ಅಂಚೆ ಕಚೇರಿಯಲ್ಲಿ 'ಆಪ್ ಕೆ ಸಾಥ್' ಅಡಿ ಖಾತೆ ತೆರೆಯಲು ಅವಕಾಶ
ಬೆಂಗಳೂರು, ಫೆಬ್ರವರಿ 22: ಭಾರತೀಯ ಅಂಚೆ ಇಲಾಖೆ ದೇಶದ ಎಲ್ಲಾ ನಾಗರಿಕರ ಹಣಕಾಸಿನ ಉನ್ನತಿಗಾಗಿ 'ಆಪ್ಕೆ ಸಾಥ್' ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಗ್ರಾಮೀಣ, ಪಟ್ಟಣ ಹಾಗೂ ನಗರದ ಜನರು ಅಂಚೆ ಕಚೇರಿಗಳಲ್ಲಿ ಎಲ್ಲಾ ವಿವಿಧ ಉಳಿತಾಯ ಖಾತೆಗಳನ್ನು ಇದರ ಅನ್ವಯ ತೆರೆಯಬಹುದಾಗಿದೆ.
ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಅಂಚೆ ಇಲಾಖೆಯು ಜನರ ಹಿತಾಸಕ್ತಿಗಾಗಿ ಶ್ರಮಿಸಿದೆ. ಈಗಲೂ ಸಹ ಜನರ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಜನರಲ್ಲಿ ಉಳಿತಾಯ ಮನೋಭಾವ ಬೆಳೆಸುವ ಹಾಗೂ ಹಣಕಾಸಿನ ಸ್ಥಿತಿ ಉತ್ತಮಪಡಿಸಲು ಇದು ಸಹಕಾರಿಯಾಗಿದೆ.
ಜನರು ಅಂಚೆ ಕಚೇರಿಗಳಲ್ಲಿ ಖಾತೆಗಳನ್ನು ತೆರೆಯುವುದರ ಮೂಲಕ ನಿಶ್ಚಿತ ಬಡ್ಡಿ ಪಡೆಯಬಹುದು. ಚೆಕ್ಬುಕ್ ಹಾಗೂ ಎಟಿಎಂ ಕಾರ್ಡ್ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಹಿರಿಯ ನಾಗರಿಕರು, ಮಹಿಳೆಯರು ಯಾವುದೇ ಬ್ಯಾಂಕಿನಲ್ಲಿ ತಮ್ಮ ಆಧಾರ್ ನಂಬರ್ ನೋಂದಾಯಿತ ಖಾತೆಯಿಂದ ಅಂಚೆ ಸಿಬ್ಬಂದಿ ಮೂಲಕ ಮನೆ ಬಾಗಿನಲ್ಲೇ ಎಇಪಿಎಸ್ ಮುಖಾಂತರ ಹಣವನ್ನು ಸಹ ಪಡೆಯಬಹುದಾಗಿದೆ.
ಸುಕನ್ಯಾ ಸಮೃದ್ಧಿ; ಹೆಣ್ಣು ಮಕ್ಕಳ ಅಭಿವೃದ್ಧಿ ಹಾಗೂ ಉನ್ನತ ಶಿಕ್ಷಣದ ಕನಸನ್ನು ಈಡೇರಿಸಲು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಹೆಣ್ಣು ಮಕ್ಕಳು ಈ ಯೋಜನೆಯ ಲಾಭ ಪಡೆದು ಖಾತೆ ತೆರಯಬಹುದು.
250 ರೂ. ನಿಂದ ಖಾತೆ ಆರಂಭಿಸಿ ವಾರ್ಷಿಕ ಕನಿಷ್ಠ 1000 ರೂ. ದಿಂದ ಗರಿಷ್ಠ 1,50,000 ರೂ.ಗಳನ್ನು ಈ ಖಾತೆಗೆ ಜಮೆ ಮಾಡಬಹುದು. ಹಿರಿಯ ನಾಗರಿಕರು ಉಳಿತಾಯ ಖಾತೆ ಅಡಿ 15 ಲಕ್ಷ ರೂ.ಗಳ ವರೆಗೆ ಹಣ ಜಮೆ ಮಾಡಬಹುದು. ಪ್ರತಿ ಮೂರು ತಿಂಗಳಿಗೊಂದು ಬಾರಿ ನಿಗದಿತ ಬಡ್ಡಿ ಪಡೆಯಬಹುದಾಗಿದೆ.
ಗಂಡು ಮಕ್ಕಳ ಭವಿಷ್ಯಕ್ಕಾಗಿ ಪಿಪಿಎಫ್ ಅಕೌಂಟ್ ತೆರೆಯಬಹುದು. 15 ವರ್ಷಗಳ ಕಾಲ ಹೂಡಿಕೆ ಮಾಡಬಹುದಾಗಿದೆ. ಎಂ.ಐ.ಎಸ್. ಅಕೌಂಟ್ ಅಡಿ ನಿಶ್ಚಿತ ಹಣದ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಗದಿತ ಬಡ್ಡಿ ಪಡೆಯಬಹುದಾಗಿದೆ. ವಾರ್ಷಿಕ 12 ರೂ. ಜಮೆ ಮಾಡಿ ಒಂದು ವರ್ಷಗಳ ಅಪಘಾತ ವಿಮೆ ಪಡೆಯಬಹುದಾಗಿದೆ.
ಅಂಚೆ ಇಲಾಖೆಯು ಜನರ ಬೇಡಿಕೆಗಳನ್ನು ಪೂರೈಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಹೆಚ್ಚಿನ ಮಾಹಿತಿ ಪಡೆಯಲು ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications