ಅಕ್ರಮ ಗಣಿಗಾರಿಕೆ ಕೇಸ್; ಇಬ್ಬರು ಅಧಿಕಾರಿಗಳ ಆರೋಪಮುಕ್ತ ಆದೇಶ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು. ಅ.7. ರಾಜ್ಯದಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳು ಮತ್ತು ಗಣಿ ಕಂಪನಿಯ ಅಧಿಕಾರಿಗಳನ್ನು ಆರೋಪ ಮುಕ್ತಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ 2016ರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ನಿವೃತ್ತ ಅಧಿಕಾರಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ರಿವಿಷನ್ ಪಿಟಿಷನ್ ವಜಾಗೊಳಿಸಿ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಬಳ್ಳಾರಿಯ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಜೈನ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿತೇಶ್ ಮಿಲಪ್ಚಂದ್ ಜೈನ್, ಇಬ್ಬರೂ ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಎನ್. ವಿಶ್ವನಾಥನ್ ಮತ್ತು ಶಮೀಮ್ ಭಾನು, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿವೃತ್ತ ಉಪನಿರ್ದೇಶಕ ಎಸ್.ಪಿ.ರಾಜು; ಮತ್ತು ಸಂಡೂರು ಪೊಲೀಸ್ ಠಾಣೆಯ ಆಗಿನ ಪೊಲೀಸ್ ವೃತ್ತ ನಿರೀಕ್ಷಕರು ರಮಾಕಾಂತ್ ವೈ.ಹುಲ್ಲಾರ್ ಅವರ ಬಿಡುಗಡೆಯನ್ನು ಸಿಬಿಐ ಪ್ರಶ್ನಿಸಿತ್ತು.
ವಾದ-ಪ್ರತಿವಾದ ಆಲಿಸಿದ ಬಳಿಕ ವಿಶೇಷ ನ್ಯಾಯಾಲಯವು, ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಮತ್ತಷ್ಟು ತನಿಖೆ ಮುಂದುವರಿಸಲು ಆರೋಪಿಗಳ ವಿರುದ್ಧ ಯಾವುದೇ ಸಾಮಗ್ರಿಗಳು / ಸಾಕ್ಷ್ಯಾಧಾರಗಳಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಮತ್ತು ಆದ್ದರಿಂದ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಿದೆ. ಆ ಆದೇಶ ಸರಿಯಾಗಿಯೇ ಇದೆ, ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ:
1980-2010ರ ಅವಧಿಯಲ್ಲಿ ಬೆಂಗಳೂರು, ಬಳ್ಳಾರಿ, ಹೊಸಪೇಟೆ ಮತ್ತು ಇತರೆಡೆಗಳಲ್ಲಿ ವಂಚನೆ, ಕಬ್ಬಿಣದ ಅದಿರು ಕಳ್ಳತನ, ಕ್ರಿಮಿನಲ್ ಅತಿಕ್ರಮಣ, ಗಡಿ ಬದಲಾವಣೆ ಮತ್ತು ಕ್ರಿಮಿನಲ್ ಅಪರಾಧಗಳನ್ನು ಎಸಗಲು ರೂಪಿಸಲಾದ ಕ್ರಿಮಿನಲ್ ಸಂಚಿನಲ್ಲಿ ಅವರು ಭಾಗಿಗಳಾಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಅಲ್ಲದೆ ಅಧಿಕಾರಿಗಳು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ದುರ್ನಡತೆ ತೋರಿದ್ದಾರೆಂದು ಸಹ ಹೇಳಿತ್ತು.
ಆದರೆ ಸಿಬಿಐ ವಿಶೇಷ ನ್ಯಾಯಾಲಯ 2016ರ ಜನವರಿ 30ರಂದು ಈ ಎಲ್ಲ ಅಧಿಕಾರಿಗಳ ವಿರುದ್ಧದ ಎಲ್ಲಾ ಆರೋಪಗಳಿಂದ ಅವರನ್ನು ಮುಕ್ತಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು.