ಐಟಿ ಅಧಿಕಾರಿಗಳಿಂದ ಕೆಂಪಯ್ಯ ವಿಚಾರಣೆ
ಬೆಂಗಳೂರು, ಮೇ 05 : ಗೃಹ ಸಚಿವರ ಸಲಹೆಗಾರ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿದೆ.
ಬುಧವಾರ ವಿಚಾರಣೆಗೆ ಹಾಜರಾಗುವಂತೆ ಕೆಂಪಯ್ಯ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಬುಧವಾರ ಸಂಜೆ ಅವರು ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಮೂರು ತಾಸುಗಳ ಕಾಲ ಅಧಿಕಾರಿಗಳು ಕೆಂಪಯ್ಯ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. [ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯ ನೇಮಕ]

ವಿಚಾರಣೆ ಏಕೆ? : 2016ರ ಮಾರ್ಚ್ 15ರಂದು ಬೆಂಗಳೂರಿನಲ್ಲಿ ಐಟಿ ದಾಳಿ ನಡೆದಿತ್ತು. ವಿಧಾನಪರಿಷತ್ ಸದಸ್ಯರಾದ ಸಿ.ಆರ್.ಮನೋಹರ್ (ಜೆಡಿಎಸ್), ಕೆ.ಗೋವಿಂದರಾಜು (ಕಾಂಗ್ರೆಸ್), ಡಿ.ಯು ಮಲ್ಲಿಕಾರ್ಜುನ (ಪಕ್ಷೇತರ) ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. [MLC ಗಳ ಮನೆ ಮೇಲೆ ಐಟಿ ದಾಳಿ]
ಕೆ.ಗೋವಿಂದರಾಜು ಅವರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳೂ ಹೌದು. ಅವರ ಮನೆಯಿಂದ ಜಪ್ತಿ ಮಾಡಲಾದ ಡೈರಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಸಲಹೆಗಾರ ಕೆಂಪಯ್ಯ ಅವರ ಹೆಸರಿತ್ತು. ಈ ಬಗ್ಗೆ ವಿವರಣೆ ಪಡೆಯಲು ಅಧಿಕಾರಿಗಳು ಕೆಂಪಯ್ಯ ವಿಚಾರಣೆ ನಡೆಸಿದ್ದಾರೆ. [ಕೆಂಪಯ್ಯ ನೇಮಕ : ಗೃಹ ಸಚಿವ ಜಾರ್ಜ್ ಸ್ಪಷ್ಟನೆಗಳು]
2014ರ ಆಗಸ್ಟ್ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಗೃಹ ಸಚಿವರ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಆಗ ಕೆ.ಜೆ.ಜಾರ್ಜ್ ಗೃಹ ಸಚಿವರಾಗಿದ್ದರು. ಈಗ ಡಾ.ಜಿ.ಪರಮೇಶ್ವರ ಅವರು ಗೃಹ ಸಚಿವರಾಗಿದ್ದು, ಕೆಂಪಯ್ಯ ಅವರು ಸಲಹೆಗಾರರಾಗಿ ಮುಂದುವರೆದಿದ್ದಾರೆ.
ಮಾಧ್ಯಮಗಳ ವಿರುದ್ಧ ಕೆಂಪಯ್ಯ ಗರಂ : ಇನ್ಫೆಂಟ್ರಿ ರಸ್ತೆಯಲ್ಲಿನ ಆದಾಯ ತೆರಿಗೆ ಇಲಾಖೆ ಕಚೇರಿಯಿಂದ ವಿಚಾರಣೆ ಮುಗಿಸಿ ಹೊರಬಂದ ಕೆಂಪಯ್ಯ ಅವರು ಮಾಧ್ಯಮಗಳ ವಿರುದ್ಧ ಗರಂ ಆದರು. ವಿಚಾರಣೆಗೆ ಏಕೆ ಬಂದಿದ್ದೇಕೆ? ಎಂದು ಪ್ರಶ್ನಿಸಿದ್ದಕ್ಕೆ 10 ರಿಂದ 15 ನಿಮಿಷ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
'ಸತ್ಯವನ್ನು ಸುಳ್ಳು ಮಾಡುವ ಜನ ನೀವು. ಸುಳ್ಳುಗಾರರು, ಬ್ಲಾಕ್ ಮೇಲ್ ಮಾಡುವವರು. ನಿಮ್ಮನ್ನು ನೋಡಿಕೊಳ್ಳಲು ದೇವರು ಇದ್ದಾನೆ. ಮೀಡಿಯಾ ಈಸ್ ವೆರಿ ಬ್ಯಾಡ್. ಬೆಳಗ್ಗೆಯಿಂದ ಸಂಜೆ ತನಕ ಸುಳ್ಳು ತೋರಿಸುತ್ತೀರಿ. ನೆಮ್ಮದಿಯಾಗಿ ಬದುಕುವುದಕ್ಕೆ ಬಿಡುವುದಿಲ್ಲ' ಎಂದು ಉದ್ದದ ಹೇಳಿಕೆ ನೀಡಿ ಕಾರು ಹತ್ತಿದರು.












Click it and Unblock the Notifications