ಲೋಕಸಭಾ ಚುನಾವಣೆ: ಜೆಡಿಎಸ್- ಕಾಂಗ್ರೆಸ್ 'ಸೀಟು' ಚೌಕಾಸಿ ಆಗಲೇ ಆರಂಭ?
Recommended Video

ಹಾಲೀ ಹದಿನಾರನೇ ಲೋಕಸಭೆಯ ಅವಧಿ ಅಧಿಕೃತವಾಗಿ ಮುಗಿಯಲು ಇನ್ನೂ ಹೆಚ್ಚುಕಮ್ಮಿ ಒಂದು ವರ್ಷ ಬಾಕಿಯಿದೆ. ಇನ್ನೊಂದು ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಬಾರದೆಂದು, ಬಿಜೆಪಿಯೇತರ ಪಕ್ಷಗಳು ಕೈಜೋಡಿಸಲು ಆರಂಭಿಸಿವೆ. ಕೆಲವೊಂದು ಪಕ್ಷಗಳು ಎನ್ಡಿಎ ತೆಕ್ಕೆಯಿಂದ ಜಾರುತ್ತಿವೆ.
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ಇನ್ನೂ ಮುಗಿದಿಲ್ಲ. ಆದರೆ, ಈ ಮಧ್ಯೆ ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹೊಂದಾಣಿಕೆಯ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಚೌಕಾಸಿ ಆರಂಭವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ರಾಜ್ಯದ ಸಮ್ಮಿಶ್ರ ಸರಕಾರದ ವಿಚಾರಕ್ಕೆ ಬಂದಾಗ, ಒಂದು ವಾರದ ಹಿಂದಿನ ರಾಜಕೀಯ ಪರಿಸ್ಥಿತಿಗೂ, ಇಂದಿಗೂ ವ್ಯತ್ಯಾಸವನ್ನು ಕಾಣಬಹುದಾಗಿದೆ. ಜೆಡಿಎಸ್ ತನ್ನ ಹಿಡಿತವನ್ನು ಬಲಪಡಿಸಿಕೊಂಡು ಬರುತ್ತಲೇ ಇದೆ. ಇದಕ್ಕೆ ಮುಂದಿನ ಲೋಕಸಭಾ ಚುನಾವಣೆಗೆ ದೇವೇಗೌಡ್ರು ಇಟ್ಟಿರುವ ಪ್ರಪೋಸಲ್ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ.
ಐದು ವರ್ಷ ಕುಮಾರಣ್ಣನೇ ಸಿಎಂ ಎಂದು ನಾವೆಲ್ಲೂ ಹೇಳಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳಿಕೊಂಡು ಓಡಾಡಿತ್ತಿದ್ದರೆ, ಮುಂದಿನ ಐದು ವರ್ಷ ಎಚ್ಡಿಕೆಯೇ ಸಿಎಂ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿ ಬಿಟ್ಟಿದೆ. ಪ್ರಮುಖ ಖಾತೆಯನ್ನೂ ಜೆಡಿಎಸ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಯಶಸ್ವಿಯಾಗಿದೆ.
ಕಾಂಗ್ರೆಸ್ ಇಷ್ಟು ಸಾಫ್ಟ್ ಆಗಲು, ದೇವೇಗೌಡರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೇಗೆ ಒಂದಾಗಿ ಜನರ ಬಳಿ ಹೋಗಬೇಕು ಎನ್ನುವುದನ್ನು ಅಂಕಿಅಂಶದ ಸಮೇತ ರಾಹುಲ್ ಗಾಂಧಿಗೆ ವಿವರಿಸಿರುವುದು ಕಾರಣ ಎನ್ನಲಾಗುತ್ತಿದೆ. ಜೆಡಿಎಸ್ ಪಟ್ಟು ಹಿಡಿದು ಕೂತಿರುವ 10 ಕ್ಷೇತ್ರಗಳು ಯಾವುವು? ಮುಂದೆ ಓದಿ..

ಹತ್ತು ಸೀಟು ಬೇಕೆಂದು ಜೆಡಿಎಸ್ ಪಟ್ಟು ಹಿಡಿದು ಕೂತಿದೆ?
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹತ್ತು ಸೀಟು ಬೇಕೆಂದು ಜೆಡಿಎಸ್ ಪಟ್ಟು ಹಿಡಿದು ಕೂತಿದೆ ಎನ್ನುವ ಮಾಹಿತಿಯಿದೆ. ಆದರೆ, ಕಾಂಗ್ರೆಸ್ ಎಂಟು ಕ್ಷೇತ್ರ ಬಿಟ್ಟು ಕೊಡಲು ಮಾತ್ರ ಸಾಧ್ಯ ಎಂದು ಹೇಳಿರುವುದರಿಂದ, ಜೊತೆಗೆ, ಜೆಡಿಎಸ್ಸಿಗೆ ನೆಲೆಯಿಲ್ಲದ ಕ್ಷೇತ್ರವೊಂದನ್ನು ಕಾಂಗ್ರೆಸ್ ಬಿಟ್ಟುಕೊಡಲು ಸಿದ್ದವಾಗಿರುವುದರಿಂದ, ಸೀಟು ಹಂಚಿಕೆ ಸಂಬಂಧದ ಮಾತುಕತೆಗೆ ಸದ್ಯದ ಮಟ್ಟಿಗೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ.

