'ಉದ್ಯೋಗಕ್ಕಾಗಿ ಯಾರ ಕಾಲು ಹಿಡಿಯ ಬಾರದು'
ಬೆಂಗಳೂರು, ಫೆ. 11: ಉದ್ಯೋಗಕ್ಕಾಗಿ ಯಾರ ಕಾಲು ಹಿಡಿಯಬಾರದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಸಲಹೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ 'ಉದ್ಯೋಗದಾತರ ಅಗತ್ಯಕ್ಕೆ ಅನುಗುಣವಾಗಿ ಕೌಶಲ ತರಬೇತಿ' ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಸಾಕಷ್ಟು ಉದ್ಯೋಗವಕಾಶಗಳಿವೆ. ಆದರೆ ನಮ್ಮ ಯುವ ಜನರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ.
ಉದ್ಯೋಗಕ್ಕಾಗಿ ಯಾರ ಕಾಲು ಹಿಡಿಯಬಾರದು, ಉದ್ಯೋಗದ ಮಾಹಿತಿ ಒಂದೇ ವೇದಿಕೆಯಡಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕಾಲೇಜು ಮಟ್ಟದಲ್ಲೇ ಮಾಹಿತಿ ಒದಗಿಸುವ ಕೆಲಸಗಳಾಗುತ್ತಿವೆ. ಜತೆಗೆ, ಐಟಿಐ ಹಾಗೂ ಎಂಜನಿಯರಿಂಗ್ ಪಠ್ಯಕ್ರಮಗಳನ್ನು ಪರಿಷ್ಕರಿಸಿ ಸರಳಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಡಾ. ಅಶ್ವಥ್ ನಾರಾಯಣ ಭರವಸೆ ಕೊಟ್ಟಿದ್ದಾರೆ.
ಸಧ್ಯ ರಾಜ್ಯದಲ್ಲಿ ಸುಮಾರು 9 ಸಾವಿರ ಸ್ಟಾರ್ಟ್ಅಪ್ಗಳಿವೆ. ಮುಂದಿನ 3 ವರ್ಷಗಳಲ್ಲಿ ಸ್ಟಾರ್ಟ್ಅಪ್ಗಳ ಸಂಖ್ಯೆ 20 ಸಾವಿರಕ್ಕೆ ಏರಲಿದ್ದು, ಅದಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಭರವಸೆ ಕೊಟ್ಟಿದ್ದಾರೆ.
ಪ್ರತಿ ಪ್ರೌಢ ಶಾಲೆಗೊಬ್ಬ ಒಬ್ಬ ಸಮಾಲೋಚಕ
ರಾಜ್ಯ ಬಿಜೆಪಿ ಸರ್ಕಾರ ಯುವ ಸಬಲೀಕರಣ ಕೇಂದ್ರ ಆರಂಭಿಸಿದ್ದು, ಆ ಮೂಲಕ ಪ್ರತಿ ಪ್ರೌಢ ಶಾಲೆಯಲ್ಲೂ ಒಬ್ಬ ಸಮಾಲೋಚಕರನ್ನು ನಿಗದಿಪಡಿಸಿ, ಅವರಿಗೆ ಭತ್ಯೆ ನೀಡಲು ತೀರ್ಮಾನಿಸಿದೆ. ಪ್ರೌಢಶಾಲೆ ಮಟ್ಟದಲ್ಲೇ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಸಮಾಲೋಚಕರು ಮಾಹಿತಿ ನೀಡುತ್ತಾರೆ. ಇಂಟರ್ನ್ಶಿಪ್, ಅಪ್ರೆಂಟಿಸ್ಶಿಪ್, ಪ್ರಾಜೆಕ್ಟ್ ಹಾಗೂ ಮುಂದಿನ ವೃತ್ತಿ ಜೀವನದ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ. ವಿದೇಶಗಳಲ್ಲಿ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಔದ್ಯೋಗಿಕ ಮಾಹಿತಿ ನೀಡುವ ವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಪದವಿ ಮುಗಿಸಿ ಕೆಲಸಕ್ಕಾಗಿ ಕೌಶಲ್ಯ ಕಲಿಯುವವರಿದ್ದಾರೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಮುಂದಿನ ಉದ್ಯೋಗಕ್ಕೆ ಅಗತ್ಯ ಕೌಶಲ್ಯ ಕಲಿಯುಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಾ. ಸರೋಜಿನಿ ಮಹಿಷಿ ವರದಿ ಜಾರಿ ಬಗ್ಗೆ ತೀರ್ಮಾನ
ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಕರೆ ನೀಡಿರುವ ಬಂದ್ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಅಶ್ವಥ್ ನಾರಾಯಣ ಅವರು, ನಮ್ಮ ಸರ್ಕಾರ ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದೆ. ಅದಕ್ಕಿಂತ ಮುಖ್ಯವಾಗಿ ನಾವು ಭಾರತೀಯರು ಎಂಬುದನ್ನು ಮರೆಯವಂತಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಕಾರಣ ನಮ್ಮ ಔದಾರ್ಯತೆ, ಎಲ್ಲರನ್ನು ಪ್ರೀತಿಯಿಂದ ಒಪ್ಪಿಕೊಳ್ಳುವ ಗುಣ. ಈ ವೈವಿಧ್ಯತೆಯನ್ನು ನಾವು ಉಳಿಸಿಕೊಳ್ಳಬೇಕು. ನಾವಿಂದು ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದ್ದು, ಈ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುವುದಲ್ಲ ಎಂದಿದ್ದಾರೆ.
ಕೌಶಲ್ಯ ತರಬೇತಿ ಕೇಂದ್ರಗಳೊಂದಿಗೆ ಕೈ ಜೋಡಿಸಲಿ
5 ಟ್ರಿಲಿಯನ್ ಎಕಾನಮಿ ಸಾಧಿಸಲು ಹೆಚ್ಚಿನ ಕೈಗಾರಿಕೆಗಳು ಬರಬೇಕು, ಉದ್ಯೋಗ ಅವಕಾಶ ಹೆಚ್ಚಬೇಕು, ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಬಹಳ ಮುಖ್ಯ. ಉದ್ದಿಮೆಗಳಿಗೆ ಬೇಕಾದ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ಕೌಶಲ ತರಬೇತಿ ಕೇಂದ್ರಗಳ ಜತೆ ಕೈಗಾರಿಕೆಗಳು ಕೈ ಜೋಡಿಸಿದರೆ ಉತ್ತಮ. ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಐಟಿ, ಬಿಟಿ ವಲಯಗಳು ಉದ್ಯೋಗ ಸೃಷ್ಟಿಗೆ ಪೂರಕ ಕೌಶಲ್ಯ ತರಬೇತಿ ನೀಡಬಹುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ಅಭಿಪ್ರಾಯ ಪಟ್ಟಿದ್ದಾರೆ.
ವಿದೇಶಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ
ವಿದೇಶಿ ಮಾದರಿಯಲ್ಲಿ ಪ್ರಾಥಮಿಕ ಹಂತದಿಂದಲೇ ತರಬೇತಿ ಕೊಡಲು ಸರ್ಕಾರ ಮುಂದಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಸರ್ಕಾರದ ಯೋಜನೆ ಕುರಿತು ಮಾಹಿತಿ ನೀಡಿದ್ದು, ಅದರಿಂದಾಗಿ ನಿರುದ್ಯೋಗದ ಸಮಸ್ಯೆ ಸಾಕಷ್ಟು ನೀಗಲಿದೆ ಎಂದಿದ್ದಾರೆ. ಸೂಕ್ತ ತರಬೇತಿ, ಮಾಹಿತಿ ಕೊರತೆಯಿಂದಲೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಪ್ರಾಥಮಿಕ ಹಂತದಿಂದಲೇ ಉದ್ಯೋಗದ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ, ತಿಳಿವಳಿಕೆ ಕೊಡಲಿದೆ ಎಂದು ತಿಳಿಸಿದ್ದಾರೆ.