ಕರ್ನಾಟಕಕ್ಕೆ ಜೂನ್ 2ರಂದು ಅಧಿಕೃತ ಮುಂಗಾರು ಪ್ರವೇಶ ಸಾಧ್ಯತೆ
ಬೆಂಗಳೂರು, ಮೇ 24: ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ಜೂನ್ 5ಕ್ಕೆ ಕರ್ನಾಟಕ ಪ್ರವೇಶಿಸಬೇಕಿದ್ದ ಮುಂಗಾರು ಜೂನ್ 2ರಂದೇ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮೊದಲು ಹವಾಮಾನ ಇಲಾಖೆ ಜೂನ್ 5ರಂದು ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದವು. ಆದರೆ ಇತ್ತೀಚೆಗಿನ ವರದಿಗಳ ಅನ್ವಯ ಮೂರು ದಿನಗಳ ಮೊದಲೇ ಅಂದರೆ ಜೂನ್ 2ರಂದೇ ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡಲಿವೆ.
ಬೆಂಗಳೂರಲ್ಲಿ ಜೋರು ಮಳೆ, ಇನ್ನೂ ನಾಲ್ಕು ದಿನ ಛತ್ರಿ ಮರೆಯುವಂತಿಲ್ಲ
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣದ ಒಳನಾಡಿನಲ್ಲಿ ಮತ್ತೆ ಮಳೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇ 26 ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಹೇಳಿದೆ.
ನೈಋತ್ಯ ಮಾನ್ಸೂನ್ ಈ ಬಾರಿ ಮೇ 29 ರಂದು ಅಥವಾ ಮೇ 30ರಂದು ಕೇರಳ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 2ರಂದು ಪ್ರವೇಶ ಮಾಡಲಿವೆ. ಅಂತೆಯೇ ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇನ್ನು ಪ್ರಸಕ್ತ ಸಾಲಿನಲ್ಲಿ ಮಾನ್ಸೂನ್ ಗೂ ಮುನ್ನ ಅತ್ಯುತ್ತಮ ಮಳೆಯಾಗಿದ್ದು, ಇದು ಈ ವರೆಗೂ ದಾಖಲಾದ ಅತ್ಯುತ್ತಮ ಮಾನ್ಸೂನ್ ಪೂರ್ವ ಮಳೆ ಎಂದು ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿವೀಕ್ಷಣಾ ಕೇಂದ್ರ ನೀಡಿರುವ ಮಾಹಿತಿಯನ್ವಯ ಮೇ 23ರವರೆಗೂ ರಾಜ್ಯದಲ್ಲಿ 101.6 ಮಿ.ಮೀ ಮಳೆಯಾಗಿದೆ. ಮಾರ್ಚ್ 1 ರಿಂದ ಮೇ 23 ರವರೆಗೆ 101.6 ಮಳೆಯಾಗಿದೆ. ಮಾರ್ಚ್ 23ರಿಂದ ಇಲ್ಲಿಯವರೆಗೂ 140.87 ಮಿ,ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ 31.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 32.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.6 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಕನಿಷ್ಠ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನೂ ಮೇ 26ರವರೆಗೆ ರಾಜ್ಯಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.