Vande Bharat Express: ಕರ್ನಾಟಕದ 2 ಮಾರ್ಗದಲ್ಲಿ ವಂದೇ ಭಾರತ್, ಪ್ರಸ್ತಾವನೆ ತಿರಸ್ಕಾರ
ಬೆಂಗಳೂರು, ನವೆಂಬರ್ 09: ವಂದೇ ಭಾರತ್ ಎಕ್ಸ್ಪ್ರೆಸ್ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ಮ ಐಷಾರಾಮಿ ರೈಲು ಸೇವೆ. ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವಲ್ಲಿ ಈ ರೈಲು ಮಹತ್ವದ ಪಾತ್ರ ವಹಿಸುತ್ತಿದೆ. ಹೊಸ ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆಯಾಗುತ್ತಲೇ ಇದೆ. ಕರ್ನಾಟಕದಲ್ಲಿಯೂ ಹಲವು ಹೊಸ ಮಾರ್ಗದಲ್ಲಿ ಈ ರೈಲಿಗೆ ಬೇಡಿಕೆ ಇದೆ.
ಸದ್ಯದ ಮಾಹಿತಿ ಪ್ರಕಾರ ರೈಲ್ವೆ ಖಾತೆ ಕರ್ನಾಟಕದ ಎರಡು ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸುವ ಪ್ರಸ್ತಾವನೆ ತಿರಸ್ಕಾರ ಮಾಡಿದೆ. ಈ ಮಾರ್ಗ ಕಾರ್ಯಸಾಧುವಲ್ಲ ಎಂದು ಹೇಳಿದ್ದು, ಬೇಡಿಕೆಯನ್ನು ಪರಿಗಣಿಸಿಲ್ಲ.

ಈ ಎರಡು ಮಾರ್ಗದಲ್ಲಿ ಒಂದು ರೈಲು ಬೆಂಗಳೂರಿಗೆ ಮತ್ತೊಂದು ರೈಲು ಮುಂಬೈಗೆ ಸಂಪರ್ಕ ಕಲ್ಪಿಸಬೇಕಿತ್ತು. ಇದರಿಂದಾಗಿ ಹೊಸ ವಂದೇ ಭಾರತ್ ರೈಲು ಸಂಚಾರದ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಏಕೆ ವಂದೇ ಭಾರತ್ ರೈಲು ಬೇಡ ಎಂದು ಇಲಾಖೆ ಕಾರಣವನ್ನೂ ಸಹ ನೀಡಿದೆ.
ಎಂಎಲ್ಸಿ ನೀಡಿದ ಮಾಹಿತಿ: ರೈಲ್ವೆ ಇಲಾಖೆ ಪ್ರಸ್ತಾವನೆ ತಿರಸ್ಕಾರ ಮಾಡಿರುವ ಕುರಿತು ಎಂಎಲ್ಸಿ ಸುನೀಲ ಗೌಡ ಮಾಹಿತಿ ನೀಡಿದ್ದಾರೆ. ವಿಜಯಪುರ-ಬಾಗಲಕೋಟೆ-ಬೆಂಗಳೂರು ಮತ್ತು ಮುಂಬೈ-ವಿಜಯಪುರ ನಡುವೆ ಹೊಸ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲು ಇಲಾಖೆಗೆ ಮನವಿ ಸಲ್ಲಿಕೆ ಮಾಡಲಾಗಿತ್ತು.
ಮಾರ್ಚ್ 9ರಂದು ಎಂಎಲ್ಸಿ ಸುನೀಲ ಗೌಡ ವಿಜಯಪುರ-ಬಾಗಲಕೋಟೆ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿದ್ದರು. ಅಲ್ಲದೇ ಮುಂಬೈ-ಸೊಲ್ಲಾಪುರ ರೈಲನ್ನು ವಿಜಯಪುರ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಆದರೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಆರಂಭಿಸುವುದು ಕಾರ್ಯ ಸಾಧುವಲ್ಲ ಎಂದು ರೈಲ್ವೆ ಇಲಾಖೆ ಅಭಿಪ್ರಾಯವನ್ನು ಪಡೆದು ಕೇಂದ್ರ ಸರ್ಕಾರ ಎಂಎಲ್ಸಿ ಸುನೀಲ ಗೌಡ ಪತ್ರಕ್ಕೆ ಉತ್ತರವನ್ನು ನೀಡಿದೆ.
"ಕೇಂದ್ರ ಸರ್ಕಾರ ವಿಜಯಪುರ ಭಾಗದ ಜನರ ಮೇಲೆ ತಾರತಮ್ಯದ ಧೋರಣೆ ಹೊಂದಿದೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಬಗ್ಗೆ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ್ ನಿರ್ಲಕ್ಷ್ಯ ಮುಂದುವರೆದಿದೆ" ಎಂದು ಎಂಎಲ್ಸಿ ಸುನೀಲ ಗೌಡ ದೂರಿದ್ದಾರೆ.
"ರೈಲ್ವೆ ಇಲಾಖೆ ತೀರ್ಮಾನದಿಂದ ವಿಜಯಪುರ-ಬಾಗಲಕೋಟೆ ಎರಡೂ ಜಿಲ್ಲೆಗಳ ಜನರಿಗೆ ನಿರಾಸೆಯಾಗಿದೆ. ಕರ್ನಾಟಕದವರೇ ಆದ ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರೂ ಸಹ ರಾಜ್ಯ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ" ಎಂದು ಎಂಎಲ್ಸಿ ಸುನೀಲ ಗೌಡ ಹೇಳಿದ್ದಾರೆ.
ಸೆಪ್ಟೆಂಬರ್ನಲ್ಲಿ ಮಾತನಾಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, "ದೇಶಕ್ಕೆ ಮತ್ತೆ ಹತ್ತು ವಂದೇ ಭಾರತ್ ರೈಲುಗಳು ಬರಲಿವೆ. ಅದರಲ್ಲಿ ರಾಜ್ಯಕ್ಕೆ ಬರುವ ಒಂದು ವಂದೇ ಭಾರತ್ ರೈಲು ಉಸ್ತುವಾರಿ ಸಚಿವರ ತವರು ಜಿಲ್ಲೆ ವಿಜಯಪುರಕ್ಕೆ ಬಂದರೂ ಅಚ್ಚರಿ ಪಡಬೇಕಿಲ್ಲ" ಎಂದು ಹೇಳಿದ್ದರು. ಆದರೆ ಈಗ ಇಲಾಖೆ ವಿಜಯಪುರಕ್ಕೆ ವಂದೇ ಭಾರತ್ ರೈಲು ಸಂಪರ್ಕಿಸುವ ಪ್ರಸ್ತಾವನೆ ತಿರಸ್ಕಾರ ಮಾಡಿದೆ.
ಬೆಂಗಳೂರು ನಗರಿಂದ ಧಾರವಾಡ, ಹುಬ್ಬಳ್ಳಿಗೆ ವಂದೇ ಭಾರತ್ ರೈಲು ಸಂಪರ್ಕವಿದೆ. ಹುಬ್ಬಳ್ಳಿಯಿಂದ ಬೆಳಗಾವಿ ಮೂಲಕ ಪುಣೆ ತನಕ ವಂದೇ ಭಾರತ್ ರೈಲು ಸಂಚಾರವಿದೆ. ಆದರೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ವಂದೇ ಭಾರತ್ ರೈಲು ಸಂಪರ್ಕವಿಲ್ಲ. ಆದ್ದರಿಂದ ವಿಜಯಪುರ-ಬೆಂಗಳೂರು ರೈಲಿಗೆ ಬೇಡಿಕೆ ಇಡಲಾಗಿತ್ತು.












Click it and Unblock the Notifications