ಮುಸ್ಲಿಮರಿಗೆ ಅವಮಾನ, ಈಶ್ವರಪ್ಪ ಕ್ಷಮೆಯಾಚನೆಗೆ ಇಮಾಮ್ ಕೌನ್ಸಿಲ್ ಆಗ್ರಹ
ಮುಸ್ಲಿಮರು ಬಿಜೆಪಿ ಕಛೇರಿಯ ಕಸ ಗುಡಿಸಿದರೆ ಟಿಕೇಟು ಕೊಡುತ್ತೇವೆ ಎಂದು ಹೇಳಿದ್ದ ಈಶ್ವರಪ್ಪ ಹೇಳಿಕೆ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೆಂಗಣ್ಣಿಗೆ ಗುರಿಯಾಗಿದೆ.
ಬೆಂಗಳೂರು, ಮಾರ್ಚ್ 30: ಮುಸ್ಲಿಮರು ಬಿಜೆಪಿ ಕಛೇರಿಯ ಕಸ ಗುಡಿಸಿದರೆ ಟಿಕೇಟು ಕೊಡುತ್ತೇವೆ ಎಂದು ಹೇಳಿದ್ದ ಈಶ್ವರಪ್ಪ ಹೇಳಿಕೆ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೆಂಗಣ್ಣಿಗೆ ಗುರಿಯಾಗಿದೆ.
ಈಶ್ವರಪ್ಪ ಹೇಳಿಕೆ ಖಂಡನೀಯವಾಗಿದ್ದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಹೇಳಿರುವ ಕೌನ್ಸಿಲ್, ಇದು ಒಟ್ಟು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು ಕೂಡಲೆ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
ನಿನ್ನೆ ಬೆಂಗಳೂರಿನಲ್ಲಿ ಡೆಕ್ಕನ್ ಹೌಸ್ನಲ್ಲಿಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆ ನಡೆಯಿತು. ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನ ಉಸ್ಮಾನ್ ಬೇಗ್ ರಶಾದಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ಹನೀಫ್ ಅಹ್ರಾರ್ ಗೋವ ಇವರ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.[ಕಾಸರಗೋಡು ಮದ್ರಸಾ ಶಿಕ್ಷಕನ ಹತ್ಯೆ: ಮೂವರ ಬಂಧನ]
ರಾಜ್ಯಾಧ್ಯಕ್ಷರ ಆಯ್ಕೆ
ಇದೇ ಸಭೆಯಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮೌಲಾನ ಯೂಸುಫ್ ರಶಾದಿ ಗುಲ್ಬರ್ಗ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಾಫರ್ ಸ್ವಾದಿಖ್ ಫೈಝಿ ಆಯ್ಕೆ ಮಾಡಲಾಗಿದೆ.
ಇತರ ಪದಾಧಿಕಾರಿಗಳು
ಉಪಾಧ್ಯಕ್ಷರಾಗಿ ಮೌಲಾನ ಇಸ್ಮಾಯಿಲ್ ನದ್ವಿ ಉಡುಪಿ ಮತ್ತು ಮೌಲಾನ ಮುಫ್ತಿ ಕಲೀಮುದ್ದೀನ್ ಖಾಸಿಮಿ ಬಿಜಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಜಾಫರ್ ಸ್ವಾದಿಖ್ ಫೈಝಿ, ಕಾರ್ಯದರ್ಶಿಗಳಾಗಿ ಮೌಲಾನ ಅತೀಕುರ್ರಹ್ಮಾನ್ ಅಶ್ರಫಿ ಗುಲ್ಬರ್ಗ, ಮೌಲಾನ ರಫೀಕ್ ದಾರಿಮಿ, ಕೋಶಾಧಿಕಾರಿಯಾಗಿ ಮೌಲಾನ ಸೈಫುಲ್ಲಾ ರಶಾದಿ ಬೆಂಗಳೂರು ಆಯ್ಕೆಯಾಗಿದ್ದಾರೆ.[ಭಟ್ಕಳದಲ್ಲಿ ನಡೆಯಲಿದೆ ರಾಜ್ಯದ ಮೊದಲ 'ಘರ್ ವಾಪಸಿ'!]
ಈಶ್ವರಪ್ಪ ಮುಸ್ಲಿಮರಿಗೆ ಅವಮಾನ
ಸದನದಲ್ಲಿ ಮೇಲ್ಮನೆ ಪ್ರತಿಪಕ್ಷ ನಾಯಕ ಈಶ್ವರಪ್ಪ "ಮುಸ್ಲಿಮರು ಬಿಜೆಪಿ ಕಛೇರಿಯ ಕಸ ಗುಡಿಸಿದರೆ ಟಿಕೇಟು ಕೊಡುತ್ತೇವೆ" ಎಂಬ ಹೇಳಿಕೆ ನೀಡಿದ್ದು ಖಂಡನೀಯ. ಇದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಹೇಳಿಕೆ ಒಟ್ಟು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು ಕೂಡಲೆ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಇಮಾಮ್ಸ್ ಕೌನ್ಸಿಲ್ ಆಗ್ರಹಿಸುತ್ತದೆ.
ಧರ್ಮಗುರು ಹತ್ಯೆಗೆ ಖಂಡನೆ
ಇನ್ನು ಸಭೆಯಲ್ಲಿ ಕಾಸರಗೋಡಿನ ಗ್ರಾಮಾಂತರ ಪ್ರದೇಶದ ಮಸೀದಿಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಕೊಡಗು ಮೂಲದ ರಿಯಾಝ್ ಮೌಲವಿ ಹತ್ಯೆಯನ್ನು ಖಂಡಿಸಲಾಯಿತು. ಮಸೀದಿಗೆ ನುಗ್ಗಿ ಸಂಘಪರಿವಾರ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಹಾಗೂ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಕೌನ್ಸಿಲ್ ಒತ್ತಾಯಿಸಿದೆ.
ಘರ್ ವಾಪ್ಸಿ ಕೋಮುಗಲಭೆ ಯತ್ನ
ಭಟ್ಕಳದಲ್ಲಿ 'ಘರ್ ವಾಪ್ಸಿ' ಕಾರ್ಯಕ್ರಮ ನಡೆಸುವುದಾಗಿ ಶ್ರೀರಾಮ ಸೇನೆಯು ಹೇಳಿಕೆ ನೀಡಿದ್ದು, ಈ ಮೂಲಕ ಶಾಂತಿ ಸಾಮರಸ್ಯವನ್ನು ಕದಡಿ ಕೋಮುಗಲಭೆಗೆ ಯತ್ನಿಸುತ್ತಿದೆ. ಸಂವಿಧಾನ ವಿರೋಧಿಯಾದ ಈ ರೀತಿಯ ಕಾರ್ಯಕ್ರಮಗಳಿಗೆ ಸರಕಾರವು ಅನುಮತಿ ನೀಡಬಾರದು. ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಇಂತಹಾ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಮಾಮ್ಸ್ ಕೌನ್ಸಿಲ್ ಹೇಳಿದೆ.