ಲಂಡನ್ನಲ್ಲೂ ಕರ್ನಾಟಕ ಬಾವುಟ ಹಾರಿಸಿದ ವಿದ್ಯಾರ್ಥಿ: ಪದವಿ ಪ್ರಧಾನ ಸಮಾರಂಭದಲ್ಲಿ ನಡೆದಿದ್ದೇನು? ವೈರಲ್ ವಿಡಿಯೊ ನೋಡಿ
ಲಂಡನ್, ಜನವರಿ 23: ಲಂಡನ್ನ ಸಿಟಿ ಯೂನಿವರ್ಸಿಟಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಪದವಿ ಘಟಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕ ಭಾವುಟವನ್ನು ಹಾರಿಸಿ ಅಭಿಮಾನ ಮೆರೆದಿದ್ದಾನೆ. ವೇದಿಕೆ ಮೇಲೆ ರಾಜ್ಯದ ಭಾವುಟ ಪ್ರದರ್ಶಿಸಿದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಶ್ವವಿದ್ಯಾನಿಲಯದ ಎಂಎಸ್ ಮ್ಯಾನೇಜ್ಮೆಂಟ್ ಪದವೀಧರರಾದ ಆದಿಶ್ ಆರ್ ವಾಲಿ ಅವರು ಪದವಿ ಪಡೆಯುವ ವೀಡಿಯೊವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 'ನಾನು ಸಿಟಿ ಯೂನಿವರ್ಸಿಟಿ ಆಫ್ ಲಂಡನ್ - ಬೇಯೆಸ್ ಬ್ಯುಸಿನೆಸ್ ಸ್ಕೂಲ್ (ಕ್ಯಾಸ್) ನಿಂದ ಮ್ಯಾನೇಜ್ಮೆಂಟ್ನಲ್ಲಿ ಎಂಎಸ್ ಪದವಿ ಪಡೆದಿದ್ದೇನೆ. ಬ್ರಿಟನ್ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದೆ. ಇದು ನನ್ನ ಜೀವನದ ಹೆಮ್ಮೆಯ ಕ್ಷಣವಾಗಿದೆ' ಎಂದು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದ ಈ ವಿಡಿಯೋಗೆ ಟ್ವಿಟರ್ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಜನರು ಆದೀಶ್ಗೆ ಪದವಿಯ ನಂತರ ತಮ್ಮ ಶ್ಲಾಘನೆಗಳನ್ನು ಕಳುಹಿಸಿದ್ದಾರೆ. ತವರು ರಾಜ್ಯದ ಬಗೆಗಿನ ಅವರ ಪ್ರೀತಿಗಾಗಿ ಅವರನ್ನು ಶ್ಲಾಘಿಸಿದ್ದಾರೆ.
I graduated with MS in Management from City University of London - Bayes Business School (Cass). A moment of pride as I unfurled our Karnataka state flag during the ceremony in London, UK.
— Adhish R. Wali (@AdhishWali) January 21, 2023
- ARW #ARW😎 #karnataka #bidar #kannada #kannadiga #london #uk #England @bidarupdates pic.twitter.com/Hofb01W0WX
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ, 'ಯುಕೆಯಲ್ಲಿ ನೆಲೆಸಿರುವ ಕನ್ನಡಿಗ ಆದಿಶ್ ವಾಲಿ ಅವರು ಪದವಿ ಸ್ವೀಕರಿಸುವ ಮುನ್ನ ಕನ್ನಡ ಧ್ವಜ ಪ್ರದರ್ಶಿಸಿದ ವಿಡಿಯೋ ನೋಡಿ ಮೈ ರೋಮಾಂಚನವಾಯಿತು. ಹಾಗೆಯೇ ಕುವೆಂಪು ಅವರ ಪದ್ಯದ ಸಾಲುಗಳು ನೆನಪಾದವು. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು' ಎಂದು ಟ್ವೀಟ್ ಮಾಡಿದ್ದಾರೆ.

'ಎಲ್ಲಾದರು ಇರು ಎಂತಾದರು ಇರು. ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಬೀದರ್ನ ಆದೀಶ ರಜನೀಶ ವಾಲಿ ಅವರು ಲಂಡನ್ನಲ್ಲಿ ವ್ಯಾಸಂಗ ಮಾಡಿ ಸ್ನಾತಕೋತ್ತರ ಪದವಿ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕದ ಧ್ವಜವನ್ನು ಪ್ರದರ್ಶಿಸಿ ಎಲ್ಲರ ಕರತಾಡನಕ್ಕೆ ಪಾತ್ರರಾಗಿದ್ದಲ್ಲದೆ, ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ' ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಭಾವುಟ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗಾಗಿ ಸುದ್ದಿ ಮಾಡಿತ್ತು. ಡಿಸೆಂಬರ್ನಲ್ಲಿ ಕಾಲೇಜು ಉತ್ಸವದಲ್ಲಿ ಕರ್ನಾಟಕ ಧ್ವಜಾರೋಹಣ ಮಾಡಿದ ಆರೋಪದ ಮೇಲೆ ಬೆಳಗಾವಿಯಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿತ್ತು. ವಿದ್ಯಾರ್ಥಿಗಳ ಗುಂಪು ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು. ಕೆಲವೇ ಸೆಕೆಂಡುಗಳಲ್ಲಿ, ವಿದ್ಯಾರ್ಥಿಯೊಬ್ಬ ಕರ್ನಾಟಕ ಧ್ವಜವನ್ನು ತಂದು ಜನಸಂದಣಿಯಲ್ಲಿ ಹಾರಿಸುತ್ತಿದ್ದ. ಧ್ವಜಾರೋಹಣ ಮಾಡಿದ ವಿದ್ಯಾರ್ಥಿಗೆ ಕೆಲ ವಿದ್ಯಾರ್ಥಿಗಳು ಥಳಿಸಿದ್ದರು. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಹಲವು ಕನ್ನಡ ಪರ ಸಂಘಟನೆಗಳು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದವು.












Click it and Unblock the Notifications