ದೇವದಾಸಿಯರ ಮಕ್ಕಳಿಗೆ ಆಶಾಕಿರಣವಾದ ಬಜೆಟ್
ಬೆಂಗಳೂರು, ಮಾರ್ಚ್ 04 : ರಾಜ್ಯ ಸರ್ಕಾರದ ಬಜೆಟ್ನಲ್ಲಿ ದೇವದಾಸಿಯರ ಹೆಣ್ಣು ಮಕ್ಕಳ ಮದುವೆಗಾಗಿ 5ಲಕ್ಷ ರೂ. ಹಾಗೂ ಗಂಡು ಮಕ್ಕಳಿಗೆ 3 ಲಕ್ಷ ರೂ.ಗಳ ವಿವಾಹ ಪ್ರೋತ್ಸಾಹ ಧನ ಮಂಜೂರು ಮಾಡಿದ್ದು ಸ್ವಾಗತಾರ್ಹ.
ಇದರ ಹಿಂದಿನ ಪರಿಶ್ರಮ ಸ್ವಂತ ವಿಮುಕ್ತ ದೇವದಾಸಿ ತಾಯಂದಿರು, ಮಕ್ಕಳು ಹಾಗೂ ತಳ ಸಮುದಾಯದ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರು ಇವರಿಗೆ ಸಲ್ಲುತ್ತದೆ.
ಜನಪ್ರಿಯ ಯೋಜನೆಗಳ ಹೂರಣ ಬಿಬಿಎಂಪಿ ಬಜೆಟ್!
ತಳ ಸಮುದಾಯಗಳ ಅಧ್ಯಯನ ಕೇಂದ್ರದ ಸಂಶೋಧನಾ ಸಲಹೆಗಾರರಾದ ಡಾ.ಆರ್.ವಿ.ಚಂದ್ರಶೇಖರ್ ನೇತೃತ್ವದಲ್ಲಿ ದೇವದಾಸಿ ತಾಯಂದಿರ ಮತ್ತು ಮಕ್ಕಳ ಸಹಭಾಗಿತ್ವದಲ್ಲಿ ಅಧ್ಯಯನ ಮಾಡಿ, ರಾಜ್ಯದ 14 ಜಿಲ್ಲೆಗಳಲ್ಲಿ ಸಮಾಲೋಚನ ಸಭೆ ನಡೆಸಿ ದೇವದಾಸಿ ತಾಯಂದಿರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರಿಗೆ ಸಮಗ್ರ ಪುರ್ನವಸತಿ ಕಾಯ್ದೆ ರೂಪಿಸುವಂತೆ ಒತ್ತಾಯ ಮಾಡಿದ ಪ್ರತಿಫಲವಾಗಿ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ ಸಿಗುವಂತಾಗಿದೆ.
ಎಲ್ಲೆಲ್ಲಿ ಅಧ್ಯಯನ : ದೇವದಾಸಿ ಪದ್ಧತಿಗೆ ಒಳಪಟ್ಟ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಬಳ್ಳಾರಿ, ಬೀದರ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಒಟ್ಟು 14 ಜಿಲ್ಲೆಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ.
1982ರ ಕಾಯ್ದೆಯಲ್ಲಿ ದೇವದಾಸಿ ಪದ್ಧತಿ ನಿಷೇಧ ಕುರಿತು ಚರ್ಚಿಸಲಾಗಿದೆ ವಿನಃ ದೇವದಾಸಿಯರ ಪುನರ್ವಸತಿ ಬಗ್ಗೆ ಸರ್ಕಾರ ಗಮನಹರಿಸಿರುವುದಿಲ್ಲ. ಆದ್ದರಿಂದ ತಾಯಂದಿರ ಮತ್ತು ಮಕ್ಕಳಿಗಾಗಿ ವಿನೂತನವಾದ ಕರ್ನಾಟಕ ದೇವದಾಸಿ (ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ- 2018 ರಚಿಸಲಾಗಿದೆ.
ಬಜೆಟ್ : ನವ್ಯೋದಯಕ್ಕೆ ಒತ್ತು, ಐಟಿ ಬಿಟಿಗೆ ಹೆಚ್ಚೇನು ಸಿಕ್ಕಿಲ್ಲ
ಕಳೆದ ನಾಲ್ಕು ವರ್ಷಗಳಿಂದ ದೇವದಾಸಿ ತಾಯಂದಿರ, ಮಕ್ಕಳ ಸ್ಥಿತಿಗತಿ ಹಾಗೂ ಅವರ ಜೀವನ ನಿರ್ವಹಣೆ ಬಗ್ಗೆ ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ ಸಮಗ್ರವಾದ ಪುನರ್ವಸತಿ ರೂಪಿಸಲು ಕೇವಲ ಮಾರ್ಗದರ್ಶನ ನೀಡುವ ಹೊಣೆ ಹೊತ್ತಿತ್ತು.
ಸಮಗ್ರ ಪುನರ್ವಸತಿ ರೂಪಿಸುವ ಕಾಯ್ದೆಗೆ ಪ್ರಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ಚಾಲನೆ ನೀಡಲಾಯಿತು. ಸಂಪೂರ್ಣ ಜವಾಬ್ದಾರಿಯನ್ನು ಕುಷ್ಟಗಿ ವಿಮುಕ್ತ ದೇವದಾಸಿ ವೇದಿಕೆಯ ಅಧ್ಯಕ್ಷೆ ಪಡಿಯಮ್ಮ, ವೇದಿಕೆ ಸಂಚಾಲಕ ಚಂದಾಲಿಂಗ ಕಲಾಲಬಂಡಿ ಹೊತ್ತುಕೊಂಡು ಯಮನೂರಪ್ಪ ನೇತೃತ್ವದಲ್ಲಿ ಕಾಯ್ದೆ ಸಿದ್ಧಪಡಿಸಲಾಯಿತು.
ಕರಡಿನ ಶಿಫಾರಸುಗಳು
* ವಸತಿ ಇಲ್ಲದ ಶೇ.55ರಷ್ಟು ದೇವದಾಸಿಯರಿಗೆ ಪುನರ್ವಸತಿಗೆ ವಸತಿ ಕಲ್ಪಿಸಬೇಕು.
* ದೇವದಾಸಿಯರ ಅನಾಥ ಮಕ್ಕಳ ಶಿಕ್ಷಣ, ಉದ್ಯೋಗದ ಹೊಣೆ ಸರ್ಕಾರ ಹೊರಬೇಕು.
* ಮಕ್ಕಳ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಮೀಸಲಾತಿ
* ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವೀಕ್ಷಣಾ ದಳ, ದೇವದಾಸಿ ಸಹಾಯವಾಣಿ ಸ್ಥಾಪಿಸಬೇಕು
1982ರ ದೇವದಾಸಿ ನಿಷೇಧ ಕಾಯ್ದೆ ಹಿಂಪಡೆದು ಕರ್ನಾಟಕ ದೇವದಾಸಿ (ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ- 2018ನ್ನು ಅಂಗೀಕಾರ ಮಾಡಬೇಕು ಎಂದು ಕೋರಿ ಇತ್ತೀಚೆಗೆ ದೇವದಾಸಿ ತಾಯಂದಿರು, ಮಕ್ಕಳು ಹಾಗೂ ಕಾನೂನು ಶಾಲೆಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಮನವಿ ಸಲ್ಲಿಸಲಾಗಿತ್ತು.
'ಮದುವೆಗಾಗಿ ಪ್ರೋತ್ಸಾಹ ಧನ ನೀಡಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆಯಾಗಿತ್ತು. ಸರ್ಕಾರ ಈಡೇರಿಸಿದ್ದು ಸಂತಸ ತಂದಿದೆ. ಇನ್ನು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕಾಗಿದೆ. ಸಮಗ್ರವಾದ ಪುರ್ನವಸತಿ ಜಾರಿಯಾದಾಗ ಮಾತ್ರ ನಮಗೆ ನ್ಯಾಯ ಸಿಕ್ಕಂತಾಗುತ್ತದೆ' ಎಂದು ಯಮನೂರಪ್ಪ ಹೇಳಿದ್ದಾರೆ.