ಐಎಂಎ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು
ಬೆಂಗಳೂರು, ಜುಲೈ 29 : ಐಎಂಎ ಹಗರಣ ಗಣ್ಯ ವ್ಯಕ್ತಿಗಳ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಇಡಿ ವಶದಲ್ಲಿರುವ ಮನ್ಸೂರ್ ಖಾನ್ ಹಲವು ಗಣ್ಯರು ಲಂಚ ಪಡೆದಿರುವ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡಿದ್ದಾನೆ.
ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜಾರಿ ನಿರ್ದೇಶನಾಯದ ವಶದಲ್ಲಿದ್ದಾನೆ. ಮತ್ತೊಂದು ಕಡೆ ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಈ ಹಗರಣದ ತನಿಖೆಯಯನ್ನು ಕೈಗೊಂಡಿದೆ.
ಇಡಿ ವಶದಲ್ಲಿರುವ ಮನ್ಸೂರ್ ಖಾನ್ 9 ಐಪಿಎಸ್ ಅಧಿಕಾರಿಗಳು ಮತ್ತು ಹಲವು ರಾಜಕೀಯ ನಾಯಕರಿಗೆ ಲಂಚ ನೀಡಿರುವ ಕುರಿತು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಇದರಿಂದಾಗಿ ಹಗರಣದ ಜಾಲ ಎಲ್ಲೆಲ್ಲಿ ಹಬ್ಬಿದೆ? ಎಂಬ ಬಗ್ಗೆ ವಿವರವಾದ ತನಿಖೆ ನಡೆಯುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಕೆಲಸ ಮಾಡಿದ್ದ ಉತ್ತರ ಪ್ರದೇಶ ಮೂಲದ ಐಪಿಎಸ್ ಅಧಿಕಾರಿಯೊಬ್ಬರು ಮನ್ಸೂರ್ ಖಾನ್ನಿಂದ ಲಂಚ ಪಡೆದಿದ್ದರು. ದೆಹಲಿಯಲ್ಲಿ ಅವರು ಕಟ್ಟಿಸುತ್ತಿದ್ದ ಮನೆಗೆ ಫರ್ನಿಚರ್ಗಳನ್ನು ಲಂಚದ ರೂಪದಲ್ಲಿ ನೀಡಲಾಗಿತ್ತು.
ಸುಮಾರ 60 ಲಕ್ಷ ರೂ. ಲಂಚ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ವಿಚಾರಣೆಗೆ ಹಾಜರಾಗಲು ಇಡಿ ಅಧಿಕಾರಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ. ಕಂದಾಯ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಸಹ ಹಗರಣ ಮುಚ್ಚಿಹಾಕಲು ಲಂಚ ಪಡೆದಿದ್ದರು.
ರಾಜ್ಯದ ಕೆಲವು ಪ್ರಮುಖ ರಾಜಕೀಯ ನಾಯಕರ ಹೆಸರನ್ನು ಮನ್ಸೂರ್ ಖಾನ್ ಹೇಳಿದ್ದಾನೆ. ಇವರಲ್ಲಿ ಮಾಜಿ ಸಿಎಂ ಮತ್ತು ಮಾಜಿ ಉಪಮುಖ್ಯಮಂತ್ರಿಗಳು ಸೇರಿದ್ದಾರೆ. ರಾಜಕೀಯ ನಾಯಕರಿಗೂ ಇಡಿ ವಿಚಾರಣೆಗಾಗಿ ಸಮನ್ಸ್ ನೀಡಲಿದೆ.
ಜುಲೈ 19ರಂದು ದುಬೈನಿಂದ ಭಾರತಕ್ಕೆ ಬಂದ ಮನ್ಸೂರ್ ಖಾನ್ ಇಡಿ ವಶದಲ್ಲಿದ್ದಾನೆ. ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಖಾನ್ರನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ.












Click it and Unblock the Notifications