ರೌಡಿ ಶೀಟರ್ ನಾಗನ ಪತ್ತೆಯ ಹಿಂದಿನ ರೋಚಕ ಕಹಾನಿ
ಸತತ 27 ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಪೊಲೀಸರಿಗೆ ಸವಾಲು ಎಸೆದಿದ್ದ ನಾಗನ ಕೆಲವಾರು ಸಹಚರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಅದೊಂದು ಸುಳಿವು ಹೊರಬಿದ್ದಿದ್ದೇ ನಾಗನ ಬಂಧನಕ್ಕೆ ಮೂಲ ಕಾರಣ.
ಕಳೆದ ಕೆಲವಾರು ದಿನಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ನಾಗ ಅವರನ್ನು ಮೇ 11ರಂದು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರ್ಕಾಟ್ ಬಳಿಯ ತೋಟದ ಮನೆಯೊಂದರಲ್ಲಿ ತಮ್ಮ ಇಬ್ಬರು ಪುತ್ರರಾದ ಗಾಂಧಿ ಹಾಗೂ ಶಾಸ್ತ್ರಿಯನ್ನು ಬಂಧಿಸುವಲ್ಲಿ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ, ಎಸಿಪಿ ರವಿಕುಮಾರ್ ನೇತೃತ್ವದ 10 ಜನರ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆದರೆ, ಇಷ್ಟು ದಿನ ತಲೆಮರೆಸಿಕೊಂಡಿದ್ದ ನಾಗ, ಅಜ್ಞಾತ ಸ್ಥಳಗಳಿಂದ ವೀಡಿಯೋಗಳನ್ನು ಕಳುಹಿಸುತ್ತಿದ್ದ ನಾಗ ಹೀಗೆ ಅದೊಂದು ದಿನ ಏಕಾಏಕಿ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ ಎನ್ನಿಸುತ್ತದೆ. ತನ್ನನ್ನು ಹುಡುಕುತ್ತಿರುವ ಪೊಲೀಸರಿಂದ ತಾನು ತುಂಬಾ ದೂರ ಸೇಫ್ ಆಗಿ ಇರುವುದಾಗಿ ತಿಳಿದಿದ್ದ ನಾಗ ಕೊನೆಗೂ ಈಗ ಪೊಲೀಸರ ಅತಿಥಿಯಾಗಿದ್ದಾನೇನೋ ನಿಜ.
ಆದರೆ, ಅದರ ಹಿಂದೆ ಪೊಲೀಸರ ಶ್ರಮ ಎಂಥದ್ದಾಗಿತ್ತು ? ನಾಗ ಹೇಗೆ ಪತ್ತೆಯಾದ ? ತನ್ನ ಅಡಗುದಾಣದಿಂದಲೇ ನಾಗ ಹೇಗೆ ತನ್ನ ಇರುವಿಕೆಯನ್ನು ತನಗರಿವಿಲ್ಲದಂತೆ ಬಹಿರಂಗಗೊಳಿಸಿದ ಎಂಬುದರ ಕುತೂಹಲಕಾರಿ ಘಟನೆಗಳು ಇಲ್ಲಿವೆ.
ಬಂಧನಕ್ಕೆ ಕಾರಣವಾದ ಆ ಸುಳಿವು
ಸತತ 27 ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಪೊಲೀಸರಿಗೆ ಸವಾಲು ಎಸೆದಿದ್ದ ನಾಗನ ಕೆಲವಾರು ಸಹಚರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಅದೊಂದು ಸುಳಿವು ಹೊರಬಿದ್ದಿದ್ದೇ ನಾಗನ ಬಂಧನಕ್ಕೆ ಮೂಲ ಕಾರಣ.
ಸುಳಿವು ಕೊಟ್ಟ ಆ ಫೋನ್ ಕಾಲ್ ಗಳು!
ಆ ಸುಳಿವು ಏನೆಂದರೆ, ಬೆಂಗಳೂರಿನ ತನ್ನ ಮನೆಯ ಮೇಲೆ ಪೊಲೀಸ್ ರೈಡ್ ಆದಾಗ ಸುಮಾರು 14 ಕೋಟಿ ರು.ಗಳು ಹಾಗೂ ತನ್ನ ಪುತ್ರರೊಂದಿಗೆ ಎಸ್ಕೇಪ್ ಆಗಿದ್ದ ನಾಗ, ತಮಿಳುನಾಡಿನ ಗಡಿ ದಾಟಿ ಹೋಗಿದ್ದ. ಆದರೆ, ಇಲ್ಲಿರುವ ಆತನ ಆಪ್ತರಿಗೆ, ವಕೀಲರಿಗೆ ಆತ ನಿರಂತರ ಸಂಪರ್ಕದಲ್ಲಿರುವುದು ಅನಿವಾರ್ಯವಾಗಿತ್ತು. ಹಾಗಾಗಿ, ಪದೇ ಪದೇ ಸಿಮ್ ಕಾರ್ಡ್ ಗಳನ್ನು ಬದಲಾಯಿಸುತ್ತಾ ಫೋನ್ ಮಾಡಿ ತನಗೆ ಬೇಕಾದವರೊಂದಿಗೆ ಮಾತನಾಡುತ್ತಿದ್ದ. ಆದರೆ, ತನ್ನ ಪರ ವಕೀಲರಾದ ಶ್ರೀರಾಮ್ ರೆಡ್ಡಿ ಹಾಗೂ ತನ್ನ ಪತ್ನಿಯೊಂದಿಗೆ ಮಾತ್ರ ಒಂದೇ ಸಿಮ್ ಕಾರ್ಡ್ ಮೂಲಕ ಕರೆ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿಯೊಂದನ್ನು ಪೊಲೀಸರಿಗೆ ನಾಗನ ಆಪ್ತನೊಬ್ಬ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ.
ತಮಿಳುನಾಡಿಗೆ ಪೊಲೀಸರು
ಈ ಸುಳಿವಿನ ಜಾಡು ಬೆನ್ನು ಹತ್ತಿದ ಪೊಲೀಸರು, ಶ್ರೀರಾಮ್ ರೆಡ್ಡಿ ಹಾಗೂ ನಾಗನ ಪತ್ನಿ ಮೊಬೈಲ್ ಗೆ ಬರುವ ಕರೆಗಳ ಜಾಡು ಜಾಲಾಡತೊಡಗಿದರು. ಆಗ, ಒಂದು ನಿರ್ದಿಷ್ಟ ಫೋನ್ ಕಾಲ್ ಪದೇ ಪದೇ ತಮಿಳುನಾಡಿನಿಂದ ಬರುತ್ತಿರುವುದು ಸ್ಪಷ್ಟವಾಗಿ ಗೊತ್ತಾಯಿತು. ಇದರ ಜಾಡು ಹಿಡಿದು ತಮಿಳುನಾಡಿಗೆ ಪೊಲೀಸರ ಒಂದು ತಂಡ ತೆರಳಿತು.
ಹುಷಾರಾದ ಪೊಲೀಸರು
ಆ ನಿರ್ದಿಷ್ಟ ಫೋನ್ ಕಾಲ್ ನ ಜಾಡು ಹಿಡಿದು ತಮಿಳುನಾಡಿಗೆ ಕಾಲಿಟ್ಟ ಬೆಂಗಳೂರು ಪೊಲೀಸರ ತಂಡ ಬಂದು ನಿಂತಿದ್ದೇ ಅರ್ಕಾಟ್ ಬಳಿಯಲ್ಲಿರುವ ಈ ತೋಟದ ಮನೆಯ ಬಳಿ. ಆದರೆ, ಅವಸರಪಡದ ಪೊಲೀಸರು ದೂರದಲ್ಲಿದ್ದುಕೊಂಡೇ ಆ ತೋಟದ ಮನೆಯೊಳಗಿನ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾರಂಭಿಸಿದರು.
ನಾಗನಿಗೆ ಗೊತ್ತಾಯ್ತು ಪೊಲೀಸರ ಜಾಡು
ತೋಟದ ಮನೆಯಲ್ಲಿರುವುದು ನಾಗ ಎಂಬುದು ಖಚಿತಪಡಿಸಿಕೊಂಡ ಪೊಲೀಸರು ಇನ್ನೇನು ಆತನನ್ನು ಬಂಧಿಸಲು ಮುಂದಾಗಬೇಕು ಎನ್ನುವಷ್ಟರಲ್ಲಿ ನಾಗನಿಗೆ ಈ ಸೂಕ್ಷ್ಮತೆ ತಿಳಿದುಬಿಟ್ಟಿತು. ತಕ್ಷಣವೇ ಆತ ತನ್ನ ಪುತ್ರರೊಂದಿಗೆ ಅಲ್ಲಿಂದ ಎಸ್ಕೇಪ್ ಆದ.
ಚೇಸ್ ಮಾಡಿದ ಪೊಲೀಸರು
ಎಸ್ಕೇಪ್ ಆದ ನಾಗನ ಕಾರನ್ನು ಸುಮಾರು 5 ಕಿ.ಮೀ.ವರೆಗೆ ಚೇಸ್ ಮಾಡಿದ ಪೊಲೀಸರ ತಂಡ. ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಇಲ್ಲೂ ಒಂದು ಕುತೂಹಲಕಾರಿ ವಿಚಾರವಿದೆ. ತನ್ನನ್ನು ಪೊಲೀಸರು ಚೇಸ್ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡ ನಾಗ, ತಮಿಳುನಾಡು ಪೊಲೀಸ್ ಕಂಟ್ರೋಲ್ ರೂಂಗೆ ಫೋನಾಯಿಸಿ, ತನ್ನನ್ನು ಯಾರೋ ಕಿಡ್ನಾಪ್ ಮಾಡಲು ಚೇಸ್ ಮಾಡುತ್ತಿರುವುದಾಗಿ ತಿಳಿಸಿ ಮತ್ತೊಂದು ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಫಲ ನೀಡಿದ ನಾಗ ಫೋನ್ ಕಾಲ್
ನಾಗನ ಈ ಡ್ರಾಮಾ ಫಲ ನೀಡಿಲ್ಲ. ತಮಿಳುನಾಡು ಪೊಲೀಸ್ ಸ್ಥಳ ತಲುಪುವುದರೊಳಗಾಗಿ ಬೆಂಗಳೂರು ಪೊಲೀಸರು ನಾಗನನ್ನು ಬಂಧಿಸಿದ್ದಾರೆ. ಇಲ್ಲವಾದರೆ, ತಪ್ಪು ಮಾಹಿತಿಯಿಂದಾಗಿ ತಮಿಳುನಾಡು ಪೊಲೀಸರಿಂದ ಬೆಂಗಳೂರು ಪೊಲೀಸರಿಗೆ ಬಹುಶಃ ಅಡ್ಡಿಯಾಗುತ್ತಿತ್ತೋ ಏನೋ? ಆದರೆ, ಹಾಗಾಗುವುದಕ್ಕೂ ಮುನ್ನವೇ ನಾಗ ಸಿಕ್ಕಿಬಿದ್ದಿದ್ದಾನೆ.