ಶಿಡ್ಲಘಟ್ಟದ ಸ್ವಗ್ರಾಮದಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಜನ್ಮ ದಿನಾಚರಣೆ
ಶಿಡ್ಲಘಟ್ಟ, ಆಗಸ್ಟ್ 21: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿ ಇನ್ಫೋಸಿಸ್ ನ ಎನ್.ಆರ್.ನಾರಾಯಣಮೂರ್ತಿ ಅವರ ಸ್ವಗ್ರಾಮ. ಇಲ್ಲಿನ ಕಪಿಲಮ್ಮ ಕಾಲೇಜಿನಲ್ಲಿ ಶನಿವಾರ ನಾರಾಯಣಮೂರ್ತಿ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಎನ್.ಆರ್.ನಾರಾಯಣ ಮೂರ್ತಿ ಅವರ ಲೇಖನಗಳು, ಅವರ ಬಗ್ಗೆ ಚಿತ್ರ್ ಲೇಖನ, ಬಾಲ್ಯ-ಕುಟುಂಬದ ಚಿತ್ರಗಳನ್ನೆಲ್ಲ ಪ್ರದರ್ಶಿಸಲಾಗಿತ್ತು. ಇನ್ಫೋಸಿಸ್ ಯಶೋಗಾಥೆ, ಮೂರ್ತಿ ಅವರ ಹಸ್ತಾಕ್ಷರ, ಶಿಡ್ಲಘಟ್ಟಕ್ಕೆ ಅವರು ಭೇಟಿ ನೀಡಿದ ಸಂದರ್ಭದ ಚಿತ್ರಗಳು, ಅಬ್ದುಲ್ ಕಲಾಂ ಮತ್ತು ಡಾ.ಕೃಷ್ಣಮೂರ್ತಿ ವೆಂಕಟರಾಮ್ ಅವರ ಕಾಲಿಗೆ ನಾರಾಯಣಮೂರ್ತಿ ನಮಸ್ಕರಿಸುವ ಚಿತ್ರಗಳನ್ನು ಮೇಲೂರಿನವರಾದ ಎಂ.ಅರ್.ಪ್ರಭಾಕರ್ ಒಪ್ಪ-ಓರಣವಾಗಿ ಜೋಡಿಸಿಟ್ಟಿದ್ದರು.[ಅಹಂ ಬಿಟ್ಟರೆ ಭಾರತೀಯರು ಉದ್ಧಾರ: ನಾರಾಯಣ ಮೂರ್ತಿ]
ಈ ಪ್ರದರ್ಶನ ಉದ್ಘಾಟಿಸಿದ ಎನ್.ಆರ್.ಕೃಷ್ಣಮೂರ್ತಿ ಅವರು ಮಾತನಾಡಿ, ನನ್ನ ಸೋದರತ್ತೆ ಪದ್ಮಾವತಮ್ಮ ಅವರ ಮಗ ಎನ್.ಆರ್.ನಾರಾಯಣಮೂರ್ತಿ ಬಲು ದೊಡ್ಡ ಸಾಧನೆ ಮಾಡಿದರೂ ಸರಳ ಜೀವಿ. ನಮ್ಮ ಶಿಕ್ಷಣ ಸಂಸ್ಥೆಗೆ ಸಾಕಷ್ಟು ನೆರವನ್ನು ನೀಡಿದ್ದಾರೆ. ಅವರ ಹುಟ್ಟಿದ ದಿನ ಇದೇ ಮಣ್ಣಿನ ಮೂಲದ ಅವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸಿಕೊಡಲು ಅನುಕೂಲವಾಗುವ ರೀತಿಯಲ್ಲಿ ಪ್ರಭಾಕರ್ ಪ್ರದರ್ಶನವನ್ನು ಏರ್ಪಾಡು ಮಾಡಿದ್ದಾರೆ. ಇದರಿಂದ ನಮ್ಮ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು ಎಂಬುದು ನಮ್ಮ ಉದ್ದೇಶ' ಎಂದರು.
ನಮ್ಮ ತಾಲ್ಲೂಕಿನ ವಿವಿಧ ಶಾಲಾ- ಕಾಲೇಜುಗಳಲ್ಲಿ ನಾರಾಯಣಮೂರ್ತಿ ಅವರ ಜೀವನ ಸಾಧನೆಯ ಚಿತ್ರಪಟಗಳ ಪ್ರದರ್ಶನ ಏರ್ಪಡಿಸಬೇಕು. ಶ್ರೇಷ್ಠ ಸಾಧಕರ ಜೀವನದಿಂದ ಮುಂದಿನ ಪೀಳಿಗೆ ಪ್ರೇರಣೆ ಪಡೆಯಲಿ ಎಂದು ಹೇಳಿದರು.[ಇನ್ಫಿ ನಾರಾಯಣಮೂರ್ತಿ ಸಿಎಂ ಭೇಟಿಯಾಗಿದ್ದು ಯಾಕೆ?]
ಅಂಚೆ ಚೀಟಿ ಸಂಗ್ರಹಕಾರರೂ ಆಗಿರುವ ಮೇಲೂರು ಎಂ.ಆರ್.ಪ್ರಭಾಕರ್ ಮಾತನಾಡಿ, ನಮ್ಮ ತಾಲ್ಲೂಕಿನ ಹೆಮ್ಮೆ ಎನ್.ಆರ್ ನಾರಾಯಣಮೂರ್ತಿ ಅಭಿಮಾನಿಯಾಗಿ ಅವರ ಕುರಿತಂತೆ ವಿವಿಧ ಪತ್ರಿಕೆ, ಚಿತ್ರಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿದ್ದೆ. ಅವರ ಸ್ವಗ್ರಾಮದ ಕಾಲೇಜಿನಲ್ಲಿ ಇವುಗಳನ್ನೆಲ್ಲ ಪ್ರದರ್ಶಿಸಲು ಸಹಕಾರ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ತಿಳಿಸಲು ಅನುಕೂಲವಾಯಿತು ಎಂದರು.[ಮೋದಿ ವಿರುದ್ಧದ ಭಾಷಣ ನಂದಲ್ಲ: ನಾರಾಯಣಮೂರ್ತಿ]
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸದಸ್ಯರಾದ ಮುನಿರಾಜು, ರಮೇಶ್, ಜಗದೀಶ್ ಬಾಬು, ನಾಗರಾಜ್, ದೇವರಾಜ್, ಮಂಜುನಾಥ್, ಪವನ್ಕುಮಾರ್, ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್, ಉಪನ್ಯಾಸಕರಾದ ಉಪೇಂದ್ರಕುಮಾರ್, ಮುನಿಯಪ್ಪ, ನಾಗೇಶ್, ಪ್ರಜ್ವಲ್, ಚಂದ್ರಶೇಖರ್ ಹಾಜರಿದ್ದರು.