ್ ಜೇಟ್ಲಿಯವರ ಅಂತಿಮ ಸಂಸ್ಕಾರ
ಮೊದಲು, ಡಿಸಿಎಂ ಹುದ್ದೆಯಿಲ್ಲ ಎನ್ನುತ್ತಿದ್ದ ಯಡಿಯೂರಪ್ಪನವರಿಂದ, ಈಗ ಮೂರೋ ನಾಲ್ಕೋ ಡಿಸಿಎಂಗಳಿರುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಂಪುಟ ರಚನೆಯ ನಂತರ, ದೆಹಲಿಗೆ ಹೋಗಿದ್ದ ಯಡಿಯೂರಪ್ಪನವರಿಗೆ ಅಮಿತ್ ಶಾ ಭೇಟಿ ಸಾಧ್ಯವಾಗಿರಲಿಲ್ಲ. ಅರುಣ್ ಜೇಟ್ಲಿಯವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ತೆರಳಿದ್ದ ಬಿಎಸ್ವೈಗೆ ಪಕ್ಷದ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾರನ್ನು ಮಾತ್ರ ಭೇಟಿಯಾಗಲು ಸಾಧ್ಯವಾಗಿತ್ತು.
ಅಮಿತ್ ಶಾ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ
ತಮ್ಮನ್ನು ಅಮಿತ್ ಶಾ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಭಾವನೆ ಕಾಡುತ್ತಿರುವುದಕ್ಕೋ ಏನೋ, ದೆಹಲಿಯಲ್ಲಿರುವ ಕರ್ನಾಟಕ ಮೂಲದ ಸಂಘ ಪರಿವಾರದ ಮುಖಂಡರಲ್ಲಿ ತಮ್ಮ ನೋವನ್ನು ಯಡಿಯೂರಪ್ಪ ತೋಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸಂಪುಟ ರಚನೆ, ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಹುದ್ದೆ ಹೀಗೆ, ಬಿಎಸ್ವೈ ಸಿಟ್ಟಿಗೆ ಇರುವ ಹಲವು ಕಾರಣಗಳನ್ನು ಅವರು ಮುಂದಿಟ್ಟಿದ್ದಾರೆ ಎಂಬುದು ಲಭ್ಯವಾಗುತ್ತಿರುವ ಮಾಹಿತಿ.
ಪಕ್ಷದ ಹೈಕಮಾಂಡಿಗೆ ಯಡಿಯೂರಪ್ಪ ಚಾಲೆಂಜ್
ಮೂಲಗಳ ಪ್ರಕಾರ, "ನನ್ನನ್ನು ಸರಿಯಾಗಿ ನಡೆಸಿಕೊಳ್ಳದೇ ಇದ್ದಲ್ಲಿ ರಾಜೀನಾಮೆ ನೀಡಲು ಸಿದ್ದ, ನಾನಿಲ್ಲದೇ ಅದು ಹೇಗೆ ಚುನಾವಣೆ ಎದುರಿಸುತ್ತೀರೋ ನೋಡೋಣ," ಎಂದು ಪಕ್ಷದ ಹೈಕಮಾಂಡಿಗೇ ಅರ್ಥಾತ್ ಅಮಿತ್ ಶಾಗೇ ಯಡಿಯೂರಪ್ಪ ಚಾಲೆಂಜ್ ಹಾಕಿ ಬಂದಿದ್ದಾರೆ. ಹೀಗೊಂದು ಸುದ್ದಿ ಬಿಜೆಪಿ ಅಂಗಣದಲ್ಲಿ ಹರಿದಾಡಲು ಇತಿಹಾಸವೂ ಕಾರಣ ಇರಬಹುದು.
ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು
ಹಿಂದೆ ಇಂತಹದ್ದೇ ಸನ್ನಿವೇಶ ಸೃಷ್ಟಿಯಾದಾಗ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ರಾಷ್ಟ್ರೀಯ ಪಕ್ಷಕ್ಕೆ ಸವಾಲೆಸೆದು ಚುನಾವಣೆಯಲ್ಲಿ ಅದರ ಹೀನಾಯ ಸೋಲಿಗೂ ಕಾರಣವಾಗಿದ್ದರು. ಅಂತಿಮವಾಗಿ ಕರ್ನಾಟಕದ ಬಿಜೆಪಿ ವಿಚಾರದಲ್ಲಿ ಯಡಿಯೂರಪ್ಪ ಬಿಟ್ಟು ಏನನ್ನೂ ಮಾಡಲಾದ ಅಸಹಾಯಕತೆ ಅನುಭವಿಸಿದ ಹೈಕಮಾಂಡ್ ಮತ್ತೆ ಪಕ್ಷಕ್ಕೆ ತರೆತಂದು ರಾಜ್ಯಾಧ್ಯಕ್ಷ ಪಟ್ಟವನ್ನು ಕೊಟ್ಟಿತ್ತು. ಇಂತಹ ಹಿನ್ನೆಲೆ ಇರುವಾಗ ಯಡಿಯೂರಪ್ಪ ಸಿಟ್ಟು ಹುಸಿ ಹೋಗುವುದಿಲ್ಲ ಎಂಬ ಆತಂಕದ ಹಿನ್ನೆಲೆಯಲ್ಲಿ ಪಕ್ಷದೊಳಗೆ ಗುಸುಗುಸು ಆರಂಭವಾಗಿದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂಗಾರ
ಹಾಗಂತ, ಇವತ್ತಿಗೆ ಖಾತೆ ಹಂಚಿಕೆ ಮುಗಿದರೂ ಬಿಎಸ್ವೈ ಕೋಪ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂಗಾರ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿಯನ್ನು ಸಂಪುಟ ರಚನೆಯಿಂದ ಹೊರಗಿಟ್ಟಿದ್ದಕ್ಕೆ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ನಡುವೆ ಉಪ ಮುಖ್ಯಮಂತ್ರಿಗಳು ಎಂಬ ಅಧಿಕಾರ ವಿಕೇಂದ್ರಿಕರಣದ ಹೈಕಮಾಂಡ್ ನಿಲುವಿಗೂ ಅವರು ಅಸಮಾಧಾನಿತರೇ ಆಗಿದ್ದಾರೆ.
ಇದ್ಯಾವುದಕ್ಕೂ ಅಮಿತ್ ಶಾ ತಲೆಕೆಡಿಸಿಕೊಳ್ಳುತ್ತಿಲ್ಲ
ಯಡಿಯೂರಪ್ಪನವರ ಇಷ್ಟೆಲ್ಲಾ ಕೋಪ ತಾಪಗಳ ನಡುವೆಯೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತ್ರ ಆಂತರಿಕ ವರದಿಗಳನ್ನು ಮುಂದಿಟ್ಟುಕೊಂಡೇ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದು ಇಬ್ಬರ ನಡುವೆ ಸೃಷ್ಟಿಯಾಗಿರುವ ಕಂದಕದಲ್ಲಿ ಹೊಸ ಜ್ವಾಲಾಮುಖಿಯನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ. ಈ ಕಾರಣಗಳಿಗಾಗಿಯೇ ದಿಲ್ಲಿ ಬಿಜೆಪಿ, ಆರ್ಎಸ್ಎಸ್ ವಲಯದಲ್ಲಿ ಯಡಿಯೂರಪ್ಪ ಮತ್ತು ಅಮಿತ್ ಶಾ ನಡುವಿನ ಸಂಬಂಧ ಈಗ ಹಾಟ್ ಹಾಟ್ ಚರ್ಚೆಯ ವಿಚಾರವಾಗಿದೆ.