Karnataka Rains: ವಾಯುಭಾರ ಕುಸಿತದ ಎಫೆಕ್ಟ್: 13 ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್
ಬೆಂಗಳೂರು, ಡಿಸೆಂಬರ್ 10: ಕರ್ನಾಟಕದಲ್ಲಿ ಚಳಿಗಾಲದಲ್ಲಿ ಮಳೆಗಾಲವು ಶುರುವಾದಂತಾಗಿದೆ. ತಕ್ಕಮಟ್ಟಿಗೆ ಬರುತ್ತಿದ್ದ ಹಿಂಗಾರು ಮಳೆ ಈ ಬಾರಿ ಹವಾಮಾನ ವೈಪರಿತ್ಯಗಳ ಕಾರಣದಿಂದ ಆಗಾಗ ವ್ಯಾಪಕವಾಗಿ ಸುರಿಯುತ್ತಿದೆ. ಸದ್ಯ ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯ ಆಗ್ನೆಯ ಭಾಗದಲ್ಲಿ ಮತ್ತೆ ವಾಯುಭಾರ ಸೃಷ್ಟಿಯಾಗಿದೆ. ಇದರಿಂದಾಗಿ ಡಿಸೆಂಬರ್ 14ರವರೆಗೆ ಭರ್ಜರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹವಾಮಾನದಲ್ಲಿ ಅಷ್ಟಾಗಿ ಬದಲಾವಣೆ ಆಗುವುದಿಲ್ಲ. ಮಬ್ಬು ವಾತಾವರಣ ಆಗಾಗ ಬಿಸಿಲು ಕಾಣಬಹುದು. ಅಷ್ಟೊತ್ತಿಗಾಗಲೆ ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿರುವ ಎರಡು ಪ್ರತ್ಯೇಕ ವಾಯುಭಾರತ ಕುಸಿತಗಳು ತೀವ್ರಗೊಂಡು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ.

ಈ ಕಾರಣದಿಂದ ಕರ್ನಾಟಕದ 13 ಜಿಲ್ಲೆಗಳಲ್ಲಿ ಎರಡು ದಿನ ಪ್ರತ್ಯೇಕ ದಿನಗಳಲ್ಲಿ ಭಾರೀ ಮಳೆ ಆರ್ಭಟ ಕಂಡು ಬರಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳ ಪೈಕಿ ಡಿಸೆಂಬರ್ 13 ರಂದು 08 ಜಿಲ್ಲೆಗಳಿಗೆ ಹಾಗೂ ಡಿಸೆಂಬರ್ 14ರಂದು 05 ಜಿಲ್ಲೆಗಳಿಗೆ ಗರಿಷ್ಠ 110 ಮಿಲಿ ಮಿಟರ್ ಮಳೆ ಆಗುವ ಸಾಧ್ಯತೆ ಇದ್ದು, ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಯಾವೆಲ್ಲ ಜಿಲ್ಲೆಗಳಿಗೆ ಭಾರೀ ಮಳೆ-ಯೆಲ್ಲೋ ಅಲರ್ಟ್
ಇಂದಿನಿಂದ 03 ದಿನ ವಾತಾವರಣದಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ನಂತರ ಡಿಸೆಂಬರ್ 13 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಹಾಗೂ ಡಿಸೆಂಬರ್ 14ರಂದು ಕೊಡಗು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಮತ್ತೆ ಚಿಕ್ಕಮಗಳೂರು ಜಿಲ್ಲೆಗಳಿಗೆ ಗುಡುಗು ಸಹಿತ ಧಾರಾಕಾರ ಮಳೆಯ ಸಂಭವ ಇದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಮುಂದಿನ ಒಂದು ದಿನದಲ್ಲಿ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ ಒಣಹವೆ ಎದುರಿಸುತ್ತಿರುವ ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಗದಗ, ಧಾರವಾಡ ಇನ್ನಿತರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಒಳನಾಡು ಪ್ರದೇಶಗಳಿಗಿಂತ ಹೆಚ್ಚಾಗಿ ಪ್ರತ್ಯೇಕ ಸ್ಥಳಗಳಲ್ಲಿ ತಕ್ಕ ಮಟ್ಟಿನ ಮಂಜಿನ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಹವಾಮಾನ ಮುನ್ಸೂಚನೆ
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಭಾಗಶಃ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ವಿವಿಧ ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ಮಂಜು ಮುಸುಕಿದ ವಾತವರಣ ಕಂಡು ಬರುವ ಸಾಧ್ಯತೆ ಇದ್ದು, ಚಳಿ ಹೆಚ್ಚಾಗಬಹುದು. ನಗರದ ಗರಿಷ್ಠ ತಾಪಮಾನ 30 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಇನ್ನೂ ಬೆಂಗಳೂರಿನಲ್ಲಿ ಈ ವಾರಾಂತ್ಯಕ್ಕೆ ಬಿಸಲಿನ ಪ್ರಮಾಣ ಕ್ರಮೇಣ ಕಡಿಮೆ ಆಗಿ, ಜೋರು ಮಳೆ ಬರುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಹವಾಮಾನ ಇಲಾಖೆಯು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಕೆಲವು ದಿನಗಳ ಹಿಂದೆ ಬೀಳುತ್ತಿದ್ದ ಮಂಜಿನ ಪ್ರಮಾಣ ಸದ್ಯಕ್ಕೆ ಕಡಿಮೆ ಆಗಿದ್ದು, ಈ ಚಂಡಮಾರುತದ ಅಬ್ಬರ ಕಡಿಮೆ ಆದ ಬಳಿಕ ಡಿಸೆಂಬರ್ ಅಂತ್ಯಕ್ಕೆ ಮತ್ತೆ ನೀಲಿ ಆಕಾಶ ಹಾಗೂ ಬೆಳಗ್ಗೆ ಸಂಜೆ ವಿಪರೀತ ಚಳಿ-ಮಂಜು ನಿರ್ಮಾಣವಾಗುವ ಸಾಧ್ಯತೆ ಇದೆ.












Click it and Unblock the Notifications