ಎಫ್ಸಿ ಇಲ್ಲದಿದ್ದರೂ ಸಹ ವಿಮೆ ಪರಿಹಾರ ನೀಡಲೇಬೇಕು: ಕರ್ನಾಟಕ ಹೈಕೋರ್ಟ್
ಬೆಂಗಳೂರು. ನ.14: ವಾಹನ ಅಪಘಾತಕ್ಕೀಡಾದ ದಿನದವರೆಗೆ ವಿಮೆ ಚಾಲ್ತಿಯಲ್ಲಿದ್ದರೆ, ವಾಹನಕ್ಕೆ ಕ್ಷಮತಾ ಪ್ರಮಾಣಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ಇಲ್ಲದಿದ್ದರೂ ಸಹ ವಿಮಾ ಕಂಪನಿ ಪರಿಹಾರವನ್ನು ಪಾವತಿಸಲೇಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ನೀಡಿದೆ.
ಆ ಮೂಲಕ ಅಪಘಾತಕ್ಕೆ ಒಳಗಾದ ವಾಹನಕ್ಕೆ ಎಫ್ಸಿ ಇರಲಿಲ್ಲವೆಂದು ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಯತ್ನಿಸಿದ ನ್ಯೂ ಇಂಡಿಯಾ ಇನ್ಸೂರೆನ್ಸ್ ವಿಮಾ ಕಂಪನಿಗೆ ಬಿಸಿ ಮುಟ್ಟಿಸಿದೆ.
ಬೆಂಗಳೂರು: ಕಾರಿಗೆ ಬೈಕ್ ವಿಮೆ- ಅಪಘಾತವಾದಾಗ ಸತ್ಯಾಂಶ ಬಯಲು!
ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ವಿಮಾ ಕಂಪನಿಯ ವಾದವನ್ನು ಸರಾಸಗಟಾಗಿ ತಳ್ಳಿಹಾಕಿದೆ ಮತ್ತು 2018ರಲ್ಲಿ ಹೈಕೋರ್ಟ್ ನೀಡಿರುವ ಎರಡು ತೀರ್ಪುಗಳನ್ನು ಉಲ್ಲೇಖಿಸಿ, ಎಫ್ ಸಿ ಮಾನ್ಯತೆ ಇಲ್ಲದಿರುವುದರಿಂದ ಮೂಲಭೂತ ಉಲ್ಲಂಘನೆಯಲ್ಲ ಎಂದು ಆದೇಶಿಸಿದೆ.
ವಿಮಾ ಕಂಪನಿ ವಾದವೇನು?: ವಾಹನಗಳು ರಸ್ತೆ ಮೇಲೆ ಸಂಚರಿಸಲು ಫಿಟ್ನೆಸ್ ಸರ್ಟಿಫಿಕೆಟ್ ಅತಿ ಮುಖ್ಯ, ಅದು ಇಲ್ಲವಾದರೆ ವಾಹನ ಸಂಚಾರಕ್ಕೆ ಯೋಗ್ಯವಲ್ಲ. ಹಾಗಾಗಿ ಎಂಎಸಿಟಿ ಕಂಪನಿಗೆ ಹೊಣೆಗಾರಿಕೆ ನಿಗದಿಪಡಿಸಿ ತಪ್ಪೆಸಗಿದೆ. ಆದ್ದರಿಂದ ಎಂಎಸಿಟಿ ಆದೇಶ ರದ್ದುಗೊಳಿಸಬೇಕು ಎಂದು ಕೇಳಿತ್ತು.
ಬೆಂಗಳೂರಿನಲ್ಲಿ ಹೆಚ್ಚಾಯ್ತು ಇನ್ಸುರೆನ್ಸ್ ಕ್ಲೇಮ್; ವಿಮಾ ಕಂಪನಿಗಳ ಪೀಕಲಾಟ
ಆದರೆ ವಿಮಾ ಕಂಪನಿ ವಾದ ಒಪ್ಪಲಾಗದು, ಅಪಘಾತ ನಡೆದ ದಿನದವರೆಗೆ ವಾಹನಕ್ಕೆ ವಿಮೆ ಇದ್ದರೆ ಪರಿಹಾರ ಪಾವತಿಸಬೇಕು, ಎಫ್ ಸಿ ಇಲ್ಲವೆಂದು ಪರಿಹಾರ ಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಗಮನಾರ್ಹ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: 2013ರ ಅಕ್ಟೋಬರ್ ತಿಂಗಳಿನಲ್ಲಿ ವೇಗವಾಗಿ ಪ್ರಯಾಣಿಸುತ್ತಿದ್ದ ಆಟೋರಿಕ್ಷಾ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಆಟೋಗೆ ಎಫ್ ಸಿ ಇಲ್ಲದ ಕಾರಣ ಪರಿಹಾರವನ್ನು ನೀಡಲಾಗದು ಎಂಬ ವಾದ ಮುಂದಿಟ್ಟಿತ್ತು.
ಆದರೆ ಹೈಕೋರ್ಟ್, ವಿಮಾ ಕಂಪನಿಯ ವಾದವನ್ನು ತಳ್ಳಿ ಹಾಕಿ ವಾಹನಕ್ಕೆ ವಿಮೆ ಇದ್ದ ಮೇಲೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲವಾದರೂ ಸಹ ಕಂಪನಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು, ಪರಿಹಾರವನ್ನು ನೀಡಲೇಬೇಕು ಎಂದು ಆದೇಶಿಸಿದೆ.
ಅಲ್ಲದೆ, ಎಂಎಸಿಟಿ ನೀಡಿದ್ದ 4.9 ಲಕ್ಷ ರೂ. ಪರಿಹಾರವನ್ನು 17.8 ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ.