ಹುತಾತ್ಮ ಯೋಧರಿಗೆ ಇನ್ಫೋಸಿಸ್ನಿಂದ 10 ಲಕ್ಷ ರೂ. ಸಹಾಯ
ಬೆಂಗಳೂರು, ಫೆಬ್ರವರಿ 17 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ 40 ಯೋಧರ ಕುಟುಂಬಕ್ಕೆ 10 ಲಕ್ಷ ರೂ. ನೆರವು ನೀಡುವುದಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಮೂರ್ತಿ ಅವರು, 'ಭಯೋತ್ಪಾದಕರ ದಾಳಿಗೆ ತುತ್ತಾದ ವೀರ ಯೋಧರ ಕುಟುಂಬಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ. ಯೋಧರ ಸಾವಿನ ಸುದ್ದಿ ಕೇಳಿದ ತಕ್ಷಣ ನನ್ನ ಸಂಬಂಧಿಕರೇ ಸಾವಿಗೀಡಾದಂತೆ ದುಃಖ ಆಯಿತು' ಎಂದರು.
'ಬಾಳಿ ಬದುಕಬೇಕಾದ ಯುವಕರು ಸಾವನ್ನಪ್ಪಿದ್ದಾರೆ. ಆದ್ದರಿಂದ ಅವರ ಕುಟುಂಬಕ್ಕೆ ನೆರವು ನೀಡುವ ತೀರ್ಮಾನ ಮಾಡಿದ್ದೇವೆ. ಆದರೆ, ಇದು ಅವರ ಜೀವಕ್ಕೆ ಕೊಟ್ಟ ಬೆಲೆ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಕುಟುಂಬವನ್ನು ಯಾರೂ ಕೈ ಹಿಡಿಯಲಿಲ್ಲ ಎಂಬ ಭಾವನೆ ಬರದಂತೆ ಮಾಡಬೇಕು. ಆದ್ದರಿಂದ ಸಹಾಯ ಮಾಡುತ್ತಿದ್ದೇವೆ' ಎಂದು ಹೇಳಿದರು.

'ನಾವು ಈಗಾಗಲೇ ಬಿಎಸ್ಎಫ್ ಸೈನಿಕರೊಂದಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ಇಂತಹ ದಾಳಿಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳು ಘಟನೆಯಿಂದ ಗಾಯಗೊಂಡು ಜೀವನ ನಡೆಸಲು ಕಷ್ಟ ಪಡುವ ಬಗ್ಗೆಯೂ ಗಮನಹರಿಸಿದ್ದೇವೆ. ನಮ್ಮ ಪ್ರಯತ್ನ ಇಲ್ಲಿಗೆ ನಿಲ್ಲುವುದಿಲ್ಲ' ಎಂದರು.
'ಮಂಡ್ಯದ ಗುರು ಸುದ್ದಿ ಕೇಳಿ ನನಗೆ ಆಘಾತವಾಯಿತು. ಈ ವೇಳೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದೆ. ಯೋಧನ ಕುಟುಂಬದವರ ಮನಸ್ಥಿತಿ ಹೊಂದಾಣಿಕೆ ಆಗಲು ಹೆಚ್ಚಿನ ಸಮಯ ಬೇಕಿದೆ. ಮಾರ್ಚ್ 15ರ ಬಳಿಕ ನಾನೇ ಸ್ವತಃ ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ' ಎಂದು ಸುಧಾಮೂರ್ತಿ ತಿಳಿಸಿದರು.
'ದೇಶದ ಯೋಧರ ಸಾವಿನ ಬಗ್ಗೆ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಇಡುವ ಅಗತ್ಯವಿದೆ. ಇಂತಹ ಘಟನೆ ಮತ್ತೆ ನಡೆಯದಂತೆ ಕ್ರಮ ಕೈಗೊಂಡು ವಿಳಂಬ ಆಗದಂತೆ ನೋಡಿಕೊಳ್ಳಬೇಕು' ಎಂದರು.












Click it and Unblock the Notifications