ಬಿಜೆಪಿಯನ್ನು ಕೇವಲ ಆರರಿಂದ ಏಳು ಕ್ಷೇತ್ರಕ್ಕೆ ಕಟ್ಟಿಹಾಕಬಹುದು
2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಂದಿದ್ದ ಶೇಕಡಾವಾರು ಫಲಿತಾಂಶ ಮತ್ತು 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಂದ ರಿಸಲ್ಟ್ ಅನ್ನು ಆಧರಿಸಿ, ಜೊತೆಗೆ ಜಾತಿವಾರು ಲೆಕ್ಕಾಚಾರವನ್ನು ಮುಂದಿಟ್ಟು, ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದರೆ, ಬಿಜೆಪಿಯನ್ನು ಕೇವಲ ಆರರಿಂದ ಏಳು ಕ್ಷೇತ್ರಕ್ಕೆ (ರಾಜ್ಯದಲ್ಲಿ) ಕಟ್ಟಿಹಾಕಬಹುದು ಎನ್ನುವ ರಾಜಕೀಯ ಲೆಕ್ಕಾಚಾರವನ್ನು ಗೌಡ್ರು, ರಾಹುಲ್ ಮುಂದಿಟ್ಟಿದ್ದಾರೆಂದು ಕನ್ನಡ ವಾಹಿನಿಯೊಂದು ವರದಿ ಮಾಡಿದೆ.

ಪ್ರಸಕ್ತ ರಾಜ್ಯದಲ್ಲಿ ಪಕ್ಷಗಳ ಬಲಾಬಲ ಬಿಜೆಪಿ- 15 ಕಾಂಗ್ರೆಸ್ - 9, ಜೆಡಿಎಸ್ - 1
ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ, ಬಿಜೆಪಿ 17, ಕಾಂಗ್ರೆಸ್ 9 ಮತ್ತು 2ಕ್ಷೇತ್ರವನ್ನು ಜೆಡಿಎಸ್ ಗೆದ್ದಿತ್ತು. ಅದರಲ್ಲಿ ಇತ್ತೀಚೆಗಿನ ಅಸೆಂಬ್ಲಿ ಚುನಾವಣೆಯಲ್ಲಿ ಮೂವರು ಸಂಸದರು ಅಸೆಂಬ್ಲಿಗೆ ಆಯ್ಕೆಯಾಗಿದ್ದರಿಂದ, ಮೂರು ಕ್ಷೇತ್ರಗಳ (ಶಿವಮೊಗ್ಗ, ಬಳ್ಳಾರಿ, ಮಂಡ್ಯ) ಚುನಾವಣೆ ನಡೆಯಬೇಕಿದೆ. ಅಲ್ಲಿಗೆ ರಾಜ್ಯದಲ್ಲಿ ಈಗಿನ ಪಕ್ಷಗಳ ಬಲಾಬಲ ಬಿಜೆಪಿ- 15 ಕಾಂಗ್ರೆಸ್ - 9, ಜೆಡಿಎಸ್ - 1.

ಕಾಂಗ್ರೆಸ್ ಬೇಡಿಕೆಯಿಟ್ಟಿರುವ ಕ್ಷೇತ್ರಗಳು
ದಾವಣಗೆರೆ, ಬಳ್ಳಾರಿ, ಉತ್ತರಕನ್ನಡ, ಚಾಮರಾಜನಗರ, ವಿಜಯಪುರ, ಚಿಕ್ಕೋಡಿ, ದಕ್ಷಿಣಕನ್ನಡ, ಹಾವೇರಿ, ಬೆಂಗಳೂರು (ದ), ಬೆಂಗಳೂರು (ಕೇ), ಬೆಂಗಳೂರು (ಗ್ರಾ), ಕಲಬುರಗಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ.

ಜೆಡಿಎಸ್ ಬೇಡಿಕೆಯಿಟ್ಟಿರುವ ಕ್ಷೇತ್ರಗಳು
ಬೆಂಗಳೂರು (ಉ), ತುಮಕೂರು, ಮಂಡ್ಯ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮೈಸೂರು, ಚಿಕ್ಕಬಳ್ಳಾಪುರ, ಬೀದರ್ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ಡಿಮಾಂಡ್ ಮಾಡುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್ಸಿಗೆ ಬಿಟ್ಟುಕೊಡಲು ಸಿದ್ದವಿದ್ದರೂ, ಜೆಡಿಎಸ್ಸಿಗೆ ಅದು ಬೇಕಾಗಿಲ್ಲ.












Click it and Unblock the Notifications