ಮಂಡ್ಯ ಮತ್ತು ಕೊಡಗು ಜಿಲ್ಲೆಯ ತಾಜಾ ಸುದ್ದಿ, ಓದಿಕೊಳ್ಳಿ
ಕೊಡಗು,ಮಾರ್ಚ್,19: ಕೊಡಗಿನ ಆನೆಕಾಡು ಅರಣ್ಯಕ್ಕೆ ಕಾಡ್ಗಿಚ್ಚು ತಗುಲಿದ ಪರಿಣಾಮ ಸುಮಾರು ಮೂವತ್ತು ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ಆರಿಸಲು ಹರಸಾಹಸ ಪಡಬೇಕಾಯಿತು.
ಕುಶಾಲನಗರ ಬಳಿಯ 7ನೇ ಹೊಸಕೋಟೆ ತೊಂಡೂರು ಗ್ರಾಮದ ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇದರಿಂದ ಕಾಡಿನ ಸುತ್ತಮುತ್ತಲಿನ ರೈತರು ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]
ಕಾಡಿನ ಸುತ್ತಮುತ್ತ ಒಣಗಿದ ಕುರುಚಲು ಗಿಡಗಳು, ಮೆಳೆಗಳು, ಮರಗಳು ಒಣಗಿ ನಿಂತಿದ್ದರಿಂದ ಬೆಂಕಿ ರಭಸದಿಂದ ಹೊತ್ತಿ ಉರಿಯ ತೊಡಗಿತ್ತು. ಸ್ಥಳಕ್ಕೆ ಅಗ್ನಿಶಾಮಕದಳದ ಎರಡು ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ.[ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು]
ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು, ರೈತರು ತಮ್ಮ ತೋಟ, ಗದ್ದೆಗಳಿಗೂ ಬೆಂಕಿ ವ್ಯಾಪಿಸಬಹುದೆಂದು ಭಯಭೀತರಾಗಿದ್ದರು. ಕೊನೆಗೂ ಅರಣ್ಯದಲ್ಲಿ ಉರಿಯುತ್ತಿದ್ದ ಬೆಂಕಿ ತಹಬದಿಗೆ ಬಂದಿತ್ತಾದರೂ ಕಾಡಿನಲ್ಲಿದ್ದ ಪ್ರಾಣಿಸಂಕಲುಗಳ ಜೀವಕ್ಕೆ ಮಾರಕ, ಅಪಾರ ಪ್ರಮಾಣದ ಹಸಿರು ಗಿಡಗಳು ಕಾಡ್ಗಿಚ್ಚಿಗೆ ನಾಶವಾಗಿದೆ.[ನಾಗರಹೊಳೆ ಅಭಯಾರಣ್ಯದಲ್ಲಿವೆ 72 ಹುಲಿಗಳು]
ಅಕ್ರಮ ಮರಳು ವಶ: ಇಬ್ಬರ ಬಂಧನ
ಮಂಡ್ಯ, ಮಾರ್ಚ್,19: ಕೆಲವು ತಿಂಗಳಿನಿಂದ ನಿರಂತರವಾಗಿ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿ ಮರಳು ಸಹಿತ 4 ಟ್ರಾಕ್ಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.[ಅಕ್ರಮ ಮರಳು ದಂಧೆ, ಕಪಿಲೆ, ನುಗು ಜಲಾಶಯಕ್ಕೆ ಆತಂಕ]
ಬಂಡಿಹೊಳೆ ಸಮೀಪದ ಹೇಮಾವತಿ ನದಿ ದಡದಲ್ಲಿ, ಮದ್ದಿಕ್ಯಾಚಮನಹಳ್ಳಿ ಹಾಗೂ ವಿಠಲಾಪುರ-ಕೂಡಲಕುಪ್ಪೆ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ನಂದೀಶ್ ಮತ್ತು ರಾಜಶೇಖರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಏಳು ಮಂದಿ ಪರಾರಿಯಾಗಿದ್ದಾರೆ.[ಅಕ್ರಮ ಮರಳು ದಂಧೆ ವಿರುದ್ಧ ಏಕಾಂಗಿಯಾಗಿ ದನಿ ಎತ್ತಿದ ರೈತ]
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಟಿ.ಎಂ.ಪುನೀತ್ ನೇತೃತ್ವದ ತಂಡ ಅಕ್ರಮ ಮರಳು ದಂಧೆಕೋರರನ್ನು ಬಂಧಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಏಳು ಮಂದಿ ಬಂಧನಕ್ಕೆ ಬಲೆ ಬೀಸಿದ್ದಾರೆ.