Karnataka Rains: ಕರಾವಳಿಗೆ ಭರ್ಜರಿ ಮಳೆ ಸುರಿಯಲು ಕ್ಷಣಗಣನೆ: 'ಆರೆಂಜ್' ಅಲರ್ಟ್
ಬೆಂಗಳೂರು, ಜೂನ್ 28: ದೇಶದ ಶೇಕಡಾ 80ರಷ್ಟು ಭಾಗಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ, ಕರ್ನಾಟಕ ಕೆಲವೆಡೆ ಮುನಿಸು ತೋರಿದಂತಿದೆ. ಹೀಗಾಗಿಯೇ ಒಳನಾಡಿನ ಜಿಲ್ಲೆಗಳಿಗೆ ಅಷ್ಟಾಗಿ ಮಳೆ ಆಗುತ್ತಿಲ್ಲ. ಈ ಮಧ್ಯೆ ಕರಾವಳಿಯಲ್ಲಿ ಭರ್ಜರಿ ಮಳೆ ಸುರಿಯಲು ಕ್ಷಣಗಣನೆ ಆರಂಭವಾಗಿದೆ.
ಕೆಲವು ವಾರಗಳಿಂದ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದು ಈಗ ಮುಂದಿನ ಐದು ದಿನಗಳ ವರೆಗೆ (ಜುಲೈ) ಮುಂದುವರಿಯಲಿದೆ. ಈ ಮಧ್ಯೆ ಜೂನ್ 28ರಂದು ಗುರುವಾರ ಮಾತ್ರ ಅತ್ಯಧಿಕ ಭಾರೀ ಮಳೆ ಸುರಿಯುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ.

ಮುನ್ಸೂಚನೆ ಪ್ರಕಾರ, ಗುರುವಾರ ಒಂದು ದಿನ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಉಡುಪಿ ಜಿಲ್ಲೆಗಳ ಹಲವೆಡೆ ಎಡೆಬಿಡದೇ ವರುಣಾರ್ಭಟ ಕಂಡು ಬರಲಿದೆ. ಈ ಸಂಬಂದ ನಾಳೆ ಒಂದು ದಿನ ಮೂರು ಜಿಲ್ಲೆಗಳಿಗೆ ' ಆರೆಂಜ್ ಅಲರ್ಟ್' ಎಚ್ಚರಿಕೆ ಘೋಷಿಸಲಾಗಿದೆ.
ನಂತರದ ನಾಲ್ಕು ದಿನಗಳವರೆಗೆ ಜುಲೈ 3ರ ತನಕ ಸಾಧಾರಣದಿಂದ ಉತ್ತಮವಾಗಿ ಮಳೆ ಬರಲಿದೆ. ಕೆಲವೆಡೆ ಹಗುರ ಮಳೆ ಕಂಡು ಬರಲಿದೆ. ಒಟ್ಟಾರೆ ಮುಂದಿನ ಒಂದುವಾರ ಕರಾವಳಿಯಲ್ಲಿ ಜಿಟಿ ಜಿಟಿ ಮಳೆ ಕಂಡು ಬರಲಿದೆ.
ಕರಾವಳಿ ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಭಾಗದಲ್ಲಿ ಗಾಳಿಯ ವೇಗ ಗಂಟೆಗೆ ಸುಮಾರು 50 ಕಿಲೋ ಮೀಟರ್ಗಿಂತಲೂ ಅಧಿಕವಾಗಿರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ರಾಜ್ಯದ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಸಹ ನಾಳೆ ಗುರುವಾರ ಒಂದು ದಿನ ಗುಡುಗು ಸಹಿತ ಬಾರೀ ಮಳೆಯ ಕಾರಣಕ್ಕೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನುಳಿದಂತೆ ಬಳ್ಳಾರಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ವಿಜಯನಗರ, ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಬೀಳಲಿವೆ.
ಅದೇ ರೀತಿ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆ ಬರಲಿದೆ. ಇನ್ನೂ ಹಲವೆಡೆ ತುಂತುರು ಇಲ್ಲವೆ ಚದುರಿದಂತೆ ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ಮಾಹಿತಿ ನೀಡಿದೆ.
ಕರಾವಳಿ ಭಾಗದಲ್ಲಿ 19 ಸೆಂ.ಮೀ. ಮಳೆ ದಾಖಲು
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಅದರ ಹಿಂದಿನ 24 ಗಂಟೆ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ 19 ಸೆಂಟಿ ಮೀಟರ್ ಮಳೆ ಯಾಗಿದೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ನಾನಾ ಕಡೆ, ಉಡುಪಿ ಜಿಲ್ಲೆ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಈ ಮೂಲಕ ಎಲ್ಲೆಡೆ ಮುಂಗಾರು ಮಳೆ ಸಕ್ರಿಯವಾಗಿದೆ.
ಉತ್ತರ ಕರ್ನಾಟಕ ಭಾಗದ ರೈತರ ಆಸೆ ಮಾತ್ರ ನಿರಾಶೆಯಾಗುತ್ತಿದೆ. ಇಂದು ಇಲ್ಲವೇ ನಾಳೆ ಮಳೆಯಾಗಲಿದೆ ಎಂದು ಬಿತ್ತನೆಗೆ ಸಜ್ಜು ಮಾಡಿಕೊಂಡು ಕೂತ ರೈತರು ಆಕಾಶದತ್ತ ನೋಡುತ್ತಿದ್ದಾರೆ. ಆದರೆ ಇದುವರೆಗೂ ಈ ಭಾಗಗಳಲ್ಲಿ ಹೇಳಿಕೊಳ್ಳುವಂತೆ ಭಾರಿ ಮಳೆ ಆಗಿಲ್ಲ. ಬಿತ್ತನೆಗೆ ಹೊಲ ಹದವಾಗುಷ್ಟು ಮಳೆ ಸಹ ಆಗಿಲ್ಲ ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications