ಗುಪ್ತಚರ ಇಲಾಖೆ ವರದಿ: ಕಾಂಗ್ರೆಸಿಗೆ 90 ಸ್ಥಾನ, ಸಿಎಂಗೆ ಎರಡೂ ಕಡೆ ಸೋಲಿನ ಭೀತಿ?
ಬೆಂಗಳೂರು, ಮೇ 14: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಇನ್ನು ಕೆಲವೇ ಕ್ಷಣಗಳಷ್ಟೇ ಬಾಕಿ ಉಳಿದಿವೆ. ರಾಜ್ಯದ ಜನರು, ರಾಜಕಾರಣಿಗಳು ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ತಮ್ಮದೇ ಲೆಕ್ಕಾಚಾರದಲ್ಲಿದ್ದಾರೆ.
ಈ ನಡುವೆ ರಾಜ್ಯ ಗುಪ್ತಚರ ಇಲಾಖೆ ಸ್ಪೋಟಕ ವರದಿಯೊಂದನ್ನು ನೀಡಿದೆ ಎಂಬ ಸುದ್ದಿ ಹೊರ ಬರುತ್ತಿದೆ. ಈ ವರದಿ ಪ್ರಕಾರ ರಾಜ್ಯದಲ್ಲಿ ಮತ್ತೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ.
ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದ್ದು 90 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಸುಮಾರು 80 ಸ್ಥಾನಗಳಲ್ಲಿ ಗೆದ್ದರೆ, ಜೆಡಿಎಸ್ 45 ಕ್ಕೂ ಹೆಚ್ಚಿನ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ವರದಿಯನ್ನು ಗುಪ್ತಚರ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆಯಂತೆ.

ವರದಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 10 ಕ್ಕೂ ಹೆಚ್ಚು ಸಚಿವರು ಸೋಲಲಿದ್ದಾರೆ. ಸಿಎಂ ಆಪ್ತರೇ ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಹಲವು ಕಡೆಗಳಲ್ಲಿ ಸೋಲಲಿದ್ದಾರೆ ಎನ್ನಲಾಗಿದೆ.
ಮುಖ್ಯವಾಗಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆಲುವು ಕಷ್ಟ ಎಂದು ವರದಿ ಉಲ್ಲೇಖಿಸಿದೆ. ಜೊತೆಗೆ ಬಾದಾಮಿಯಲ್ಲೂ ಮುಖ್ಯಮಂತ್ರಿಗೆ ಗೆಲುವು ಸುಲಭವಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೊತೆ ತುರುಸಿನ ಸ್ಪರ್ಧೆ ಇದ್ದು ಯಾರ ಕೈ ಬೇಕಾದರೂ ಮೇಲಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆಯಂತೆ.












Click it and Unblock the Notifications